ಕೇಂದ್ರದ ತಾಳಕ್ಕೆ ಕುಣಿಯುತ್ತಾ, ರಾಜ್ಯದ ನೆಮ್ಮದಿ ಕಸಿಯುವ ಕೀಚಕ ಸರ್ಕಾರ ಕಿತ್ತೊಗೆಯುವುದು ಸೂರ್ಯ-ಚಂದ್ರರಷ್ಟೇ ಸತ್ಯ- ಜೆಡಿಎಸ್ ಕಿಡಿ.

ಬೆಂಗಳೂರು,ಫೆಬ್ರವರಿ,7,2023(www.justkannada.in): ಚುನಾವಣೆ ಸಮೀಪಿಸುತ್ತಿರುವ ವೇಳೆ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಟ್ವೀಟ್ ಮಾಡಿ ಟೀಕಿಸಿದೆ.

ಕೇಂದ್ರದ ತಾಳಕ್ಕೆ ಕುಣಿಯುತ್ತಾ, ರಾಜ್ಯದ ನೆಮ್ಮದಿ ಕಸಿಯುವ ಕೀಚಕ ಸರ್ಕಾರವನ್ನು ಜನರು ಕಿತ್ತೊಗೆಯುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ಜೆಡಿಎಸ್ ಕಿಡಿಕಾರಿದೆ.

ಈ ಕುರಿತು ಸರಣಿ ಟ್ವಿಟ್ ಮಾಡಿರುವ ಜೆಡಿಎಸ್, ಕರ್ನಾಟಕ ಬಿಜೆಪಿ ಪಾಲಿಗೆ ಇಂದು ‘ಪಾಲಕರನ್ನು ಶಾಲೆಗೆ ಬರಮಾಡಿಕೊಳ್ಳುವ ದಿನ’ದ ಹಾಗೆ. ಪ್ರಧಾನಿ @narendramodi ಅವರು ರಾಜ್ಯಕ್ಕೆ ಆಗಮಿಸುತ್ತಿರುವ ಈ ವೇಳೆ, ಅವರನ್ನು ಸ್ವಾಗತಿಸಿ ಚುನಾವಣೆ ಗೆಲ್ಲಲು ಅಣಿಯಾಗುವ ಉತ್ಸಾಹಲ್ಲಿದ್ದಾರೆ ರಾಜ್ಯ ಬಿಜೆಪಿಯವರು.

ನಮ್ಮ ಕರುನಾಡು ಬರಗಾಲ, ಪ್ರವಾಹದಿಂದ ತತ್ತರಿಸಿದಾಗೆಲ್ಲ ‘ಮಾಯವಾಗುವ’ ಪ್ರಧಾನಿಯವರು, ಚುನಾವಣೆ ಹತ್ತಿರ ಬಂದ ತಕ್ಷಣ ಪ್ರತ್ಯಕ್ಷರಾಗುತ್ತಾರೆ. ಇಡೀ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿರುವ ಪ್ರಮುಖ ರಾಜ್ಯಗಳಲ್ಲೊಂದಾದ ಕರ್ನಾಟಕದ ಸಮಸ್ಯೆಗಳಿಗೆ ಕುರುಡಾಗಿ ವರ್ತಿಸುವವರು, ಈಗ ಮತ ಕೇಳಲು ಯಾವ ಮುಖ ಹೊತ್ತು ಬರುತ್ತಾರೆ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಆದಾಯ ಮತ್ತು ಕಾರ್ಪೋರೆಟ್ ತೆರಿಗೆ, ಜಿಎಸ್ ಟಿಗಳನ್ನು ಕೇಂದ್ರದ ಖಜಾನೆಗೆ ಭರ್ತಿಯಾಗಿ ತುಂಬಿಸಿಕೊಳ್ಳಲು ಮಾತ್ರ ಕರ್ನಾಟಕ ಬೇಕು ಎನ್ನುವ ಹಾಗಾಗಿದೆ. ನಮ್ಮಿಂದ ಸಂಗ್ರಹವಾದ ತೆರಿಗೆಯಲ್ಲಿ ಕನಿಷ್ಠ ಪಾಲು ಸಿಗುವುದೇ ಕನಸಾಗಿದೆ. ಇನ್ನೂ ಸಮಪಾಲು ದೂರದ ವಿಷಯ. ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ  ಬಳಸುತ್ತಿದೆ.

