ಭರಪೂರ ಮಾವು; ಕೊಳ್ಳುವವರು ಯಾರು?

ಬೆಂಗಳೂರು: ಮೇ-12:ರೇಷ್ಮೆ ಬೆಳೆಯ ಮಾದರಿಯಲ್ಲೇ ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಾವು ಬೆಳೆ ವಿಸ್ತರಣೆ ಎಚ್ಚರಿಕೆ ಹಂತ ತಲುಪಿದ್ದು, ಇದು ಮುಂಬರುವ ದಿನಗಳಲ್ಲಿ ರಾಜ್ಯದ ಮಾವು ಬೆಳೆ ಮತ್ತು ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ , ಗುಜರಾತ್‌ ಮತ್ತಿತರ ರಾಜ್ಯಗಳಲ್ಲಿ ಕಳೆದ ಒಂದೂವರೆ ದಶಕದಿಂದ ಮಾವು ಬೆಳೆಯುವ ಪ್ರದೇಶ ಸಾಕಷ್ಟು ವಿಸ್ತರಣೆ ಆಗಿದೆ. ಹಾಗಾಗಿ, ಉತ್ತರ ಭಾರತಕ್ಕೆ ಹೋಗುವ ಮಾವಿನ ಹಣ್ಣುಗಳ ಪ್ರಮಾಣ ವಿಪರೀತ ಏರಿಕೆ ಆಗಿದೆ. ಇದೇ ರೀತಿ ಮುಂದುವರಿದರೆ ಉತ್ಪಾದನೆ ಹೆಚ್ಚಳವಾಗಿ, ಇದು ಬೆಲೆ ಕುಸಿತದ ರೂಪದಲ್ಲಿ ಪರಿಣಮಿಸಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರಗಳ ನಿರಂತರ ಉತ್ತೇಜನದ ಫ‌ಲವಾಗಿ ಮಾವು ಬೆಳೆಯುವ ಪ್ರದೇಶ ಪ್ರತಿ ವರ್ಷ 10ರಿಂದ 15 ಸಾವಿರ ಹೆಕ್ಟೇರ್‌ ಏರಿಕೆ ಆಗುತ್ತಲೇ ಇದೆ. ಹಾಗಾಗಿ, ದಕ್ಷಿಣ ಭಾರತದಿಂದ ಉತ್ತರಕ್ಕೆ ಹೋಗುವ ಮಾವು ಏರಿಕೆ ಆಗಿದೆ. ಕರ್ನಾಟಕದಿಂದಲೇ ಶೇ. 30ರಷ್ಟು ಉತ್ತರದ ರಾಜ್ಯಗಳಿಗೆ ಪೂರೈಕೆ ಆಗುತ್ತದೆ. ಉಳಿದ ರಾಜ್ಯಗಳಿಂದಲೂ ಹೆಚ್ಚು-ಕಡಿಮೆ ಇದೇ ಪ್ರಮಾಣದಲ್ಲಿ ಸರಬರಾಜು ಆಗುತ್ತಿದೆ. ಅಲ್ಲದೆ, ಈ ಹಿಂದೆ ಇಳುವರಿಯಲ್ಲಿ ಋಣಾತ್ಮಕ ಮತ್ತು ಧನಾತ್ಮಕ ವರ್ಷ ಎಂದು ಇತ್ತು. ಅಂದರೆ ಒಂದು ವರ್ಷ ಹೆಚ್ಚು ಮತ್ತೂಂದು ಕಡಿಮೆ ಇಳುವರಿ ಬರುತ್ತಿತ್ತು. ಅದು ರೈತರಿಗೂ ಅನುಕೂಲವಾಗಿತ್ತು. ಆದರೆ, ಈಗ ಆ ವ್ಯತ್ಯಾಸ ಇಲ್ಲವಾಗಿದೆ. ಕಳೆದ ಮೂರು ಮಾವು ಋತುಗಳಲ್ಲಿ ಬಹುತೇಕ ಒಂದೇ ರೀತಿ ಉತ್ಪಾದನೆ ಆಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ತೋಟಗಾರಿಕೆ ಇಲಾಖೆ ನಿವೃತ್ತ ಅಪರ ನಿರ್ದೇಶಕ (ಹಣ್ಣುಗಳ ವಿಭಾಗ) ಡಾ.ಎಸ್‌.ವಿ. ಹಿತ್ತಲಮನಿ ತಿಳಿಸುತ್ತಾರೆ.

