ಬೆಂಗಳೂರು,ಜೂನ್,27,2025 (www.justkannada.in): ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವದ ಅಂಗವಾಗಿ ಚಿಲುಮೆ ರವಿಕುಮಾರ್ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಕಾರ್ಯಕ್ರಮ ಸಂಪನ್ನಗೊಂಡಿತು.
ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರು ಬುನಾದಿ ಹಾಕಿದ ಸ್ಥಳವಾದ ಅವಿನ್ಯೂ ರಸ್ತೆಯ ದೊಡ್ಡಪೇಟೆ ವೃತ್ತದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ, ಕೆಂಪೇಗೌಡರ ವೇಷಭೂಷಣ ಧರಿಸಿ ಕುದುರೆ ಏರಿ ಸೇನೆಯೊಂದಿಗೆ ಆಗಮಿಸುವ ದೃಶ್ಯವನ್ನು ಮರುಸೃಷ್ಟಿಸಲಾಗಿತ್ತು. ಬೆಂಗಳೂರು ನಗರದ ನಿರ್ಮಾಣದ ಬಗ್ಗೆ ಕೆಂಪೇಗೌಡರು ಹೊಂದಿದ್ದ ಪರಿಕಲ್ಪನೆ ಆಧರಿಸಿ ಅಭಿನಯ ಪ್ರಸ್ತುತ ಪಡಿಸಲಾಯಿತು..
ಡೊಳ್ಳು ಕುಣಿತ, ನಗಾರಿ ವಿದ್ಯಾ, ತಾಳ ಅರೇವಾದ್ಯ, ಪೂಜಾ ಕುಣಿತ, ಕಹಳೆ ವಾದ್ಯಗಳು ಆಕರ್ಷಿಸಿದವು. ರಾಜಾಜಿನಗರದ ಇಎಸ್ ಐ ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ಹಣ್ಣುಹಂಪಲು, ಬ್ರೆಡ್, ಬಿಸ್ಕೆಟ್ ವಿತರಿಸಲಾಯಿತು.
ಮಾಗಡಿ ಕೆಂಪಾಪುರದಲ್ಲಿಅಲಂಕೃತ ನಾಡಪ್ರಭು ಸಮಾಧಿ ಬಳಿ ಸಂಜೆ 165 ದೀಪಗಳನ್ನು ಬೆಳಗಿಸಲಾಯಿತು. ಇದೇ ವೇಳೆ ನೆರೆದವರು ಕೆಂಪೇಗೌಡರ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಜಯಂತೋತ್ಸವ ಪ್ರಯುಕ್ತ ಮಂಗಳವಾರ ಮಾಗಡಿ ಕೆಂಪಾಪುರದಲ್ಲಿ ‘ನಾಡಪ್ರಭು ಕೆಂಪೇಗೌಡ ಸಮಾಧಿ ಪರಿಸರ ಶುದ್ಧಿ ಅಭಿಯಾನ’ ಹಮ್ಮಿಕೊಳ್ಳಲಾಗಿತ್ತು. ಬುಧವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗವಿ ಗಂಗಾಧರೇಶ್ವರ ಗುಡಿ ಸೇರಿ ಆರು ಸ್ಥಳಗಳಲ್ಲಿ ಪುಷ್ಟಾರ್ಚನೆ ಸಲ್ಲಿಸಲಾಗಿತ್ತು.
ಕೊಡಗು ಜಿಲ್ಲಾ ಒಕ್ಕಲಿಗ ಯುವಘಟಕದ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಬಿಐಟಿ ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಡಾ.ಮಧುಸೂದನ್ ಎಂ., ಚಿಲುಮೆ ಟ್ರಸ್ಟ್ ಅಧ್ಯಕ್ಷ ಕೊಟ್ರೇಶ್, ವಿಜಯ್ ಹೊಸಪಾಳ್ಯ, ಕೆಂಪಾಪುರ ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಯ್ಯ, ಗ್ರಾಮಸ್ಥರು, ಸ್ವಯಂಸೇವಕರು ಹಾಗೂ ಪ್ರತಿಷ್ಠಾನದ ಸದಸ್ಯರು ಭಾಗಿಯಾಗಿದ್ದರು.
Key words: Nadaprabhu Jayanthiyastava, chilume Foundation