2023ರವರೆಗೂ ಯಡಿಯೂರಪ್ಪ ಅವರೇ ಸಿಎಂ-ಸಚಿವ ಮುರುಗೇಶ್ ನಿರಾಣಿ.

ಕಲಬುರಗಿ,ಜುಲೈ,10,2021(www.justkannada.in):  ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಹಲವಾರು ಮಂದಿ ತುದಿಗಾಲಲ್ಲಿ ನಿಂತಿದ್ದಾರೆ.  ಸದ್ಯಕ್ಕೆ ನಮ್ಮ ಪಕ್ಷದಿಂದ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ. 2023ರವರೆಗೂ ಅವರೇ ಮುಂದುವರೆಯುತ್ತಾರೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಗೊಂದಲ ಬೇಡ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.jk

ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ಯಾರ್ಯಾರು ಮುಖ್ಯಮಂತ್ರಿ  ಆಗುತ್ತಾರೆ ಎಂಬುದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿಯೂ ಇಲ್ಲ. ಯಡಿಯೂರಪ್ಪ ಉತ್ತಮವಾಗಿ ಆಡಳಿತ ನಡೆಸುತ್ತಿರುವುದರಿಂದ ಅವರ ನಾಯಕತ್ವವು ಅಬಾಧಿತವಾಗಿದೆ. ಈ ಬಗ್ಗೆ ಮಾತನಾಡುವುದರಲ್ಲಿ  ಯಾವ ಅರ್ಥವೂ ಇಲ್ಲ ಎಂದು ಸೂಚ್ಯವಾಗಿ ಹೇಳಿದರು.

2023ರ ಚುನಾವಣೆ ನಂತರ ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡೋಣ. ಕೆಲವರು ವೈಯಕ್ತಿಕ ಕಾರಣಗಳಿಗಾಗಿ  ದೆಹಲಿಗೆ ಹೋಗಬಹುದು. ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.

ನನಗೆ ಯಾರೇ ಒಳ್ಳೆಯ ಸಲಹೆ ನೀಡಿದರೆ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಗುಣವನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಂಡಿದ್ದೇನೆ.ಈಗಲೂ  ಅಷ್ಟೇ ಯಾರೇ ನನಗೆ ಒಳ್ಳೆಯದನ್ನು ಹೇಳಿದರೆ ಖಂಡಿತವಾಗಿಯೂ ಸ್ವೀಕರಿಸುತ್ತೇನೆ ಎಂದು ಮುರುಗೇಶ್ ನಿರಾಣಿ  ಹೇಳಿದರು.

ಸರ್ವ ಸನ್ನದ್ದ…

ಕಲಬುರಗಿ ಜಿಲ್ಲೆಯಲ್ಲಿ ಮುಂದಿನ ಏಳು ದಿನಗಳವರೆಗೆ ಹೆಚ್ಚಿನ ಮಳೆ ಆಗುವ ಸಾಧ್ಯತೆ ಇದೆ. ಪ್ರವಾಹ ಬಂದರೆ ಬೋಟ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರವಾಹ ಬಂದರೆ ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಜೊತೆಗೆ ಕಾರವಾರದಿಂದ ಬೋಟ್ ತರಿಸುವುದಕ್ಕೆ ತೀರ್ಮಾನಿಸಲಾಗಿದೆ ಎಂದರು.

ಪ್ರವಾಹ ಬಂದ ಸಂದರ್ಭದಲ್ಲಿ ಜನರನ್ನ ಬೇರೆಡೆ ಸ್ಥಳಾಂತರಿಸಲು ಯೋಜಿಸಲಾಗಿದೆ. ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗುವುದು. ಮಹಾರಾಷ್ಟ್ರದ ವಿವಿಧ ಅಣೆಕಟ್ಟೆಗಳಿಂದ ನೀರು ಹರಿಸುವುದರ ಬಗ್ಗೆ ನಮ್ಮ ಅಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ  ಎಂದು ಹೇಳಿದರು.

Key words: Until- 2023-Yeddyurappa -CM-Minister -Murugesh Nirani.