ಸೌಲಭ್ಯ ಸ್ಥಗಿತ: ಉಳಿದ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಮಾವು ಬೆಳೆ ತುಂಬಾ ವಿಶೇಷ. ಇಲ್ಲಿ ಅಲ್ಫಾನ್ಸೊ, ತೋತಾಪುರಿ, ಮಲ್ಲಿಕಾ, ದಶೇರಿ, ಮಲ್ಗೊವಾ, ರಸಪುರಿ ಸೇರಿದಂತೆ ಹತ್ತಾರು ಪ್ರಕಾರಗಳಿವೆ. ಹಾಗಾಗಿ ಸಹಜವಾಗಿಯೇ ಇಲ್ಲಿನ ಮಾವಿನ ಹಣ್ಣುಗಳಿಗೆ ಬೇಡಿಕೆ ಹೆಚ್ಚು. ಹಾಗಂತ ವಿಪರೀತವಾದರೆ, ಸಮಸ್ಯೆ ಕೂಡ ಆಗಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಾವು ವಿಸ್ತರಣೆ ಸೂಕ್ತವಲ್ಲ. ರೈತರನ್ನು ಪರ್ಯಾಯ ತೋಟಗಾರಿಕೆ ಬೆಳೆಗಳಿಗೆ ಉತ್ತೇಜಿಸುವುದು ಉತ್ತಮ

ಈ ಹಿನ್ನೆಲೆಯಲ್ಲಿ ಮೂರ್‍ನಾಲ್ಕು ವರ್ಷಳಿಂದ ರಾಜ್ಯದಲ್ಲಿ ಸರ್ಕಾರ ನೀಡುತ್ತಿದ್ದ ಮಾವು ಪುನಶ್ಚೇತನ, ಹನಿ ನೀರಾವರಿ ಅಳವಡಿಕೆ ಮತ್ತಿತರ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾವು ಅಭಿವೃದ್ಧಿ ನಿಗಮದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪರ್ಯಾಯ ಬೆಳೆಯತ್ತ ಮುಖ: ವಿಸ್ತರಣೆಗೆ ತದ್ವಿರುದ್ಧವಾಗಿ ಇತ್ತೀಚಿನ ದಿನಗಳಲ್ಲಿ ಮಾವಿನ ತೋಟಗಳನ್ನು ನಾಶ ಮಾಡಿ, ಪರ್ಯಾಯ ಬೆಳೆಗಳತ್ತ ಮುಖಮಾಡುತ್ತಿರುವ ಟ್ರೆಂಡ್‌ ಕೂಡ ಕಂಡುಬರುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದಿರುವುದರಿಂದ ರೈತರು ಬೇಸತ್ತು ಗೇರು ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ಮೊರೆಹೋಗುತ್ತಿದ್ದಾರೆ. ಆದರೆ, ಇದಕ್ಕೆ ಉತ್ಪಾದನೆ ಕುಂಠಿತ ಆಗಿರುವುದು ಪ್ರಮುಖ ಕಾರಣ ಎನ್ನಲಾಗಿದೆ. ವಿಸ್ತರಣೆಗೆ ಹೋಲಿಸಿದರೆ, ಈ ಪರಿವರ್ತನೆ ಪ್ರಮಾಣ ಕಡಿಮೆ. ಅದೇನೇ ಇರಲಿ, ಇಳುವರಿ ಕುಂಠಿತವಾಗಲು ತಾಪಮಾನ ಹೆಚ್ಚಳ, ಆಲಿಕಲ್ಲು ಮಳೆಯ ಜತೆಗೆ ಮರಗಳ ಗುಣಮಟ್ಟವೂ ಕಾರಣವಾಗಿದೆ. ಕಸಿ ಮಾಡಿದ ಮರಗಳ ಬೇರುಗಳು ಆಳಕ್ಕಿಳಿಯುವುದಿಲ್ಲ. ಬೀಜ ನಾಟಿ ಮಾಡಿದ ಮರಗಳು ಆಳಕ್ಕಿಳಿದು, ಹೆಚ್ಚು ಕಾಲ ಬಾಳುತ್ತವೆ. ಜತೆಗೆ ಅಧಿಕ ಇಳುವರಿಯನ್ನೂ ನೀಡುತ್ತವೆ ಎಂದು ತೋಟಗಾರಿಕೆ ತಜ್ಞ ಸಂತೆ ನಾರಾಯಣ ಸ್ವಾಮಿ ಅಭಿಪ್ರಾಯಪಡುತ್ತಾರೆ.

