ಕುರುಬ ಸಮುದಾಯವನ್ನು ST ಗೆ ಸೇರಿಸಲು ಮತ್ತೆ ಕೇಂದ್ರಕ್ಕೆ ಶಿಫಾರಸ್ಸು: ಸಿ.ಎಂ  ಸಿದ್ದರಾಮಯ್ಯ ಭರವಸೆ

ಕಲ್ಬುರ್ಗಿ ಸೆಪ್ಟಂಬರ್, 17,2025 (www.justkannada.in): ಕುರುಬ ಸಮುದಾಯವನ್ನು ಎಸ್ ಟಿಗೆ ಸೇರಿಸಲು ಮತ್ತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಕುರುಬಗೊಂಡ ಸಂಘ ಮತ್ತು ಸಂಗೊಳ್ಳಿ ರಾಯಣ್ಣ ಯುವಕ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಯಣ್ಣ ಅವರ ಮೂರ್ತಿ ಅನಾವರಣಗೊಳಿಸಿ, ನಗರ ಸಿಟಿ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣರ ಹೆಸರು ನಾಮಕರಣ ಮಾಡಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಸಮೀಕ್ಷೆ ವೇಳೆ ಕುರುಬ ಅಂತಲೇ ಜಾತಿ ಹೆಸರನ್ನು ಬರೆಸಿದರೆ ಮಾತ್ರ ಸಮಾಜದ ಸ್ಥಿತಿ ಗತಿಯ ಸ್ಪಷ್ಟ ಚಿತ್ರಣ ಮತ್ತು ಸಾಮಾಜಿಕ‌ ಅನುಕೂಲಗಳು ಸಿಗುತ್ತವೆ ಎಂದು  ಕರೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಜಾತಿ ಸಮುದಾಯಗಳ ಸ್ಪಷ್ಟ ಸ್ಥಿತಿ ಅರಿಯಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.

ಕುರುಬ ಸಮುದಾಯವನ್ನು ST ಗೆ ಸೇರಿಸಲು ಹಿಂದೆಯೇ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದನ್ನು ಕೇಂದ್ರ ಸರ್ಕಾರ ವಾಪಾಸ್ ಕಳುಹಿಸಿದೆ. ಹೀಗಾಗಿ ಮತ್ತೆ ಹೆಚ್ಚುವರಿ ಅಂಕಿ ಅಂಶಗಳು ಮತ್ತು ದಾಖಲೆಗಳ ಸಮೇತ ಕೇಂದ್ರಕ್ಕೆ ಮತ್ತೆ ಶಿಫಾರಸ್ಸು ಕಳುಹಿಸಲಾಗುವುದು ಎಂದು ಸಿ.ಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ರಾಯಣ್ಣ ಜನ್ಮ ದಿನ ಸ್ವಾತಂತ್ರ್ಯೋತ್ಸವದ ಆಗಸ್ಟ್ 15. ರಾಯಣ್ಣರನ್ನು ಬ್ರಿಟಿಷರು ಗಲ್ಲಿಗೆ ಏರಿಸಿದ್ದು ಜನವರಿ 26ರ ಗಣರಾಜ್ಯೋತ್ಸವ ದಿನದಂದು. ಇದು ಕಾತಾಳೀಯ ಆದರೂ ಸತ್ಯವಾದ ಸಂಗತಿ ಎಂದರು. ಸ್ವಾತಂತ್ರ್ಯ ಸೇನಾನಿ ರಾಯಣ್ಣ ಯುವಕರಿಗೆ ಪ್ರೇರಣೆ ಆಗಿದ್ದಾರೆ ಎಂದರು.‌

ಶೇ7 ರಷ್ಟಿರುವ ಕುರುಬ ಸಮುದಾಯ ಶಿಕ್ಷಣದಲ್ಲಿ ಬಹಳ ಹಿಂದುಳಿದಿದೆ. ಆದ್ದರಿಂದ ಸಮುದಾಯದ ಪ್ರತಿಯೊಬ್ಬರೂ ವಿದ್ಯಾವಂತರಾಗುವುದು ಅವಶ್ಯವಾಗಿದೆ. ಸಮುದಾಯವನ್ನು ಶಿಕ್ಷಣ ಕ್ಷೇತ್ರದಲ್ಲಿ ಉನ್ನತೀಕರಿಸಬೇಕಿದೆ ಎಂದರು.

