ವರ್ಚುಯಲ್‌ ವೇದಿಕೆಯಲ್ಲಿ ಬೆಳಗಿದ ಕರ್ನಾಟಕದ ಟೆಕ್‌ ಹಬ್ಬ

ಮುಂದಿನ‌ ವರ್ಷದ ಬಿಟಿಎಸ್ ನ.18ರಿಂದ 20; ಹೈಬ್ರೀಡ್ ಮಾದರಿ

ಗಡಿ, ಖಂಡ ದಾಟಿ 2.5 ಕೋಟಿಗೂ ಹೆಚ್ವು ಜನರನ್ನು ಮುಟ್ಟಿದ ಬೆಂಗಳೂರು ಟೆಕ್‌ ಸಮಿಟ್-2020

ಬೆಂಗಳೂರು: ಮೂರು ದಿನಗಳ ಜಾಗತಿಕ ಮಟ್ಟದ ಬೆಂಗಳೂರು ಟೆಕ್‌ ಸಮಿಟ್-2020 ಅತ್ಯಂತ ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿಗೆ ವರ್ಚುಯಲ್‌ ವೇದಿಕೆಯ ಮೂಲಕ ನಡೆದ ಈ ಪ್ರತಿಷ್ಠಿತ ಶೃಂಗವು 2.5 ಕೋಟಿಗೂ ಹೆಚ್ಚು ದೇಶ- ವಿದೇಶಿಯರನ್ನು ತಲುಪಿದೆ.

ಕೋವಿಡ್‌ ಸಂಕಷ್ಟ ಕಾಲದಲ್ಲಿ ನಡೆದ ಈ ಶೃಂಗವು ಎಲ್ಲರ ಊಹೆಮೀರಿ ಮಿಂಚಿತು. ಈವರೆಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಮೂಲಕ ಕರ್ನಾಟಕವನ್ನು ಗುರುತಿಸುತ್ತಿದ್ದ ಜಗತ್ತಿನ ಪ್ರಮುಖ ದೇಶಗಳು, ಈಗ ತಂತ್ರಜ್ಞಾನದ ಮೂಲಕವೂ ರಾಜ್ಯವನ್ನು ಅಚ್ಚರಿಯಿಂದ ನೋಡುತ್ತಿವೆ ಎಂದು ಐಟಿ ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರು ಟೆಕ್‌ ಸಮಿಟ್‌-2020 ಸಮಾರೋಪದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು; ಕೋವಿಡ್‌ ನಡುವೆಯೂ ಈವರೆಗೆ ಜಗತ್ತಿನಲ್ಲೇ ನಡೆದ ಅತಿದೊಡ್ಡ ತಂತ್ರಜ್ಞಾನ ಶೃಂಗ ಇದಾಗಿದೆ. ಮಾರಕ ವೈರಸ್‌ ನಡುವೆಯೂ ಯಶಸ್ವಿಯಾಗಿ ನಡೆಸಿದ ರಾಜ್ಯದ ಕಾರ್ಯಕ್ಷಮತೆಯ ಬಗ್ಗೆ ಆವಿಷ್ಕಾರ ಮೈತ್ರಿಕೂಟದ (ಜಿಐಎ) 25 ದೇಶಗಳು ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿವೆ ಎಂದು ಡಿಸಿಎಂ ಸಂತಸ ವ್ಯಕ್ತಪಡಿಸಿದರು.

2.5 ಕೋಟಿಗೂ ಹೆಚ್ಚು ಜನ:

