SCSP ಮತ್ತು TSP ಯೋಜನೆಯಡಿ 34,294ಕೋಟಿ ರೂ. ಅನುದಾನ: ಸಮಗ್ರ ಅಭಿವೃದ್ಧಿಗೆ ಬದ್ಧ- ಸಚಿವ ಹೆಚ್.ಸಿ ಮಹದೇವಪ್ಪ.

ಮೈಸೂರು,ಆಗಸ್ಟ್,3,2023(www.justkannada.in): ಎಸ್ ಸಿಎಸ್ ಪಿ ಮತ್ತು ಟಿಎಸ್ ಪಿ ಕಾಯ್ದೆಯಡಿಯಲ್ಲಿ 2023-24ನೇ ಸಾಲಿನಲ್ಲಿ ಒಟ್ಟಾರೆ 34,294 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಅನುದಾನದ ಪ್ರಮಾಣವು 13% ಅಂದರೆ ಸುಮಾರು 4,031 ಕೋಟಿ ರೂಪಾಯಿಗಳಷ್ಟು ಹೆಚ್ಚಳವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಈ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿರುವ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿರುವುದಿಷ್ಟು…

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಈ ಹಿಂದಿನ ಅವಧಿಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡುವ ಉದ್ದೇಶದಿಂದ ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದು ಅವರ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದ ಅಭಿವೃದ್ಧಿಗೆ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡುತ್ತಿದೆ.  ಅದರಿಂದ ಸಾವಿರಾರು ಜನರು ಅನುಕೂಲವನ್ನು ಪಡೆದಿದ್ದಾರೆ ಎಂಬುದು ಈ ಕಾಯ್ದೆಯು ಉಂಟುಮಾಡಿದ ಮಹತ್ತರ ಪರಿಣಾಮಗಳಲ್ಲಿ ಒಂದಾಗಿದೆ.

ನಮ್ಮ ಸರ್ಕಾರವು ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಸಮಗ್ರ ಅಭಿವೃದ್ದಿಗೆ ಬದ್ದವಾಗಿದ್ದು, ಇದಕ್ಕೆ ಪೂರಕವಾಗಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆ 2013 ರ ಸೆಕ್ಷನ್ 7(ಡಿ) ಯನ್ನು ಕೈಬಿಡಬೇಕೆಂಬ ಸಮುದಾಯಗಳ ಬೇಡಿಕೆಗೆ ಸ್ಪಂದಿಸಿ 7(ಡಿ) ಅನ್ನು ರದ್ದುಪಡಿಸುವ ಕೆಲಸವನ್ನು ಮಾಡಿದೆ. ಇಷ್ಟೇ ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರಿಗೆ ನೀಡುತ್ತಿದ್ದ 50 ಲಕ್ಷ ರೂಪಾಯಿಗಳ ಗುತ್ತಿಗೆ ಮೊತ್ತದ ಪ್ರಮಾಣವನ್ನುವನ್ನು 1 ಕೋಟಿ ರೂಪಾಯಿಗಳಿಗೆ ಏರಿಸಿದೆ. ಇದರೊಂದಿಗೆ ಪಿಟಿಸಿಎಲ್ ಕಾಯ್ದೆಗೆ ಇದ್ದ ಕಾಲಮಿತಿಯನ್ನು ರದ್ದುಪಡಿಸುವ ಮೂಲಕ ಚುನಾವಣೆಗೂ ಮುನ್ನವೇ ಭರವಸೆ ನೀಡಲಾದಂತೆ ನಮ್ಮ ಸರ್ಕಾರವು ನಡೆದುಕೊಂಡಿದೆ ಎಂದು ತಿಳಿಸಿದರು.

ಹಾಗೆಯೇ ಈ ಬಾರಿಯ ಆಯವ್ಯಯದಲ್ಲಿ 7(ಡಿ) ಅನ್ನು ರದ್ದು ಮಾಡಿದ ನಂತರದಲ್ಲಿ  2022-23 ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿ ವಿವಿಧ ಇಲಾಖೆಗಳಿಗೆ ಡೀಮ್ಡ್ ವೆಚ್ಚ ಸೇರಿ ಹಂಚಿಕೆ ಮಾಡಲಾಗಿದ್ದ 7,450.80 ಕೋಟಿಗಳ ಹಣವು 2023-24ನೇ ಸಾಲಿನಲ್ಲಿ ಸುಮಾರು 2,787.33 ಕೋಟಿಗಳಿಗೆ ಇಳಿಕೆಯಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಈ ಡೀಮ್ಡ್ ಹಂಚಿಕೆಯನ್ನು ರದ್ದುಪಡಿಸಿರುವ ಕಾರಣ ಸರ್ಕಾರದ ವಿವಿಧ ಇಲಾಖೆಗಳಿಗೆ ನೀಡುತ್ತಿದ್ದ ಅನುದಾನದ ಪ್ರಮಾಣವನ್ನು ಕಡಿತಗೊಳಿಸಿ ಅದನ್ನು ಫಲಾನುಭವಿ ಆಧಾರಿತ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಏಳಿಗೆಗಾಗಿ ನಮ್ಮ ಸರ್ಕಾರವು ಈ ಹಿಂದೆ ನುಡಿದಂತೆಯೇ ನಡೆದುಕೊಂಡಿದ್ದು ಶೋಷಿತ ಸಮುದಾಯಗಳ ಮೇಲೆ ನಮಗಿರುವುದು ಕರುಣೆ ಮಾತ್ರವಲ್ಲ ಜವಾಬ್ದಾರಿ ಎಂಬ ಸಂದೇಶವನ್ನೂ ಸಹ ಸ್ಪಷ್ಟವಾಗಿಯೇ ನೀಡಿದ್ದೇವೆ.

