ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವರಿಗೆ ಸ್ವಾಗತ: ಎಫ್ ಐಆರ್ ದಾಖಲು.

ಯಾದಗಿರಿ,ಆಗಸ್ಟ್,18,2021(www.justkannada.in):  ನಗರದಲ್ಲಿ ನಡೆದ ಜನಾಶೀರ್ವಾದ ಯಾತ್ರೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನ ಸ್ವಾಗತಿಸಿದ ಹಿನ್ನೆಲೆ ಈ ಬಗ್ಗೆ ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಯಾದಗಿರಿ ತಾಲೂಕಿನ ಯರಗೋಳಗ್ರಾಮದ ಬಳಿ ಬಿಜೆಪಿ ಜನಾಶೀರ್ವಾದ ಯಾತ್ರೆ ವೇಳೆ ಗಾಳಿಯಲ್ಲಿ ಗುಂಡುಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ಕೋರಲಾಗಿದೆ. ಕೇಂದ್ರ ಸಚಿವರ ಸ್ವಾಗತಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿರುವ ಕಾರಣ ಇದೀಗ ಎಫ್ ​ಐಆರ್ ದಾಖಲಿಸಲಾಗಿದೆ.  ಕೇಂದ್ರ ಸಚಿವ ಭಗವಂತ ಖೂಬಾಗೆ ಬಿಜೆಪಿಯಿಂದ ಸ್ವಾಗತ ಕೋರಲಾಗಿತ್ತು.  ಈ ವೇಳೆ ಅವರ ಬೆಂಬಲಿಗರೇ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ  ಎನ್ನಲಾಗಿದೆ.

ಗಾಳಿಯಲ್ಲಿ ಗುಂಡು ಹಾರಿಸಲು ನಾಡ ಬಂದೂಕು ವ್ಯವಸ್ಥೆಯನ್ನು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಬಾಬುರಾವ್ ಚಿಂಚನಸೂರ್ ಜನಾಶೀರ್ವಾದ ಯಾತ್ರೆಗೆ ಗೈರಾಗಿದ್ದಾರೆ.

ಇನ್ನು ಜನಾಶೀರ್ವಾದ ಯಾತ್ರೆಯಲ್ಲಿ ಸಾವಿರಾರು ಜನರು ಸೇರುವ ಮೂಲಕ ಕೋವಿಡ್ ನಿಯಮ ಉಲ್ಲಂಘನೆ ಮಾಡಲಾಗಿದೆ. ಬಿಜೆಪಿ ನಾಯಕರಿಂದ‌ ಜಿಲ್ಲಾಡಳಿತದ‌ ರೂಲ್ಸ್ ಬ್ರೇಕ್ ಮಾಡಿ, ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಜಮಾವಣೆ ಮಾಡಲಾಗಿದೆ ಎನ್ನಲಾಗಿದೆ.

Key words: yadgir- Welcome – Union Minister –Bhagavanta kooba-firing -FIR