ಮೈಸೂರು,ಜುಲೈ,31,2025 (www.justkannada.in): ಸರಸ್ವತಿಪುರಂನಲ್ಲಿರುವ ಮೈಸೂರು ವಿವಿ ಈಜು ಕೊಳದ ನಿರ್ವಹಣೆ ವಿಚಾರದಲ್ಲಿ ಮೈಸೂರು ವಿಶ್ವವಿದ್ಯಾಲಯ ನಿರ್ಲಕ್ಷ್ಯ ತೋರುತ್ತಿದೆ. ಈಜುಕೊಳವನ್ನು ಖಾಸಗೀಕರಣಗೊಳಿಸುವ ಉದ್ದೇಶದಿಂದ ಸರಿಯಾಗಿ ನಿರ್ವಹಣೆ ಮಾಡದೆ ಬಂದ್ ಮಾಡಲಾಗಿದೆ ಎಂದು ಆರೋಪಿಸಿ ನಗರದ ಹಿರಿಯ ಈಜು ಪಟುಗಳು ಗುರುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ್ದಾರೆ.
ಈಜುಕೊಳದ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈಜು ಕೊಳವನ್ನು ಖಾಸಗಿಯವರಿಗೆ ನೀಡಬೇಕು ಎಂಬ ಉದ್ದೇಶದಿಂದ ಈಜುಕೊಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ. ಈಜು ಕೊಳದ ನಿರ್ವಣೆಗೆ ಬೇಕಾದ ಕೆಮಿಕಲ್ಸ್ ಖಾಲಿಯಾಗಿ ಅನೇಕ ದಿನಗಳಾದರೂ ಕೆಮಿಕಲ್ಸ್ ಪೂರೈಸದೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಕೆಮಿಕಲ್ಸ್ ಇಲ್ಲದ ಕಾರಣ ಈಜು ಕೊಳದ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿ ಹಾಳಾಗಿದೆ. ಇದರಿಂದ ಕಳೆದ ಮೂರು ದಿನಗಳಿಂದ ಈಜುಕೊಳದ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈಜು ಕೊಳದಲ್ಲಿ ನಿತ್ಯ ನೂರಾರು ಸಾರ್ವಜನಿಕರು ಹಾಗೂ ಯುವ ಈಜುಪಟುಗಳು ಅಭ್ಯಾಸ ನಡೆಸುತ್ತಿದ್ದಾರೆ. ಆದರೆ, ಈಗ ಈಜು ಕೊಳವನ್ನು ಬಂದ್ ಮಾಡಿರುವುದರಿಂದ ತೊಂದರೆಯಾಗಿದೆ. ಇದರಿಂದ ಮೈಸೂರು ವಿವಿಯ ಆದಾಯಕೂ ಕತ್ತರಿ ಬಿದ್ದಿದೆ.
ಮೈಸೂರು ವಿವಿ ದೈಹಿಕ ಶಿಕ್ಷಣದ ವಿಭಾಗದ ಪ್ರಭಾವಿಯೊಬ್ಬರು ತಮ್ಮ ಸಂಬಂಧಿಕರಿಗೆ ಈಜುಕೊಳವನ್ನು ಗುತ್ತಿಗೆ ನೀಡುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಹಾಗಾಗಿ, ಈಜುಕೊಳದ ನಿರ್ವಹಣೆ ತರಿಸಬೇಕಾದ ಕೆಮಿಕಲ್ಸ್ ತರಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಆದಷ್ಟು ಬೇಗ ಅಗತ್ಯ ಇರುವ ಕೆಮಿಕಲ್ಸ್ ತರಿಸುವ ಮೂಲಕ ಈಜುಕೊಳವನ್ನು ಬಳಕೆಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಈಜುಪಟುಗಳಾದ ಲಕ್ಷ್ಮಿ ವೆಂಕಟೇಶ್, ನಾಗೇಶ್, ಜನಾರ್ಧನ್, ಸೋಮಶೇಖರ್, ಸುನೀಲ್, ರಘು, ಮೋಹನ್, ರಾಮಚಂದ್ರೇಗೌಡ, ಶಿವಶಂಕರ್, ನಾಗರಾಜ್ ಇತರರಿದ್ದರು.
Key words: Neglect, management, Swimming pool, Protest