ಇದಲ್ಲದೆ, ಬೆಳೆಗಾರರಿಗೆ ಮಾವಿನ ತೋಟದ ಬಗ್ಗೆ ನಿರ್ಲಕ್ಷ್ಯ ಹೆಚ್ಚು. ಇಸ್ರೇಲ್, ಅಮೆರಿಕದಂತಹ ದೇಶ ಗಳಲ್ಲಿ ಎಕರೆಗೆ 30-35 ಟನ್‌ ಇಳುವರಿ ತೆಗೆಯುತ್ತಾರೆ. ಆದರೆ, ನಾವು ಆರೆಂಟು ಟನ್‌. ಈ ನಿಟ್ಟಿನಲ್ಲಿ ನಾವು ಸುಧಾರಿತ ಕ್ರಮಗಳನ್ನು ಅನುಸರಿಸಬೇಕಿದೆ ಎಂದು ಡಾ.ಹಿತ್ತಲಮನಿ ತಿಳಿಸುತ್ತಾರೆ.

ಎರಡು ಲಕ್ಷ ಹೆಕ್ಟೇರ್‌ ಮಾವು ಪ್ರದೇಶ: ರಾಜ್ಯದಲ್ಲಿ ಮಾವು ಬೆಳೆಯುವ ಪ್ರದೇಶ ಎರಡು ಲಕ್ಷ ಹೆಕ್ಟೇರ್‌ ಇದ್ದು, ಕಳೆದ ಮೂರು ವರ್ಷಗಳಿಂದ 8ರಿಂದ 8.5 ಲಕ್ಷ ಟನ್‌ ಇಳುವರಿ ಬರುತ್ತಿದೆ. ಇದರಲ್ಲಿ ಮೇ 15ರಿಂದ ಜೂನ್‌ 15ರ ಮಧ್ಯೆಯೇ ಎರಡೂವರೆ ಲಕ್ಷ ಟನ್‌ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಅತಿ ಕಡಿಮೆ ಅವಧಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬರುವುದ ರಿಂದ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ.

ಅಂದ ಹಾಗೆ ರಾಜ್ಯಾದ್ಯಂತ ಸುಮಾರು 30 ಸಾವಿರ ಬೆಳೆಗಾರರು ಇದ್ದಾರೆ. ಮುಖ್ಯವಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಬೀದರ್‌ನ ಆಯ್ದ ಭಾಗಗಳಲ್ಲೂ ಕಂಡುಬರುತ್ತದೆ.

ಹೆಚ್ಚು ಹೆಚ್ಚಾಗಿ ಬೆಳೆಯೋದು ಬೇಡ
ಕಡಿಮೆ ನಿರ್ವಹಣೆ, ಸರ್ಕಾರಗಳ ಉತ್ತೇಜನಕಾರಿ ಯೋಜನೆಗಳು, ಆರಂಭದಲ್ಲಿ ಉತ್ತಮ ಆದಾಯ ಈ ಎಲ್ಲ ಅಂಶಗಳು ಮಾವು ಬೆಳೆ ವಿಸ್ತರಣೆಗೆ ಪ್ರೇರಣೆಯಾದವು. 80-90ರ ದಶಕದಲ್ಲಿ ಮಾವು ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ನಾಲ್ಕೈದು ಸಾವಿರ ಹೆಚ್ಚಾಗುತ್ತಿತ್ತು. ಆದರೆ, ಈಗ ವಾರ್ಷಿಕ 15ರಿಂದ 20 ಸಾವಿರ ಹೆಕ್ಟೇರ್‌ನಷ್ಟು ವಿಸ್ತಾರ ಆಗುತ್ತಿದೆ. ಹೀಗೆ ಹೆಚ್ಚು ಹೆಚ್ಚಾಗಿ ಮಾವು ಬೆಳೆಯುವುದು ಭವಿಷ್ಯದ ದೃಷ್ಟಿಯಿಂದ ಸರಿ ಅಲ್ಲ. ಹೆಚ್ಚು ಇಳುವರಿಯಿಂದ ಬೇಡಿಕೆ ಕುಸಿದು, ಬೆಲೆ ಕೂಡ ಇಳಿಮುಖ ಆಗಬಹುದು. ಅಂತಿಮವಾಗಿ ಇದರ ಪರಿಣಾಮ ಬೆಳೆಗಾರರ ಮೇಲೆ ಆಗಲಿದೆ ಎಂದೂ ಹಿತ್ತಲಮನಿ ಕಳವಳ ವ್ಯಕ್ತಪಡಿಸಿದರು.
ಕೃಪೆ:ಉದಯವಾಣಿ

ಭರಪೂರ ಮಾವು; ಕೊಳ್ಳುವವರು ಯಾರು?

the-terrible-mango-who-is-the-buyer