Friday, August 14, 2026

BDA Apartments

Home Front Page ಡಾ. ಮಂಜುನಾಥ್ ಅವರ ಬಗ್ಗೆ ಅಪಪ್ರಚಾರ: ಸೋಲಿನ ದುಸ್ವಪ್ನದಿಂದ ನೀವು ಬಳಲುತ್ತಿರುವುದು ಸ್ಪಷ್ಟ- ಹೆಚ್.ಡಿಕೆ ವಾಗ್ದಾಳಿ.

ಡಾ. ಮಂಜುನಾಥ್ ಅವರ ಬಗ್ಗೆ ಅಪಪ್ರಚಾರ: ಸೋಲಿನ ದುಸ್ವಪ್ನದಿಂದ ನೀವು ಬಳಲುತ್ತಿರುವುದು ಸ್ಪಷ್ಟ- ಹೆಚ್.ಡಿಕೆ ವಾಗ್ದಾಳಿ.

ಬೆಂಗಳೂರು,ಮಾರ್ಚ್,14,2024(www.justkannada.in): ಬೆಂಗಳೂರು ಗ್ರಾಮಾಂತರ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರಿಗೆ ಟಿಕೆಟ್ ನೀಡಿರುವ  ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ ಹೇಳಿರುವುದಿಷ್ಟು..

ಡಾ.ಸಿ.ಎನ್.ಮಂಜುನಾಥ್ v/s ಡಿ.ಕೆ.ಸುರೇಶ್

  • ನಿಸ್ವಾರ್ಥ vs ಸ್ವಾರ್ಥ!
  • ಸೇವೆ v/s ಸುಲಿಗೆ!!
  • ಒಳಿತು v/s ಕೆಡುಕು!!!

ಇದಕ್ಕೆ ಮಿಗಿಲಾಗಿ ಹೆಚ್ಚಿನದನ್ನು ಹೇಳುವ ಅಗತ್ಯವಿಲ್ಲ ಎಂದು ಹೆಚ್.ಡಿಕೆ ಟಾಂಗ್ ನೀಡಿದ್ದಾರೆ.

ಡಿ.ಕೆ.ಸುರೇಶ್ ರವರೇ ನೀವೇನು? ಡಾ.ಸಿ.ಎನ್.ಮಂಜುನಾಥ್ ಅವರೇನು? ಎನ್ನುವುದು ರಾಜ್ಯಕ್ಕಷ್ಟೇ ಅಲ್ಲ, ಇಡೀ ಭಾರತ ದೇಶಕ್ಕೇ ಗೊತ್ತಿದೆ. ಅನಗತ್ಯವಾಗಿ ನಾಲಿಗೆ ಜಾರಿ ಗುಣ ಹಾಳು ಮಾಡಿಕೊಳ್ಳಬೇಡಿ. ಆರೋಗ್ಯ ಕ್ಷೇತ್ರದಲ್ಲಿ ಎಣೆ ಇಲ್ಲದಷ್ಟು ಸೇವೆ ಮಾಡಿ ಲಕ್ಷಾಂತರ ಬಡಜನರ ಹೃದಯದಲ್ಲಿ ನೆಲೆಸಿರುವ ಡಾ.ಸಿ.ಎನ್.ಮಂಜುನಾಥ್ ಅವರ ಬಗ್ಗೆ ಅನಾರೋಗ್ಯಕರ ಅಪಪ್ರಚಾರದಲ್ಲಿ ನೀವು ನಿರತರಾಗಿದ್ದೀರಿ. ಸೋಲಿನ ದುಸ್ವಪ್ನದಿಂದ ನೀವು ಬಳಲುತ್ತಿರುವುದು ಸ್ಪಷ್ಟ ಎಂದು ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆಲ್ಲಿದೆ? ಇಡೀ ಕಾಂಗ್ರೆಸ್  ನಿಮ್ಮ ಕಬಂಧಬಾಹುಗಲ್ಲಿ ಬಂಧಿಯಾಗಿದೆ. ಅಣ್ಣ ಡಿಸಿಎಂ, ತಮ್ಮ ಎಂಪಿ, ಸಹೋದರಿಯ ಗಂಡ ವಿಧಾನ ಪರಿಷತ್ ಸದಸ್ಯ, ಇನ್ನೊಬ್ಬರು ಕುಣಿಗಲ್ ಶಾಸಕ. ಇದೇನು ಫ್ಯಾಮಿಲಿ ಪಾಲಿಟಿಕ್ಸೋ ಅಥವಾ ಫ್ಯಾಮಿಲಿ ಪ್ಯಾಕೇಜೋ? ನೀವು ಏನೆಂದು ಕರೀತೀರಿ ಡಿ.ಕೆ.ಸುರೇಶ್ ರವರೇ? ಎಂದು ಹೆಚ್.ಡಿಕೆ ಗುಡುಗಿದ್ದಾರೆ.

ಜಾಣ ಅಳಿಯ ಎಂಬ ಡಿ.ಕೆ ಸುರೇಶ್ ಟೀಕೆಗೆ ಕುಟುಕಿದ ಹೆಚ್.ಡಿ ಕುಮಾರಸ್ವಾಮಿ, ಅಳಿಯ ಜಾಣ ಆಗೋದು ತಪ್ಪಲ್ಲ. ನಿಮ್ಮಂತೆ ಇನ್ನೊಬ್ಬರ ಜೀವನಕ್ಕೆ ಎರವಾಗೋದು ತಪ್ಪಲ್ಲವೇ? ಡಾ.ಮಂಜುನಾಥ್ ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೆ ನಿಮಗೇನು? ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಿಮ್ಮ ಎದುರಾಳಿ, ಸೆಣಸಿ. ಅದು ಬಿಟ್ಟು ವ್ಯರ್ಥ ಆಲಾಪ ಏಕೆ ಸುರೇಶ್ ರವರೇ?

ದೇವೇಗೌಡರ ಪಾರ್ಟಿ ಕಥೆ ಇರಲಿ, ನಿಮ್ಮ ಪಾರ್ಟಿ ಹಣೆಬರಹ ನೋಡಿಕೊಳ್ಳಿ. ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಕರ್ಮಕಾಂಡದ ಬಗ್ಗೆ ಹೇಳುತ್ತಾ ಹೋದರೆ ಅದೇ ಮಹಾ ಕಾದಂಬರಿ ಆಗುತ್ತದೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಪಕ್ಕದವರ ತಟ್ಟೆಯಲ್ಲಿ ನೊಣ ಹುಡುಕುವ ದಡ್ಡತನವೇಕೆ? ಅಕ್ವರ್ಡ್ ಪದಕ್ಕೆ ನಿಮಗಿಂತ ಸರಿಯಾದ ಅನ್ವರ್ಥ ಇದೆಯೇ? ಏನಂತೀರಿ?  ಎಂದು ಹೆಚ್.ಡಿಕೆ ಹರಿಹಾಯ್ದಿದ್ದಾರೆ.

Key words: Dr. CN Manjunath-DK Suresh-suffering -nightmare – defeat- HD kumaraswamy