ಮೈಸೂರು ದಸರಾ ಗಜಪಡೆಗೆ 3ನೇ ದಿನವೂ ಭಾರ ಹೊರಿಸಿ ತಾಲೀಮು.

ಮೈಸೂರು,ಸೆಪ್ಟಂಬರ್,22,2021(www.justkannada.in): ಅಕ್ಟೋಬರ್ 7 ರಿಂದ ಆರಂಭವಾಗಲಿರುವ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದೆ.

ಅರಮನೆ ಆವರಣದಲ್ಲಿ ಮೂರನೇ ದಿನವೂ ಗಜಪಡೆ ಆನೆಗಳಿಗೆ ಭಾರ ಹೊರುವ ತಾಲೀಮು ಮುಂದುವರೆದಿದ್ದು , ಇಂದು ಗೋಪಾಲಸ್ವಾಮಿ ಆನೆಗೆ ಭಾರ ಹೊರಿಸಿ ತಾಲೀಮು ನಡೆಸಲಾಯಿತು. 400 ಕೆ.ಜಿ‌ ಮರಳಿನ ಭಾರ ಹೊತ್ತು ಸಾಗಿದ ಗೋಪಾಲಸ್ವಾಮಿ ಜೊತೆ ಹೆಜ್ಜೆ ಉಳಿದ 7 ಆನೆಗಳು ಹಾಕಿದವು.

ಈ ಬಾರಿ ಕೇವಲ ಮೂರು ಆನೆಗಳಿಗೆ ಮಾತ್ರ ಭಾರ ಹೊರಿಸಿ ತಾಲೀಮು ನಡೆಸಲಾಗುತ್ತಿದೆ. ಮೊದಲ ದಿನ ಅಭಿಮನ್ಯು, ಎರಡನೇ ದಿನ ಧನಂಜಯ, ಇಂದು ಗೋಪಾಲಸ್ವಾಮಿಗೆ ಭಾರ ಹೊರಿಸಿ ಅಭ್ಯಾಸ ನಡೆಸಲಾಯಿತು.  ಎರಡು ಮೂರು ದಿನಗಳ ಬಳಿಕ ಮತ್ತಷ್ಟು ಭಾರ ಹೆಚ್ಚಿಸಿ ತಾಲೀಮು ನಡೆಸಲಾಗುತ್ತದೆ. ನಂತರ ಮರದ ಅಂಬಾರಿ ಕಟ್ಟಿ ಜಂಬೂಸವಾರಿ ರಿಹರ್ಸಲ್ ನಡೆಸಲಾಗುತ್ತದೆ.

Key words: Workout -Mysore Dasara –elephant-3rd day.