ರೇಷ್ಮೆ ಬೆಳೆಗಾರರಿಗೆ ವಿಶಿಷ್ಟ ಗುರುತಿನ ಚೀಟಿ- ಸಚಿವ ಡಾ. ನಾರಾಯಣಗೌಡ.

ಶಿವಮೊಗ್ಗ, ಸೆಪ್ಟಂಬರ್,27,2021(www.justkannada.in):  ರೇಷ್ಮೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಾಗ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಮಾರುಕಟ್ಟೆಗೆ ತೆರಳುವ ರೈತರು ಪೊಲೀಸರು ಮತ್ತು ದಲ್ಲಾಳಿಗಳಿಂದ ಬೇಸತ್ತಿದ್ದು, ಅವರಿಗೆ ತೊಂದರೆ ಆಗದಂತೆ ವಿಶೇಷ ಗುರುತಿನ ಚೀಟಿ ನೀಡುವುದಾಗಿ ರೇಷ್ಮೆ ಸಚಿವ ಡಾ.ನಾರಾಯಣಗೌಡ ಹೇಳಿದರು.

ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರ ಜೊತೆ ಸಚಿವ ನಾರಾಯಣಗೌಡ ಸಂವಾದ ನಡೆಸಿದರು. ಕಾಚಿನಕಟ್ಟೆಯಲ್ಲಿ ರೇಷ್ಮೆ ಬೆಳೆಯುವ ಹೊಲದಲ್ಲಿ ನಿಂತುಕೊಂಡೇ ಸಚಿವ ನಾರಾಯಣಗೌಡ ರೈತರೊಂದಿಗೆ ಸಂವಾದ ನಡೆಸಿದರು.  ರೇಷ್ಮೆ ಗಿಡಗಳಿಗೆ ತ್ರಿಪ್ಸ್ ಆ್ಯಂಡ್ ಮೈಟ್ಸ್ ಎನ್ನುವ ಎಲೆ ತಿನ್ನುವ ಕೀಟದ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಹೇಗೆ ತಡೆಗಟ್ಟುವುದು ಮತ್ತು ಹೆಚ್ಚಿನ ಇಳುವರಿ ಕುರಿತು ಮಾಹಿತಿ ನೀಡಲು ವಿಜ್ಞಾನಿಗಳನ್ನು ಕರೆಸಿ ರೈತರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಸಚಿವ ನಾರಾಯಣಗೌಡ ರೇಷ್ಮೆ ಹೊಲಕ್ಕೆ ರೈತರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಉಚಿತವಾಗಿ ನುವಾನ್ ಮತ್ತು ರೋಗಾರ್ ಎನ್ನುವ ಔಷಧವನ್ನು ಸಿಂಪಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ನಾರಾಯಣಗೌಡ ಸೂಚಿಸಿದರು. ಈ ವೇಳೆ ಅತ್ಯುತ್ತಮ ರೇಷ್ಮೆ ಬೆಳೆಗಾರರಿಗೆ ಪ್ರಶಸ್ತಿ ನೀಡುವುದಾಗಿ ತಿಳಿಸಿದರು.

ರೈತರು ಶ್ರಮ ಜೀವಿಗಳು. ಅವರೊಂದಿಗೆ ಅಧಿಕಾರಿಗಳು ಗೌರವದಿಂದ ನಡೆದುಕೊಳ್ಳಬೇಕು. ರೈತರನ್ನು ಅಧಿಕಾರಿಗಳು ಪ್ರೀತಿಯಿಂದ ನಡೆಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ನಾರಾಯಣಗೌಡ ಸೂಚಿಸಿದರು. ರೇಷ್ಮೆಗೆ ಉತ್ತಮ ದರ ಸಿಗುತ್ತಿದೆ. ವಿಮಾನ ನಿಲ್ದಾಣಗಳಲ್ಲೂ ರೇಷ್ಮೆ ಉತ್ಪನ್ನ ಮಾರಾಟ ಮಳಿಗೆ ಮಾಡುತ್ತೇವೆ. ರೈತರಿವೆ ನಷ್ಟವಾಗದಂತೆ ತಡೆಯಲು ಹೈಟೆಕ್ ಮಾರುಕಟ್ಟೆ ಕೂಡ ಮಾಡುತ್ತಿದ್ದೇವೆ. ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡುತ್ತೇವೆ ಎಂದರು. ಸುಮಾರು ಮುಕ್ಕಾಲುಗಂಟೆಗಳ ಕಾಲ ರೈತರೊಂದಿಗೆ ನಿಂತುಕೊಂಡೇ ಸಚಿವ ನಾರಾಯಣಗೌಡ ಸಂವಾದ ನಡೆಸಿದರು. ರೇಷ್ಮೆ ಬೆಳೆಗಾರರ ಸಮಸ್ಯೆ ಬಗ್ಗೆ ಅರಿವಿದೆ. ಈಗ ದರ ಏರಿಕೆ ಆಗಿದೆ. ರೇಷ್ಮೆ ಬೆಳೆಗಾರರೊಂದಿಗೆ ನಾನು ಸದಾ ಇರುತ್ತೇನೆ. ಯಾವುದೇ ಸಂದರ್ಭಲ್ಲೂ ರೈತರ ಜೊತೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.

ರೈತರೊಂದಿಗೆ ಊಟ ಮಾಡಿದ ಸಚಿವರು

ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ನಡೆಸಿದ ಸಚಿವ ನಾರಾಯಣಗೌಡ, ಬಳಿಕ  ರೈತರ ಮನೆಗೆ ತೆರಳಿ ಅವರೊಂದಿಗೆ ಊಟ ಸವಿದರು. ಸಚಿವರು ತಮ್ಮ ಊರಿಗೆ ಬಂದು ತಮ್ಮೊಂದಿಗೇ ಕುಳಿತು ಊಟ ಮಾಡಿದ್ದಕ್ಕಾಗಿ ರೈತರು ಅಭಿನಂದನೆ ಸಲ್ಲಿಸಿದರು.

ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳಿಯ ಗ್ರಾಮಪಂಚಾಯತಿ ಅಧ್ಯಕ್ಷೆ ಶ್ವೇತ, ಹಿರಿಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Key words:  unique- identification card – silk –growers-Minister – Narayana Gowda.