Friday, August 14, 2026

BDA Apartments

Home Front Page ಇಡಿ ಅಧಿಕಾರಿಗಳಿಂದ ಡಿಕೆಶಿ ಬಂಧನಕ್ಕೆ ಪ್ರಯತ್ನ ಆರೋಪ: ಸಿಎಂ ಬಿಎಸ್ ವೈ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿ...

ಇಡಿ ಅಧಿಕಾರಿಗಳಿಂದ ಡಿಕೆಶಿ ಬಂಧನಕ್ಕೆ ಪ್ರಯತ್ನ ಆರೋಪ: ಸಿಎಂ ಬಿಎಸ್ ವೈ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿ ‘ಕೈ’ ಕಾರ್ಯಕರ್ತರ ಪ್ರತಿಭಟನೆ…

ಬೆಂಗಳೂರು,ಆ,31,2019(www.justkannada.in): ಇಡಿ ಅಧಿಕಾರಿಗಳಿಂದ ಮಾಜಿ ಸಚಿವ ಡಿಕೆ ಶಿವ ಕುಮಾರ್ ಬಂಧಿಸಲು  ಯತ್ನಿಸುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಮೌರ್ಯಸರ್ಕಲ್ ನಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ  ಕೈ ಕಾರ್ಯಕರ್ತರು ಧರಣಿ ನಡೆಸಿ ಬಿಜೆಪಿ ನಾಯಕರ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು. ರೇಸ್ ಕೋರ್ಸ್ ರಸ್ತೆಯಲ್ಲಿ ವಾಹನಗಳನ್ನ ತಡೆದ ಪ್ರತಿಭಟನಾಕಾರರು  ಪ್ರಧಾನಿ ಮೋದಿ, ಅಮಿತ್ ಶಾ ಪ್ರತಿಕೃತಿಗೆ ಬೆಂಕಿ ಹಚ್ಚಿ  ಕಿಡಿಕಾರಿದರು.

ಹಾಗೆಯೇ ಮೌರ್ಯಸರ್ಕಲ್ ನಿಂದ ಡಾಲರ್ಸ್ ಕಾಲೋನಿಯತ್ತ ತೆರಳಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಯಡಿಯೂರಪ್ಪ ಮನೆ ಮುತ್ತಿಗೆಗೆ ಪ್ರಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದರು.

ಪ್ರತಿಭಟನೆ ವೇಳೆ ಮಾತನಾಡಿದ ಯೂತ್ ಘಟಕದ ಮುಖಂಡ ಕೆಂಪರಾಜು, ಐಟಿ, ಇಡಿ ಬಳಸಿಕೊಂಡು ಡಿಕೆ ಶಿವಕುಮಾರ್ ಅವರನ್ನ ಹಣಿಯುವ ಪ್ರಯತ್ನ ನಡೆದಿದೆ. ಇಡಿ ಐಟಿ ಅಧಿಕಾರಿಗಳು ಅಮಿತ್ ಶಾ, ಮೋದಿ ಹೇಳಿದಂತೆ ಕೇಳ್ತಿದ್ದಾರೆ. ಡಿಕೆ ಶಿವಕುಮಾರ್ ಗೆ ಇನ್ನಿಲ್ಲದ ಪ್ರಶ್ನೆ ಕೇಳಿ ಹೆದರಿಸೋಕೆ ನೋಡ್ತಿದ್ದಾರೆ. ಐಟಿ,ಇಡಿ ಹೇಗೆ ಬಳಸಿಕೊಳ್ತಿದ್ದೀರ ಜನ ನೋಡ್ತಿದ್ದಾರೆ. ನೀವು ಒಂದು ಹೆಜ್ಜೆ ಮುಂದೆ ಇಟ್ಟರೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹಾಗೆಯೇ ಶಾಸಕ ಶ್ರೀನಿವಾಸ್ ಗೌಡ ಸದನದಲ್ಲಿ ಆಪರೇಷನ್ ಕಮಲದ ಬಗ್ಗೆ ಹೇಳಿದ್ದಾರೆ. ಯಾಕೆ ಇನ್ನೂ ಕ್ರಮವನ್ನ ಕೈಗೊಂಡಿಲ್ಲ. ಅದು ನಿಮ್ಮ ಕಣ್ಣಿಗೆ ಕಾಣಿಸ್ತಿಲ್ಲವೇ. ಶ್ರೀರಾಮುಲು ಹಣದ ಅಮಿಷ ಒಡ್ಡಿರುವುದು ಗೊತ್ತಿಲ್ಲವೇ. ಯಾಕೆ ಅದನ್ನ ಎಫ್ ಐ ಆರ್ ಮಾಡಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಬಸನಗೌಡ ಬಾದರ್ಲಿ ಮಾತನಾಡಿ, ಕುತಂತ್ರದಿಂದ ಡಿಕೆಶಿ ಬಂಧನಕ್ಕೆ ಪ್ರಯತ್ನ ನಡೆಸಿದ್ದಾರೆ. ನಿಮ್ಮ ಕುತಂತ್ರ ಹೆಚ್ಚು ದಿನ ನಡೆಯಲ್ಲ. ಅವರನ್ನ ಬಂಧಿಸಿದ್ದೇ ಆದರೆ ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Key words: ED-DK Sivakumar-Arrest- congress -protest -against –central govrnment