ಭೌತಿಕವಾಗಿ (ಆಫ್‌ಲೈನ್)‌ ಹೊರತಾಗಿ ಇದೇ ಮೊದಲ ಬಾರಿಗೆ ಸಂಪೂರ್ಣ ಆನ್‌ಲೈನ್‌ ಮೂಲಕವೇ ನಡೆದ ಈ ಶೃಂಗವು ತಂತ್ರಜ್ಞಾನದ ಮೂಲಕ ಎರಡೂವರೆ ಕೋಟಿಗೂ ಹೆಚ್ಚು ಜನರನ್ನು ತಲುಪಿದೆ. ರಾಜ್ಯದ ಮನೆಮನೆಗೂ ಮಾತ್ರವಲ್ಲದೆ; ಭಾಷೆ, ಗಡಿ, ರಾಜ್ಯ, ದೇಶ, ಖಂಡಗಳನ್ನು ದಾಟಿಕೊಂಡು ಜಗತ್ತಿನ ಪ್ರತಿಮೂಲೆಯನ್ನೂ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಟೆಕ್‌ ಸಮಿಟ್‌ ಮಾಡುವ ನಮ್ಮ ಉತ್ಸಾಹಕ್ಕೆ ಗಜಬಲ ಬಂದಂತೆ ಆಗಿದೆ ಎಂದರು ಉಪ ಮುಖ್ಯಮಂತ್ರಿ.

ಎಲೆಕ್ಟ್ರಾನಿಕ್‌ ಸುದ್ದಿ ಮಾಧ್ಯಮ, ಸಾಮಾಜಿಕ ಜಾಲತಾಣಗಳು, ಡಿಜಿಟಲ್‌ ಮಾಧ್ಯಮ, ಯುಟ್ಯೂಬ್‌, ಬಿಟಿಎಸ್‌ ವರ್ಚುವಲ್‌ ವೇದಿಕೆ, ಬಿಟಿಎಸ್‌ ಯುಟ್ಯೂಬ್‌ ಚಾನೆಲ್‌, ಫೇಸ್‌ಬುಕ್‌ ಪೇಜ್‌ಗಳು, ವೆಬ್‌ ಪೇಜ್‌ಗಳು ಸೇರಿದಂತೆ ಹೊಸ ತಲೆಮಾರಿನ ಎಲ್ಲ ತಂತ್ರಜ್ಞಾನ ಕಂಟೆಂಟ್‌ ವಾಹಕಗಳ ಮೂಲಕ ಇಷ್ಟು ಅಗಾಧ ಜನಸಮೂಹವನ್ನು ಟೆಕ್‌ ಸಮಿಟ್‌ ತಲುಪಿದೆ ಎಂದು ಅವರು ಮಾಹಿತಿ ನೀಡಿದರು.

ಇದೆಲ್ಲವೂ ಎಷ್ಟು ಸುಸೂತ್ರವಾಗಿ ನಡೆಯಿತೆಂದರೆ, ಯಾವುದೇ ಹಂತದಲ್ಲೂ ಒಂದು ಸಣ್ಣ ಸಮಸ್ಯೆಯೂ ಆಗಲಿಲ್ಲ. ವರ್ಚುಯಲ್‌ ವೇದಿಕೆ ಕಾರ್ಯಕ್ರಮಗಳು, ಸಂವಾದಗಳು, ಗೋಷ್ಠಿಗಳು ಸೇರಿದಂತೆ ಎಲ್ಲಿಯೂ ಅಡ್ಡಿ ಉಂಟಾಗಲಿಲ್ಲ. ತಂತ್ರಜ್ಞಾನವನ್ನು ಅದೆಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಈ ಶೃಂಗವೂ ಅತ್ಯುತ್ತಮ ಉದಾಹರಣೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ದೇಶ ವಿದೇಶಗಳ ಪ್ರತಿನಿಧಿಗಳು:

ಬಿಟಿಎಸ್‌- 2020ಯಲ್ಲಿ ನಿರೀಕ್ಷೆಗೂ ಮೀರಿ ಪ್ರತಿನಿಧಿಗಳು ಭಾಗಿಯಾಗಿದ್ದರು. ಆರಂಭದಲ್ಲಿ 4,000 ಪ್ರತಿನಿಧಿಗಳು ಭಾಗವಹಿಸಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ, ಅಂದಾಜಿಗಿಂತ ದುಪ್ಪಟ್ಟು ಅಂದರೆ; 8,507 ಪ್ರತಿನಿಧಿಗಳು ನೋಂದಾಯಿಸಿಕೊಂಡು ಭಾಗಿಯಾಗಿದ್ದು ಈ ಶೃಂಗದ ದೊಡ್ಡ ದಾಖಲೆ. ಇನ್ನು ಭಾಷಣ, ಸಮ್ಮೇಳನ, ಪ್ರಶಸ್ತಿಗಳು, ರಸಪ್ರಶ್ನೆ ಸ್ಪರ್ಧೆ ವಿಭಾಗಗಳಲ್ಲಿ 19,381 ಪ್ರತಿನಿಧಿಗಳು ಪಾಲ್ಗೊಂಡಿದ್ದರು. 12 ಮುಖ್ಯ ಅಧಿವೇಶನಗಳು, 93 ಸೆಷನ್‌ಗಳು, 357 ಭಾಷಣಕಾರರ ಸಂಖ್ಯೆಯೂ ಮಹತ್ವದ್ದು ಎಂದು ಡಿಸಿಎಂ ತಿಳಿಸಿದರು.

