ಗಾಂಧೀಜಿಯವರ ಕನಸು ಗ್ರಾಮ ಸ್ವರಾಜ್ಯ : ಶಾಸಕ ದರ್ಶನ್ ಪುಟ್ಟಣ್ಣಯ್ಯ

ಮಂಡ್ಯ,ಸೆಪ್ಟಂಬರ್,13,2025 (www.justkannada.in): ದೇಶ ಅಭಿವೃದ್ಧಿ ಹೊಂದಬೇಕೆಂದರೆ ದೇಶದಲ್ಲಿನ ಗ್ರಾಮಗಳು ಅಭಿವೃದ್ಧಿ ಹೊಂದಬೇಕು ಎಂಬುದು ಗಾಂಧೀಜಿಯವರ ಪರಿಕಲ್ಪನೆ ಆಗಿತ್ತು. ಗ್ರಾಮ ಸ್ವರಾಜ್ಯ ಎನ್ನುವಂತಹದ್ದು ಗಾಂಧೀಜಿಯವರ ಕನಸು ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.

ಇಂದು ರೈತ ಸಂಘ, ಪುಟ್ಟಣ್ಣಯ್ಯ ಟ್ರಸ್ಟ್ ವತಿಯಿಂದ ಪಾಂಡವಪುರ ಕ್ರೀಡಾಂಗಣದಲ್ಲಿ ನಡೆದ ಸ್ವರಾಜ್ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು. ದೇಶದಲ್ಲಿ ಶೇಕಡಾ 15 ರಷ್ಟು ಜನ ಐಟಿಬಿಟಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶೇಕಡಾ 60 ರಿಂದ 70 ರಷ್ಟು ಜನ ಸಣ್ಣ ಕೈಗಾರಿಕೆಗೆ ಮತ್ತು ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಸಣ್ಣ ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರ ಹೆಚ್ಚಿನ ಅಭಿವೃದ್ಧಿ ಹೊಂದಬೇಕೆಂಬುದೇ ಸ್ವರಾಜ್ ಉತ್ಸವದ ಸದುದ್ದೇಶ ಎಂದರು.

ಗ್ರಾಮಗಳ ಸಮಸ್ಯೆ ಪರಿಹಾರವಾಗಬೇಕು ಹಾಗೂ ಅಭಿವೃದ್ಧಿ ಹೊಂದಬೇಕು ಎಂದು ವಿವಿಧ ಸಂಸ್ಥೆಗಳ ಸಹಕಾರದೊಂದಿದೆ. ಪ್ರಮುಖ 12 ಮಳಿಗೆಗಳ ಪ್ರದರ್ಶನವನ್ನು ನಡೆಸಲಾಗಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಗ್ರಾಮ ಸಣ್ಣ ಕೈಗಾರಿಕೆ, ಕೃಷಿ ಹಾಗೂ ಕೈಗಾರಿಕೆಗಳ ಉತ್ಪನ್ನಗಳಿಗೆ ಅಗತ್ಯವಾದ ಉಪಉತ್ಪನ್ನಗಳನ್ನು ಗ್ರಾಮಗಳಲ್ಲಿಯೇ ಉತ್ಪಾದಿಸಬೇಕು. ಇತರರ ಮೇಲೆ ಅವಲಂಬಿತವಾಗದೆ ಗ್ರಾಮಗಳನ್ನು ಅಭಿವೃದ್ಧಿ ಪಡಿಸಬೇಕು ಎಂಬುವುದೇ ಸ್ವರಾಜ್ ಉತ್ಸವ. ಸ್ವರಾಜ್ ಉತ್ಸವದ ಪರಿಕಲ್ಪನೆಯನ್ನು ರೈತ ಸಂಘಗಳು ಒಗ್ಗೂಡಿ ರಾಜ್ಯದವರೆಗೆ ತಲುಪಿಸಬೇಕು ಎಂದು ರೈತರಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿ ಹಾಗೂ ಪಾಂಡವಪುರ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ಮೇಲುಕೋಟೆಯ ಪ್ರವಾಸೋದ್ಯಮ ಸಾಕ್ಷಾಚಿತ್ರ ಪ್ರದರ್ಶಿಸಲಾಯಿತು.

ಕೃಷಿ, ಪ್ರವಾಸೋದ್ಯಮ, ಶಿಕ್ಷಣ, ಮಹಿಳಾ ಸಬಲೀಕರಣ, ಸಮಗ್ರ ಕೃಷಿ, ಆರೋಗ್ಯ, ಆಡಳಿತ, ಸಾಮಾಜಿಕ, ಪರಿಸರ, ತ್ಯಾಜ್ಯ, ಮೂಲಸೌಕರ್ಯ,  ಹಾಗೂ ಉದ್ಯೋಗ ಎಂಬಂತೆ ಪ್ರಮುಖ 12 ವಿಷಯಗಳ ಕುರಿತು ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು.

ಕಾರ್ಯಕ್ರಮಕ್ಕೂ ಮುನ್ನ ಪಾಂಡವಪುರ ನಗರದ ಫೈಲೇಟ್ ವೃತ್ತದಿಂದ ಪಾಂಡವಪುರ ಕ್ರೀಡಾಂಗಣದವರೆಗೆ ಡೊಳ್ಳು, ವೀರಾಗಸೆ, ಕಳಸ ಹಾಗೂ ಎತ್ತಿನಗಾಡಿ ಮೂಲಕ ಸ್ವರಾಜ್ ಉತ್ಸವದ ಮೆರವಣಿಗೆ ಜರುಗಿತು.

Key words: Gandhiji,  dream, Gram Swarajya, MLA, Darshan Puttannaiah