ಹೀಗಿದ್ದರೂ ಕೂಡಾ ಈ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿದ್ದ ಹಣವನ್ನು ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರವು ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ಬೇರೆ ಬೇರೆ ಕಾಮಗಾರಿಗಳಿಗೆ ಬಳಸಿಕೊಂಡಿತ್ತು. ಇಂತಹ ಪಕ್ಷದ ನಾಯಕರು ಈ ದಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ನಮ್ಮ ಸರ್ಕಾರದ ಬಗ್ಗೆ ಟೀಕಿಸುತ್ತಿರುವುದು ವಿಪರ್ಯಾಸದ ಸಂಗತಿ.  ನೈತಿಕತೆ ಇಲ್ಲದೇ ಮಾತನಾಡುತ್ತಿರುವ ಇವರ ಮಾತುಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.

ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಅಧಿನಿಯಮ 2103 ರ ಅನ್ವಯ ಪ.ಜಾತಿ/ ಪ.ಪಂಗಡದವರಿಗೆ ನೇರವಾಗಿ ಪ್ರಯೋಜನವಾಗುವ ವೈಯಕ್ತಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡಲು ಅವಕಾಶವಿದ್ದು ಈ ನಿಯಮದ ಅಡಿಯಲ್ಲಿ ಅನುಸೂಚಿತ ಜಾತಿ ಉಪಯೋಜನೆಗಳು ಹಾಗೂ ಬುಡಕಟ್ಟು ಉಪಯೋಜನೆಗಳ ಅಡಿಯಲ್ಲಿ ಇತರೆ ಸಮುದಾಯಗಳೊಂದಿಗೆ ಪ.ಜಾತಿ/ ಪ.ಪಂಗಡದ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಪ್ರಯೋಜನ ಒದಗಿಸುವ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಮುಂತಾದ ಸಾಮಾನ್ಯ ಸಾಮಾಜಿಕ ವಲಯದ ಯೋಜನೆಗಳನ್ನು ಎಸ್ ಸಿ ಎಸ್ ಪಿ/ ಟಿ ಎಸ್ ಪಿ ಕಾಯ್ದೆಯಡಿ ಸೇರಿಸಲು ಅವಕಾಶವಿರುತ್ತದೆ. ಅದರಂತೆಯೇ ಕಳೆದ 10 ವರ್ಷಗಳಿಂದ ಸರ್ಕಾರದ ವಿವಿಧ ಇಲಾಖೆಗಳಿಗೆ ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಅನುದಾನವನ್ನು ಹಂಚಿಕೆ ಮಾಡಲಾಗಿರುತ್ತದೆ.

ಈಗಲೂ ಸಹ ಇದೇ ಆಧಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅವರ ಬದುಕಿಗೆ ನೇರ ಪ್ರಯೋಜನ ಆಗುತ್ತಿರುವ ಹಿನ್ನಲೆಯಲ್ಲಿ ನಿಯಮಾವಳಿಗಳ ಅಡಿಯಲ್ಲೇ ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಕಾಯ್ದೆಯಡಿ ಭಾಗಶಃ ಅನುದಾನವನ್ನು ನೀಡಲಾಗಿದ್ದು ಇಲ್ಲಿ ಎಲ್ಲಿಯೂ ಕೂಡಾ ಕಾಯ್ದೆಯ ನಿಯಮಾವಳಿಗಳನ್ನು ಮೀರಿಲ್ಲ ಮತ್ತು ಅದರ ಆಶಯಗಳಿಗೆ ಧಕ್ಕೆ ಆಗುವಂತೆ ನಡೆದುಕೊಂಡಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.

Key words: 34,294 crore -under -SCSP – TSP –scheme- Grant-Minister -HC Mahadevappa.