ಮಾ.25 ರಂದು ಮತ್ತೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ: ಮೂರು ಜಿಲ್ಲೆಗಳಲ್ಲಿ ಪ್ರವಾಸ.

ಬೆಂಗಳೂರು,ಮಾರ್ಚ್,23,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯಕ್ಕೆ ಅಗ್ಗಾಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿ ನೀಡುತ್ತಿದ್ದಾರೆ.

ಈ ಮಧ್ಯೆ ಮತ್ತೆ ಮಾರ್ಚ್ 25 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಬೀದರ್, ರಾಯಚೂರು, ಬೆಂಗಳೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳನ್ನ ಉದ್ಘಾಟನೆ ಮಾಡಲಿದ್ದಾರೆ.

ಮಾ.25 ರಂದು ಸಂಜೆ 7.20 ಬೀದರ್ ಗೆ ಆಗಮಿಸಲಿರುವ ಅಮಿತ್ ಶಾ, ಬೀದರ್ ವಾಯುನೆಲೆ ಗೆಸ್ಟ್ ಗೌಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.  ಮಾರ್ಚ್26 ರ ಬೆಳಿಗ್ಗೆ ಗೊರಟಾ ಗ್ರಾಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೊರಟಾ ಹುತಾತ್ಮ ಸ್ಮಾರಕ,  ಪಟೇಲ್ ಸ್ಮಾರಕ ಉದ್ಘಾಟಿಸಲಿದ್ದಾರೆ.

ನಂತರ ರಾಯಚೂರಿನ ಗಬ್ಬೂರಿನಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಾರ್ಚ್ 26 ರಂದು ಸಂಜೆ  5 ಗಂಟೆಗೆ ಬೆಂಗಳೂರಿಗೆ ಆಗಮಿಸಿ ಖಾಸಗಿ ಹೋಟೆಲ್ ನಲ್ಲಿ ಗುಜರಾತ್ ಸಮಾಜದ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾ.26 ರ ಸಂಜೆ 6.30ಕ್ಕೆ ವಿಧಾನಸೌಧದ ಮುಂಭಾಗದ ಬಸವೇಶ್ವರ, ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಮಾಡಲಿದ್ದು ನಂತರ.  ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ರಾತ್ರಿ 8.30ಕ್ಕೆ ಹೋಟೆಲ್ ನಲ್ಲಿ ಬಿಜೆಪಿ ನಾಯಕರ ಜೊತೆ ಸಭೆ ನಡೆಸಿ ರಾತ್ರಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿ ಮಾ.27 ರಂದು ಬೆಳಿಗ್ಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

Key words: Union- Home Minister -Amit Shah- state- Tour – March 25.