ಉಮೇಶ್ ಜಾಧವ್ ಗೆ ಟಾಂಗ್: ಗೂಡ್ಸೆ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗೆ ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ ಏನು ಗೊತ್ತೆ…?

ಕಲ್ಬರ್ಗಿ,ಮೇ,17,2019(www.justkannada.in):  ಜನರ ಪ್ರೀತಿ ಗೌರವ ಪಡೆದುಕೊಂಡು ಶಾಸಕರಾದವರು ವೈಯಕ್ತಿಕ ಕಾರಣದಿಂದಾಗಿ ಅವರನ್ನು ತಿರಸ್ಕಾರ ಮಾಡಿ ಮತ್ತೊಂದು ಪಕ್ಷಕ್ಕೆ ಹೋಗುವ ಪ್ರಕ್ರಿಯೆಗೆ ಜನರು ಉತ್ತರ ಕೊಡಬೇಕು. ಜನರ ತೀರ್ಪನ್ನು ಕಾಲಿನಿಂದ ಒದ್ದು ಹೋಗುವಂತ ಕೆಲಸ ಮುಂದೆ ಆಗಬಾರದು ಹಾಗಾಗಿ ಜನರು ಉತ್ತರ ಕೊಡಲಿದ್ದಾರೆ ಎಂದು ಕಲ್ಬುರ್ಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಗೆ ಡಿಸಿಎಂ ಪರಮೇಶ್ವರ್ ಟಾಂಗ್ ಕೊಟ್ಟರು.

ಕಲ್ಬುರ್ಗಿಯ ಹೊಟೇಲ್ ಗ್ರ್ಯಾಂಡ್ ಸಭಾಂಗಣ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ  ಪರಮೇಶ್ವರ್,  ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ ಹೇಳದೆ, ವೈಯಕ್ತಿಕ ಹಾಗೂ ಕ್ಷುಲ್ಲಕ ವಿಚಾರ ಮುಂದಿಟ್ಟು ಮತವನ್ನು ಕೇಳಿದೆ. ನಮ್ಮ ಕಾಂಗ್ರಸ್ ಪಕ್ಷದ ಸರಕಾರವಿದ್ದಾಗ ಕೊಟ್ಟಂತ ಸಹಕಾರ ಹಾಗೂ ಅಭಿವೃದ್ದಿ ಕೆಲಸಗಳನ್ನು ಮುಂದಿಟ್ಟು ಮತ ಕೇಳಿದ್ದೇವೆ ಹಾಗೂ ಅವರ ಆರೋಪಗಳಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದೇವೆ ಎಂದರು.

ಚಿಂಚೋಳಿಯ ಎಂಟು ಜಿಪಂ ಗಳಿಗೆ ತಿರುಗಾಡಿದ್ದೇನೆ ಹಲವಾರು ಸಭೆ ನಡೆಸಿದ್ದೇನೆ ಆ ಸಭೆಗಳ ಪ್ರತಿಕ್ರಿಯೆ ನೋಡಿದ ಮೇಲೆ ಸುಭಾಷ್ ರಾಠೋಡ ಗೆಲ್ಲಲಿದ್ದಾರೆ ಎನಿಸಿದೆ. ಬಿಎಸ್ ವೈ ಹಾಗೂ ಇತರೆ ಮುಖಂಡರು, ೨೪ ನೇ ತಾರೀಖು ಮೈತ್ರಿ ಸರಕಾರ ಕೆಡವಿ ನಾವು ಸರಕಾರ ರಚಿಸುತ್ತೇವೆ ಎಂದಿದ್ದಾರೆ. ಅದು ಅಸಾಧ್ಯದ ಮಾತು ಅವರು ಬಹುಮತಕ್ಕೆ ಬೇಕಾದ ಸಂಖ್ಯೆ ತಲುಪಲ್ಲ ಎನ್ನುವುದನ್ನು ನಾನು ಅವರಿಗೆ ತಿಳಿಸುತ್ತೇನೆ ಎಂದು ಪರಮೇಶ್ವರ್ ನುಡಿದರು.

