Saturday, August 8, 2026

BDA Apartments

Home Front Page 35 ವರ್ಷಗಳ ಹೋರಾಟದ ಫಲದಿಂದ ಒಳಮೀಸಲಾತಿ ಜಾರಿ- ಸಚಿವ ಕೆ.ಎಚ್ ಮುನಿಯಪ್ಪ

35 ವರ್ಷಗಳ ಹೋರಾಟದ ಫಲದಿಂದ ಒಳಮೀಸಲಾತಿ ಜಾರಿ- ಸಚಿವ ಕೆ.ಎಚ್ ಮುನಿಯಪ್ಪ

ದಾವಣಗೆರೆ,ಸೆಪ್ಟಂಬರ್,13,2025 (www.justkannada.in): 35 ವರ್ಷಗಳ ಹೋರಾಟದ ಫಲವಾಗಿ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಸಿಕ್ಕಿದೆ ಎಂದು ಆಹಾರ ಇಲಾಖೆ ಸಚಿವ ಕೆ.ಎನ್ ಮುನಿಯಪ್ಪ ತಿಳಿಸಿದರು.

ದಾವಣಗೆರೆಯಲ್ಲಿ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಸುಪ್ರೀಂ ಕೋರ್ಟ್ ಒಳಮೀಸಲಾತಿ ಪರ ತೀರ್ಪು ನೀಡಿದ್ದೇ ತಡ ರಾಜ್ಯ ಸರ್ಕಾರ ಒಳ ಮೀಸಲಾತಿ ಪರ ಸೂಕ್ತ ನಿರ್ಧಾರ ತೆಗೆದುಕೊಂಡಿದೆ.  ಎಸ್ ಸಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಅನ್ಯಾಯವಾಗದಂತೆ ಸೂಕ್ತ ನಿರ್ಧಾರವನ್ನ ನಮ್ಮ ಸರ್ಕಾರ ತೆಗೆದುಕೊಂಡಿದೆ. ರಾಜ್ಯದಲ್ಲಿ ಶಾಶ್ವತ ಪರಿಷತ್ ಆಯೋಗ ಜಾರಿಯಾಗಲಿದೆ. ಜನಸಂಖ್ಯೆ  ಹೆಚ್ಚಿರುವ ಸಮುದಾಯಕ್ಕೆ ಮೀಸಲಾತಿ  ಹೆಚ್ಚಿಸುವ ಅವಕಾಶ ಸಿಗುತ್ತದೆ ಎಂದರು.

ಸುಪ್ರೀಂಕೋರ್ಟ್ ಒಳಮೀಸಲಾತಿ ಜಾರಿ ಬಗ್ಗೆ ಐತಿಹಾಸಿಕ ತೀರ್ಪು ನೀಡಿದ ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೆ ಆ ವೇಳೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಒಳಮೀಸಲಾತಿ ಪರವಾಗಿ ಆಶಯ ವ್ಯಕ್ತಪಡಿಸಿದರು. ಸಚಿವರಾದ ಶಿವರಾಜ್ ತಂಗಡಗಿ, ಹೆಚ್.ಸಿ ಮಹದೇವಪ್ಪ, ಆರ್.ಬಿ ತಿಮ್ಮಾಪುರ , ಪ್ರಿಯಾಂಕಾ ಖರ್ಗೆ ಸೇರಿದಂತೆ ಎಲ್ಲಾ  ಸಚಿವರು ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೆ ಬೆಂಬಲ ಸೂಚಿಸಿದ್ದಾರೆ. ಒಳಮೀಸಲಾತಿ ಜಾರಿಗೆ ಎಲ್ಲರೂ ಸೇರಿ ಒಗ್ಗಟ್ಟಿನಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಒಳ ಮೀಸಲಾತಿ ಜಾರಿ ಬಗ್ಗೆ ಬಿಜೆಪಿಯವರು ವ್ಯಂಗ್ಯವಾಡುತ್ತಿದ್ದಾರೆ.  ಸದಾಶಿವ ಆಯೋಗದ ವರದಿ ಬಗ್ಗೆ  ಬಿಜೆಪಿ ಏಕೆ ಮೌನ ವಹಿಸಿತ್ತು. ಅತಿ ಹಿಂದುಳಿದ ಸಮುದಾಯಕ್ಕೆ ಸಿಎಂ ಸಿದ್ದರಾಮಯ್ಯ  ನ್ಯಾಯ ಒದಗಿಸಲಿದ್ದಾರೆ ಎಂದು ಸಚಿವ  ಕೆ.ಎಚ್ ಮುನಿಯಪ್ಪ ತಿಳಿಸಿದರು.

Key words:  Reservation,  Enforcement , 35 years, struggle, Minister, KH Muniyappa