ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿನ ರಹಸ್ಯ ಬಿಚ್ಚಿಟ್ಟ ಸಚಿವ ಕೆ.ಎಸ್ ಈಶ್ವರಪ್ಪ

ಮೈಸೂರು,ಡಿಸೆಂಬರ್,1,2021(www.justkannada.in): ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೋಲಿನ ರಹಸ್ಯವನ್ನ ಸಚಿವ ಕೆ.ಎಸ್ ಈಶ್ವರಪ್ಪ ಬಿಚ್ಚಿಟ್ಟಿದ್ದಾರೆ.

ಸಿದ್ದರಾಮಯ್ಯನನ್ನ ಸೋಲಿಸಲು ಎಲ್ಲರೂ ಜಿಟಿ ದೇವೇಗೌಡರಿಗೆ ಬೆಂಬಲ ನೀಡಿದರು. ಹೀಗಾಗಿ ಸಿದ್ಧರಾಮಯ್ಯ ಸೋತರು.  ಸಿದ್ದರಾಮಯ್ಯ ಜೊತೆ ಕೈ ಜೋಡಿಸಿ ನೀವು ಒಬ್ಬ ಅವಕಾಶವಾದಿ ರಾಜಕಾರಣಿ ಆಗಬೇಡಿ. ಸಿದ್ದರಾಮಯ್ಯ ತನಗೆ ಗತಿ ಇಲ್ಲ, ಜಿಟಿ ದೇವೇಗೌಡರ ಬಳಿ ಬಂದಿದ್ದಾರೆ‌. ಹೇಗಾದರೂ ಮಾಡಿ ನನ್ನನ್ನ ಉಳಿಸಪ್ಪ ಅಂತ. ಬಾದಾಮಿಯಲ್ಲಿ ಈ ಸಲ ಸೋಲುಸ್ತಾರೆ. ಹಾಗಾಗಿ ರಾಜಕೀಯ ಸ್ಥಿರತೆ ಉಳಿಸಿಕೊಳ್ಳಲು ಜಿಟಿ ದೇವೇಗೌಡರ ಜೊತೆ ಸ್ನೇಹ ಬೆಳೆಸಿದ್ದಾರೆ. ನಾವು ರಾಹುಲ್ ಗಾಂಧಿಯನ್ನೇ ಸೋಲಿಸಿದ್ದೀವಿ, ಇನ್ನ ಜಿಟಿಡಿ ಸಿದ್ದು ಒಂದಾದ್ರೆ ಭಯ ಯಾಕೆ.? ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಮೈಸೂರಿನಲ್ಲಿ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಪ್ರಮುಖರ ಸಭೆ ನಡೆಯಿತು. ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಮೈಸೂರು ನಗರ, ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಹಾಸನ ಪ್ರಮುಖರ ಸಭೆ ಆಯೋಜಿಸಲಾಗಿತ್ತು.  ಸಭೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು. ಬಳಿಕ ಸಚಿವ ಕೆ.ಎಸ್ ಈಶ್ವರಪ್ಪ ನೇಕಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚರಕ ತಿರುವಿ ಸೀರೆ ಖರೀದಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಹಿಂದುಳಿದ ವರ್ಗಗಳ ಮುಖಂಡ, ನರೇಂದ್ರ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, 70 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದಲಿತರು, ಹಿಂದುಳಿದವರನ್ನು ಕಡೆಗಣಿಸಿದೆ. ಪರಿಣಾಮ ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡಿದೆ. ಇತ್ತೀಚೆಗೆ ತ್ರಿಪುರ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೂನ್ಯ ಸಂಪಾದನೆ ಮಾಡಿದೆ. ಬಿಜೆಪಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತಿರುವ ದಲಿತರು, ಹಿಂದುಳಿದವರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇದೇ ರೀತಿ ಮುಂದುವರಿದರೆ ಕಾಂಗ್ರೆಸ್ ಗೆ ಪ್ರಾದೇಶಿಕ ಪಕ್ಷದ ಮಾನ್ಯತೆ ಪಡೆದುಕೊಳ್ಳಲು ಸಹ ಸಾಧ್ಯವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

Key words: Minister -KS Eshwarappa -unveils -secret –Siddaramaiah- defeat – Chamundeshwari constituency