ಅಟಲ್ ಬಿಹಾರಿ ವಾಜಪೇಯಿ ಆಶಯದಂತೆ ಜನರ ಮನೆ ಬಾಗಿಲಿಗೆ ಆಡಳಿತ- ಸಚಿವ ಅಶ್ವತ್ ನಾರಾಯಣ್

ಬೆಂಗಳೂರು,ಡಿಸೆಂಬರ್,25,2021(www.justkannada.in):  ಅಟಲ್ ಬಿಹಾರಿ ವಾಜಪೇಯಿಯವರ ಆಶಯದಂತೆ ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನಗಳ ಮೂಲಕ ಸರಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.

ವಾಜಪೇಯಿಯವರ 97ನೇ ಜನ್ಮದಿನದ ಅಂಗವಾಗಿ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗಳು ಜತೆಗೂಡಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ `ಉತ್ತಮ ಆಡಳಿತ ದಿವಸ’ ಕಾರ್ಯಕ್ರಮದಲ್ಲಿ ಅಶ್ವಥ್ ನಾರಾಯಣ್ ಮಾತನಾಡಿದರು.

ಬೆಂಗಳೂರಿನಲ್ಲಿರುವ ಯುವಿಇಸಿ ಕಾಲೇಜನ್ನು `ಯೂನಿವರ್ಸಿಟಿ ಆಫ್ ಎಮಿನೆನ್ಸ್’ ಮಟ್ಟಕ್ಕೆ ಉನ್ನತೀಕರಿಸಲಾಗುತ್ತಿದೆ. ಇದು ವಾಜಪೇಯಿಯವರು ಕಂಡಂತಹ ಕನಸಿಗೆ ಪೂರಕವಾಗಿದೆ. ಹಾಗೆಯೇ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದಾದರೂ ವಿಶ್ವವಿದ್ಯಾಲಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ತಂತ್ರಜ್ಞಾನದ ಮೂಲಕ ಸರಕಾರವನ್ನು ಜನರ ಬಳಿಗೆ ಕೊಂಡೊಯ್ಯುವುದೇ ಉತ್ತಮ ಆಡಳಿತದ ಲಕ್ಷಣ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಸಿಗುವಂತೆ ಮಾಡಲಾಗಿದೆ. ಇನ್ನೊಂದೆಡೆ, ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಅತ್ಯುತ್ತಮ ಸಂಸ್ಥೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಭಾರತದಲ್ಲಿ ಆಗಿರುವಷ್ಟು ಡಿಜಿಟಲೀಕರಣ ಮುಂದುವರಿದ ದೇಶಗಳಲ್ಲೂ ಆಗಿಲ್ಲ. ವಿಶಿಷ್ಟ ಗುರುತಿನ ಪ್ರಾಧಿಕಾರವು ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಖಾತೆಗಳಿಗೆ ನೇರವಾಗಿ ಅನುಕೂಲಗಳನ್ನು ತಲುಪಿಸುತ್ತಿದೆ. ಬ್ಯಾಂಕ್ ಖಾತೆ ತೆಗೆಯುವುದರಿಂದ ಹಿಡಿದು ಅಡುಗೆ ಅನಿಲ ಪೂರೈಕೆವರೆಗೆ ಇವತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದ್ದು, ಇದು ಉತ್ತಮ ಆಡಳಿತ’ದ ಹೆಗ್ಗುರುತು ಎಂದು ಅವರು ಪ್ರತಿಪಾದಿಸಿದರು.

ವಾಜಪೇಯಿಯವರ ಪರಿಕಲ್ಪನೆಗಳಾದ ಗ್ರಾಮ ಸಡಕ್ ನಿಂದ ಹಿಡಿದು ನದಿ ಜೋಡಣೆಯವರೆಗೆ ಹತ್ತು ಹಲವು ಸಂಗತಿಗಳು ಇಂದು ದೇಶವನ್ನು ಮುನ್ನಡೆಸುತ್ತಿವೆ. ಮೋದಿ ಕೂಡ ನೂರಾರು ಅಪ್ರಸ್ತುತ ಕಾನೂನುಗಳನ್ನು ರದ್ದುಪಡಿಸಿದ್ದು, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತಂದಿದ್ದಾರೆ ಎಂದು ಅಶ್ವತ್ಥ ನಾರಾಯಣ್ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ವಿದ್ಯುನ್ಮಾನ, ಐಟಿ ಹಾಗೂ ಬಿಟಿ ಇಲಾಖೆಗಳು ತಾವು ತೆಗೆದುಕೊಂಡಿರುವ ಜನಪರ ಉಪಕ್ರಮಗಳು ಮತ್ತು ರೂಪಿಸಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಿದವು.

ಸಮಾರಂಭದಲ್ಲಿ ಹಿರಿಯ ವಿಜ್ಞಾನಿ ವಾಸುದೇವ ಅತ್ರೆ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಎನ್ಎಲ್ಎಂ ನಿರ್ದೇಶಕಿ ಮಂಜುಶ್ರೀ, ಐಟಿ-ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್, ಜಿಟಿಟಿಸಿ ಮುಖ್ಯಸ್ಥ ರಾಘವೇಂದ್ರ ರಾವ್, ಕೆಎಸ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಉಪಸ್ಥಿತರಿದ್ದರು.

Key words: Vajpayee -ruled – people’s –doorstep-Minister -Ashwath Narayan