ಇಡೀ ರಾಜ್ಯ ಪ್ರವಾಸ ಮಾಡಿ ಕನಕ ಗುರುಪೀಠ ಸ್ಥಾಪಿಸಿದೆವು. ಪೀಠದ ಉದ್ದೇಶ, ಎಲ್ಲಾ ಶೋಷಿತ ಸಮುದಾಯಗಳಿಗೂ ಶಿಕ್ಷಣ ಕೊಡುವುದೇ ಆಗಿತ್ತು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ನಾರಾಯಣಗುರು ಇಬ್ಬರೂ ಶಿಕ್ಷಣದಿಂದ ಸ್ವತಂತ್ರ ರಾಗಬಹುದು, ಸ್ವಾಭಿಮಾನಿಗಳಾಗಬಹುದು ಎಂದು ಹೇಳಿದ್ದಾರೆ. ಜಾತಿ ವ್ಯವಸ್ಥೆಯ ಕಾರಣಕ್ಕೆ ಅಸಮಾನತೆ ಸೃಷ್ಟಿಯಾಗಿದೆ ಎಂದರು.

ಜಾತಿ ರಹಿತ, ವರ್ಗ ರಹಿತ ಸಮಾಜ ಆಗಬೇಕು ಎನ್ನುವುದು ಬುದ್ದ, ಬಸವ, ಅಂಬೇಡ್ಕರ್ ಎಲ್ಲರ ಆಶಯವಾಗಿತ್ತು. ನಮ್ಮ ಸರ್ಕಾರ ಕೂಡ ಅಸಮಾನತೆ ಹೋಗಲಾಡಿಸಲು ಹತ್ತು ಹಲವು ಭಾಗ್ಯಗಳನ್ನು ನೀಡಿ, ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಎಂದರು.

ಆರ್ಥಿಕ ಚಲನೆ ಇಲ್ಲದ ಸಮಾಜ ಪ್ರಗತಿ ಕಾಣಲು ಸಾಧ್ಯವಿಲ್ಲ. ಆದ್ದರಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಿತ ಸಮುದಾಯಗಳು ಚಲನೆ ಕಂಡುಕೊಳ್ಳಬೇಕು. ಆಗಲೇ ಬುದ್ದ, ಬಸವ, ಅಂಬೇಡ್ಕರ್ ಕನಸು ನನಸಾಗುತ್ತದೆ. ಈ ಕನಸು ನನಸಾಗುವ ಕಾರಣಕ್ಕೇ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೇ ಹಿಂದುಳಿದವರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿಸಿದ್ಧೆ ಎಂದರು.

ರಾಜ್ಯ ಸುತ್ತಿ ಮಠ ಮಾಡಿದ್ದು ನಾವು.

ಇಡೀ ರಾಜ್ಯ ಸುತ್ತಿ ಮಠ ಮಾಡಿದ್ದು ನಾವು. ಆದರೆ ಈಗ ಕೆಲವು ಡೋಂಗಿ ಜನ‌ ನಾವೇ ಮಠ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರ ಮಾತು ನಂಬಬೇಡಿ. ತೀರ್ಮಾನ ನಿಮಗೆ ಬಿಡ್ತೀನಿ. ನಿಮ್ಮ ಪ್ರೀತಿ, ವಿಶ್ವಾಸ ಸದಾ ನನ್ನ ಮೇಲೆ ಇರಲಿ. ನಾನು ರಾಜಕಾರಣ ಮಾಡೋದೇ ಸಾಮಾಜಿಕ ನ್ಯಾಯಕ್ಕಾಗಿ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಸಾಮಾಜಿಕ ನ್ಯಾಯಕ್ಕಾಗಿಯೇ ಕೆಲಸ ಮಾಡ್ತೀನಿ. ನಾವೆಲ್ಲರೂ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಅವರು ನಡೆದ ದಾರಿಯಲ್ಲೇ ನಡೆಯೋಣ ಎಂದು ಕರೆ ನೀಡಿದರು.

Key words: CM Siddaramaiah, recommend, Center, Kuruba community, ST