ಸುನೀಲ್ ವಲ್ಯಾಪುರೆ, ಸೋಮಣ್ಣ ಅವರು ಏನೋ‌ ರಣನೀತಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ನಾವೂ ಕೂಡಾ ರಣನೀತಿ ಮಾಡಿದ್ದೇವೆ ಅದುವರೆಗೆ ಮುಟ್ಟಲು ಅವರಿಗೆ ಹತ್ತು ವರ್ಷ ಬೇಕು. ನಮ್ಮ ರಣನೀತಿ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸುತ್ತದೆ. ಹಣ ಹಂಚುತ್ತಿರುವುದಾಗಿ ಅವರು ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಅವರು ಏನು ಮಾಡುತ್ತಿದ್ದಾರೆ ತಿಳಿಸಲಿ. ಜಾಧವ್ ಗೆ ಹಣ ಹಂಚಿರುವುದಾಗಿ ಜನರೇ ಮಾತನಾಡುತ್ತಿದ್ದಾರೆ ಎಂದು ಪರಮೇಶ್ವರ್ ಚಾಟಿ ಬೀಸಿದರು.

ಬಿಜೆಪಿ ನಾಯಕರ ( ಕಟೀಲ್ , ಸಾದ್ವಿ) ಹೇಳಿಕೆಗಳು ನೋಡಿದರೆ ಅವರೇ ಪರಾಮರ್ಶೆ ಮಾಡಿಕೊಳ್ಳಬೇಕು…

ಇದೇ ವೇಳೆ ಗೂಡ್ಸೆ ಪರ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ ಡಿಸಿಎಂ ಪರಮೇಶ್ವರ್, ಆಧುನಿಕ ಭಾರತದ ಭವ್ಯ ಕನಸು ಕಂಡಿದ್ದ ಅಂದಿನ ಪಿಎಂ ರಾಜೀವ್ ಗಾಂಧಿ ಅವರ ಕುರಿತು ಅದೂ ಅವರು ತೀರಿ ಹೋದ ಮೇಲೆ ಮೋದಿಯಿಂದ ಹಿಡಿದು ಭಾಜಪ ಮುಖಂಡರು ಮಾತನಾಡುತ್ತಿರುವುದು ನೋಡಿದರೆ ಅದಕ್ಕಿಂತ ಕೀಳು ಅಭಿರುಚಿ ಮತ್ತೊಂದಿಲ್ಲ. ಕಟೀಲ್ ಕ್ಷಮೆಯಾಚಿಸಿದ್ದಾರೆ. ಹೇಳುವ ಮೊದಲು ಯೋಚಿಸಬೇಕಿತ್ತು. ಗೋದ್ರಾ ಹತ್ಯಾಕಾಂಡ ನಡೆದಾಗ ಯಾರು ಸಿಎಂ ಇದ್ದರು ಎನ್ನುವುದನ್ನು ಕೂಡಾ ಕಟೀಲ್ ಹೇಳ ಬೇಕಿತ್ತು. ಗತಿಸಿಹೋದ ನಮ್ಮ ನಾಯಕರ ಬಗ್ಗೆ ಬಿಜೆಪಿಯವರು ಅವಹೇಳನ ಮಾತುಗಳನ್ನಾಡುವುದನ್ನು ನಿಲ್ಲಿಸಲಿ. ಗಾಂಧಿ ಕೊಂದವರನ್ನ ಗ್ಲೋರಿಫೈ ಮಾಡುವುದು ಸರಿಯಲ್ಲ. ಜಗತ್ತು ಕಂಡು ವಿಸ್ಮಯ ಅವರು. ಅಂತವರನ್ನು ಕೊಂದವರ ಗ್ಲೋರಿಫೈ ಮಾಡುವುದು ಖಂಡನೀಯ ಎಂದು ಗುಡುಗಿದರು.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕರ್ನಾಟಕ ಅಲ್ಲದೇ ದೇಶದ ಮುಕ್ಕಾಲು ಭಾಗದಲ್ಲಿ ಬೀಕರ ಬರಗಾಲವಿದೆ. ಅದರೂ ಮೋದಿ ಏನೂ ಕ್ರಮ ಕೈಗೊಂಡಿಲ್ಲ ಇದು ಖಂಡನೀಯ. ಹಿಂದಿನ ಸಿದ್ದರಾಮಯ್ಯ ಸರಕಾರದ ಅಭಿವೃದ್ದಿ ಕೆಲಸ ಈಗಿಲೂ‌ ಸಮ್ಮಿಶ್ರ ಸರಕಾರದಲ್ಲೂ ಮುಂದುವರೆಯುತ್ತಿದೆ. ಇತ್ತೀಚಿಗೆ ಸಿಎಂ ಕುರಿತು‌ ಚರ್ಚೆ ನಡೆಯುತ್ತಿದೆ. ನಾನು ಒಂದು ಸ್ಪಷ್ಟೀಕರಣ ಕೊಡಲು ಬಯಸುತ್ತೇನೆ. ಈಗ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಇನ್ನೂ ನಾಲ್ಕು ವರ್ಷ ನಮ್ಮ ಮೈತ್ರಿ ಸರಕಾರದ ಸಿಎಂ ಕುಮಾರಸ್ವಾಮಿ ಆಗಿರುತ್ತಾರೆ ಇದು ನಾವು ಮಾಡಿಕೊಂಡ ಒಪ್ಪಂದ. ಹೀಗಿರುವಾಗ ಈ ಸಂದರ್ಭ ದಲ್ಲಿ ಈ‌ ವಿಚಾರದಲ್ಲಿ‌‌ ಗೊಂದಲ ಉಂಟು ಮಾಡುವುದು ಸರಿಯಲ್ಲ ಎಂದು ಪರಂ ಹೇಳಿದರು.

ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥಿಸಿದ ಡಿಸಿಎಂ, ಈ ಕುರಿತು ಕೇಳಿದ ಪ್ರಶ್ನಗೆ ಉತ್ತರಿಸುತ್ತಾ ಖಂಡಿತವಾಗಿ‌ ಈ ವಿಚಾರ‌ದಲ್ಲಿ ಬೇರೆ ಬೇರೆ ವಾಖ್ಯಾನ ಮಾಡಿರಬಹುದು‌ ಆದರೆ‌ ಆ ಕಾಲದಲ್ಲಿ ಅವರು ಮಾಡಿರುವುದು ಟೆರಿರಿಸ್ಟ್ ಕೆಲಸ ಅಲ್ಲದೇ ಮತ್ತೇನು? ಎಂದು ಪ್ರಶ್ನಿಸಿದರು.

ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂದು ದೇವೇಗೌಡರು ಸೋನಿಯಾಗಾಂಧಿಯವರಿಗೆ ಪತ್ರ‌ಬರೆದಿರುವ ವಿಚಾರ‌ ಕುರಿತು ಪ್ರತಿಕ್ರಿಯಿಸಿದ ಅವರು,  ಆ ಕುರಿತು ನನಗೆ ಗೊತ್ತಿಲ್ಲ.  ಸಿಎಂ ವಿಚಾರ ವಾಗಿ ಕುಮಾರಸ್ವಾಮಿ ಹೇಳಿಕೆ ಮುಂಚೆ ಹಲವಾರು ಜನ ಹೇಳಿದ್ದಾರೆ. ಬಿಎಸ್ ವೈ ಕೂಡಾ ಹೇಳಿದ್ದಾರೆ.  ಅಂದು ಸಿಎಂ ಹೇಳಿದ್ದು ಇಷ್ಟೆ, ಎಲ್ಲ ಅರ್ಹತೆ ಇದ್ದು ಖರ್ಗೆ ಸಿಎಂ ಆಗಬೇಕಿತ್ತು ಎಂದು ಅದನ್ನು ನಾನೂ ಕೂಡಾ ಹೇಳುತ್ತೇನೆ. ಚುನಾವಣೆ ಸಂದರ್ಭದಲ್ಲಿ ಅವರ ಅರ್ಹತೆ ಬಗ್ಗೆ ಮಾತನಾಡುವುದು ತಪ್ಪಾ? ಸಿದ್ದರಾಮಯ್ಯ ಟ್ವೀಟ್ ವಿಚಾರ ಯಾರು ಹೇಗೆಲ್ಲ ಅರ್ಥ ಮಾಡಿಕೊಳ್ಳುತ್ತಾರೋ ಹಾಗೆ ಅರ್ಥವಾಗುತ್ತದೆ. ಈ ವಿಚಾರದಲ್ಲಿ ಸರಕಾರಕ್ಕೆ ಯಾವ ಮುಜುಗರವಿಲ್ಲ ಎಂದರು

ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇನ್ನಿತರ ಪ್ರಮುಖರು ಸೋಲುತ್ತಾರೆ ಎನ್ನುವ ಬಿಎಸ್ ವೈ ವಿಚಾರ, ಆ ಬಗ್ಗೆ ನಾವು ಆಳವಾಗಿ ಯೋಚಿಸಿಲ್ಲ. ಆ ಮಟ್ಟಕ್ಕೆ ಇಳಿಯಲ್ಲ. ಈ ಬಗ್ಗೆ ಅವರು ಕಾನ್ಫಿಡೆನ್ಸಿಯಲ್ ಆಗಿ ಹೇಳಿಲ್ಲ ಬಹಿರಂಗವಾಗಿಯೇ ಹೇಳಿದ್ದಾರೆ. ಬಿಜೆಪಿ ಪಕ್ಷದಲ್ಲಿ ಎಷ್ಟು ಜನ ಸೋಲಬಹುದು ಎನ್ನುವ ಪ್ರಶ್ನೆಗೆ ಖಡಕ್ ಉತ್ತರ, ನನಗೆ ಜ್ಯೋತಿಷ್ಯ ಹೇಳಲು ಬರುವುದಿಲ್ಲ ಎಂದು ತಿಳಿಸಿದರು.

ಗಾಂಧಿ ಕೊಂದವರನ್ನು ವೈಭವೀಕರಣ ಮಾಡುವುದು ದೇಶದ್ರೋಹ-ಈಶ್ವರ ಖಂಡ್ರೆ ಹೇಳಿಕೆ.

ಈಶ್ವರ್ ಖಂಡ್ರೆ ಮಾತನಾಡಿ, ಗಾಂಧಿ ಕೊಂದವರನ್ನು ವೈಭವೀಕರಣ ಮಾಡುವುದು ದೇಶದ್ರೋಹ. ಪ್ರಜ್ಞಾಸಿಂಗ್ ಹಾಗೂ ಅವರ ಬೆಂಬಲಿಗರ ಮೇಲೆ ದೇಶದ್ರೋಹದ ಕೇಸು ದಾಖಲಿಸಿ ಜೈಲಿಗಟ್ಟಲಿ. ರಾಷ್ಟ್ರವಿರೋಧಿ ಕೃತ್ಯಗಳಿಗೆ ಬಿಜೆಪಿಯವರು ಬೆಂಬಲ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿ ಬೆಂಗಾಲ್ ಸೇರಿದಂತೆ ಹಲವಾರು ಕಡೆ ದೊಂಬಿ ಗಲಬೆ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಲಬುರಗಿ ಹಾಗೂ ಚಿಂಚೋಳಿ ಯಲ್ಲಿ ಕಾಂಗ್ರೇಸ್ ಗೆದ್ದು ಮೈತ್ರಿ ಸರಕಾರ ಇನ್ನಷ್ಟು ಸುಭದ್ರವಾಗಲಿದೆ. ಬಿಜೆಪಿಯವರು ಹಣ ಹೆಂಡ ಹಂಚುತ್ತಿದ್ದಾರೆ ಆದರೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಜನರು ನಂಬಬಾರದು. ಡಿಸಿಎಂ‌ ಅವರು ಚಿಂಚೋಳಿ ಯಲ್ಲಿ ಕೆಲಸ ಮಾಡಿದ್ದಾರೆ. ಅವರು ಸೇರಿದಂತೆ ಪ್ರಚಾರದಲ್ಲಿ ಭಾಗವಹಿಸಿದವರಿಗೆ ಕೃತಜ್ಞತೆಗಳು ಎಂದು ಹೇಳಿದರು.

ಗೆಲುವಿಗೆ ನೀವು ಕ್ರೆಡಿಟ್ ತೆಗೆದುಕೊಳ್ಳುತ್ತಿರಿ,‌ ಸೋತರೆ ನೈತಿಕ ಹೊಣೆ ಹೊರುತ್ತೀರಾ ಎನ್ನುವ ಪ್ರಶ್ನೆಗೆ ಉಹಾಪೋಹದ ಪ್ರಶ್ನೆಗೆ ಉತ್ತರ ಕೊಡಲ್ಲ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

Key words:  What did DCM Parameshwar’s response to the BJP leaders say about Goodse..

#Political news #Dcmparameswhar  #response  #BJP leaders