ಕರ್ನಾಟಕವು ಸೇರಿದಂತೆ ಎಲ್ಲ ರಾಜ್ಯಗಳ‌ ಪ್ರಾದೇಶಿಕತೆಯ ಕತ್ತು‌ಹಿಸುಕುವ ಕುತಂತ್ರದ ರಾಜಕೀಯ ಮುಂದುವರಿದಿದೆ. ರಾಜ್ಯಗಳ ಅಧಿಕಾರವನ್ನೆಲ್ಲ ಮೊಟಕುಗೊಳಿಸಿದ್ದಾಯ್ತು. ಈಗ, ಚುನಾವಣೆ ಹತ್ತಿರ ಬಂದಿದೆ ಎಂಬ ಕಾರಣಕ್ಕೆ ಕೆಲವು ಯೋಜನೆಗಳ‌ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿಯವರೆ, ನಿಮ್ಮ ಮುಖವಾಡ ಕಳಚಿ ಬಹಳ ದಿನಗಳಾಗಿವೆ ಎಂದು ಜೆಡಿಎಸ್ ಟಾಂಗ್ ನೀಡಿದೆ.

ಇನ್ನೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಮತ್ತು 25 ಸಂಸದರು‌ ತಮ್ಮ ಬೆನ್ನೆಲುಬನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ರಾಜ್ಯದ ಜನತೆ ಅವರಿಗೆ ಮುಖ್ಯವೇ ಅಲ್ಲ. ಏನಿದ್ದರೂ ಮೋದಿಯವರ ಭಜನೆ ಮತ್ತು ಮುಖಸ್ತುತಿ ರಾಜಕಾರಣವಷ್ಟೆ! ಮೋದಿಯವರ ಹೆಸರಿನಲ್ಲಿ ಅಧಿಕಾರ ಪಡೆಯುವ ಹುಚ್ಚು ಭ್ರಮೆ ಅವರಿಗೆಲ್ಲ.

ಮೋದಿಯವರು ಬಂದ ದಿನ ರೆಕ್ಕೆ ಬಲಿತ ಹಕ್ಕಿಯಂತೆ ಆಡುವುದು ಮಾತ್ರ ಇಲ್ಲಿನ ಬಿಜೆಪಿಗೆ ಗೊತ್ತಿರುವುದು! ಇಂತಹ ಬೃಹತ್ ನಾಟಕ ಮಂಡಳಿಯ ಯಾವ ಪ್ರದರ್ಶನವೂ ಇನ್ನು ಕರ್ನಾಟಕದಲ್ಲಿ ನಡೆಯುವುದಿಲ್ಲ. ನಿಮ್ಮಂತಹ ಮುಖೇಡಿ ರಾಜಕಾರಣಿಗಳು ಹಾಗೂ ನಿಮ್ಮನ್ನು ತೊಗಲು ಗೊಂಬೆಗಳನ್ನಾಗಿ ಮಾಡಿರುವ ದೆಹಲಿ ದೊರೆಗಳನ್ನು ರಾಜ್ಯ ತಿರಸ್ಕರಿಸಲಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

ರಾಜ್ಯ ಬಿಜೆಪಿಯಂತೂ ನಪುಂಸಕವಾಗಿರುವುದು ದಿಟ. ಬರಡು ಭೂಮಿಯಂತೆ ಯಾವ ಪ್ರಯೋಜನವು ಇಲ್ಲದ ರಾಜ್ಯ ಸರ್ಕಾರವಿದು. ಸಾರ್ವಜನಿಕರ ಹಣ ಬಾಚುವ, ದೋಚುವುದಷ್ಟೆ ಇವರ ಕಾಯಕ. ಒಟ್ಟಿನಲ್ಲಿ, ಕೇಂದ್ರದ ತಾಳಕ್ಕೆ ಕುಣಿಯುತ್ತಾ, ರಾಜ್ಯದ ನೆಮ್ಮದಿ ಕಸಿಯುವ ಕೀಚಕ ಸರ್ಕಾರವನ್ನು ಜನರು ಕಿತ್ತೊಗೆಯುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ಹೇಳಿದೆ.

Key words: JDS -sparks –bjp- government-MP-Narendra modi