Monday, August 3, 2026

BDA Apartments

Home Front Page ನಾಳೆ KSOU ಘಟಿಕೋತ್ಸವ: ಸಚಿವ ಸತೀಶ್ ಜಾರಕಿಹೊಳಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ನಾಳೆ KSOU ಘಟಿಕೋತ್ಸವ: ಸಚಿವ ಸತೀಶ್ ಜಾರಕಿಹೊಳಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ಮೈಸೂರು,ಮಾರ್ಚ್,26,2025 (www.justkannada.in): ನಾಳೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ 27ನೇ ಘಟಿಕೋತ್ಸವ ಆಯೋಜನೆ ಮಾಡಲಾಗಿದ್ದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ಕೆಎಸ್ ಒಯು ಕುಲಪತಿ ಪ್ರೊ.ಶರಪ್ಪ ವಿ ಹಲಸೆ ತಿಳಿಸಿದರು.

ಮೈಸೂರಿನ ಕರಾಮುವಿವಿ ಅತಿಥಿಗೃಹದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಕುಲಪತಿ ಪ್ರೊ.ಶರಪ್ಪ ವಿ ಹಲಸೆ , ಮಾರ್ಚ್ 27(ನಾಳೆ)  ರಂದು ಬೆಳಿಗ್ಗೆ 11 ಗಂಟೆಗೆ ವಿವಿ ಘಟಿಕೋತ್ಸವ ಭವನದಲ್ಲಿ 27 ನೇ ಘಟಿಕೋತ್ಸವವನ್ನು ಆಯೋಜಿಸಲಾಗಿದ್ದು ಒಟ್ಟು 17348 ಅಭ್ಯರ್ಥಿಗಳಿಗೆ ನಾನಾ ಪದವಿ ಪ್ರಧಾನ ಮಾಡಲಾಗುವುದು. ಸಚಿವ ಡಾ.ಸತೀಶ್ ಎಲ್. ಜಾರಕಿಹೊಳಿ, ಚಿತ್ರದುರ್ಗದ ಐಡಿಯಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಎಂ. ಇರ್ಫಾನುಲ್ಲಾ ಷರೀಫ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡ, ಇಂಗ್ಲೀಷ್, ಇತಿಹಾಸ, ರಾಜ್ಯಶಾಸ್ತ್ರ,ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ನಿರ್ವಹಣಾಶಾಸ್ತ್ರ, ಸೂಕ್ಷ್ಮಜೀವ ವಿಜ್ಞಾನ, ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದಲ್ಲಿ ಒಟ್ಟು 41 ಮಂದಿಗೆ  ಪಿಎಚ್‌ಡಿ ಪದವಿ ಪ್ರಧಾನ ಮಾಡಲಾಗುತ್ತದೆ.  54 ಮಂದಿಗೆ ಚಿನ್ನದ ಪದಕ ಮತ್ತು 58 ನಗದು ಬಹುಮಾನ ವಿತರಿಸಲಾಗುವುದು. ಇದಲ್ಲದೇ 17307 (10,929 ಮಹಿಳೆಯರು, 6,378 ಪುರುಷರು)ಮಂದಿಗೆ ಸ್ನಾತಕ, ಸ್ನಾತಕೋತ್ತರ ಪದವಿ ಒಳಗೊಂಡಂತೆ ಒಟ್ಟು 17,348 ಮಂದಿ ನಾನಾ ಪದವಿ ಸ್ವೀಕರಿಸುವರು ಎಂದು ಮಾಹಿತಿ ನೀಡಿದರು.

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುವ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉಪಸ್ಥಿತರಿರುವರು. ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ಕಾರ್ಯದರ್ಶಿ ಅತುಲ್‌ಕುಮಾರ್ ತಿವಾರಿ ಘಟಿಕೋತ್ಸವ ಭಾಷಣ ಮಾಡುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿ ವೇಳೆ ಕೆಎಸ್ ಒಯು ಕುಲಸಚಿವ  ಡಾ.ಎಚ್.ವಿಶ್ವನಾಥ್, ಪ್ರೊ.ಕೆ.ಬಿ. ಪ್ರವೀಣ  ಸೇರಿ ಹಲವರು ಉಪಸ್ಥಿತರಿದ್ದರು.

 

Key words: KSOU, convocation, tomorrow, Mysore