ಪಾಲುದಾರ ದೇಶಗಳಿಂದ ಉತ್ತಮ ಪ್ರತಿಕ್ರಿಯೆ:

ಜಾಗತಿಕ ಆವಿಷ್ಕಾರ ಮೈತ್ರಿಕೂಟ (ಜಿಐಎ)ದ 25 ದೇಶಗಳಿಂದ 731 ಪ್ರತಿನಿಧಿಗಳು ಭಾಗಿಯಾಗಿದ್ದರು. ಹತ್ತು ಸಚಿವ ಮಟ್ಟದ ನಿಯೋಗಗಳು ಶೃಂಗದಲ್ಲಿ ಭಾಗಿಯಾಗಿದ್ದವು. ಕಳೆದ ವರ್ಷದ ಆಫ್‌ಲೈನ್ ಶೃಂಗದಲ್ಲಿ 21 ದೇಶಗಳು, 253 ಪ್ರತಿನಿಧಿಗಳು, ಕೇವಲ 44 ಸೆಷನ್‌ಗಳು, 262 ಸ್ಪೀಕರ್‌ಗಳು ಮಾತ್ರ ಭಾಗಿಯಾಗಿದ್ದರು. 4 ಮುಖ್ಯ ಅಧಿವೇಶನಗಳಷ್ಟೇ ನಡೆದಿದ್ದವು ಎಂದು ಅವರು ವಿವರಿಸಿದರು.

ಬಿ2ಬಿ ಸಭೆಗಳ ದಾಖಲೆ:

ಪ್ರಸಕ್ತ ಶೃಂಗ ಗುರುತಿಸಿಕೊಳ್ಳಲಿದೆ. ಬಿಸ್ನೆಸ್‌ ಸಭೆಗಳು ದಾಖಲೆ ಪ್ರಮಾಣದಲ್ಲಿ ನಡೆದಿದ್ದು, ಅಂತಹ ಒಟ್ಟು 312 ಸಭೆಗಳು ಜರುಗಿವೆ ಎಂದ ಉಪ ಮುಖ್ಯಮಂತ್ರಿ, ಇಂಥ ಇನ್ನೂ ಅನೇಕ ಸಭೆಗಳು, ಮಾತುಕತೆಗಳು ನಡೆದಿದ್ದು, ಈ ತಿಂಗಳ ಕೊನೆಯವರೆಗೂ ಮುಂದುವರಿಯಲಿವೆ ಎಂದರು.

ಪ್ರದರ್ಶನದಲ್ಲೂ ದಾಖಲೆ:
ವರ್ಚುಯಲ್‌ ಆಗಿ ನಡೆದರೂ ಈ ಶೃಂಗದಲ್ಲಿ ಪ್ರದರ್ಶನ ಮಳಿಗೆಗಳ ಸ್ಥಾಪನೆಯಲ್ಲೂ ದಾಖಲೆ ಆಗಿದೆ. ಕಳೆದ ವರ್ಷ ಭೌತಿಕವಾಗಿ ನಡೆದ ಶೃಂಗಕ್ಕಿಂತ ಈ ಬಾರಿ ವರ್ಚುಯಲ್‌ ಶೃಂಗದಲ್ಲಿ 248 ಪ್ರದರ್ಶನಕಾರರು ಪಾಲ್ಗೊಂಡಿದ್ದರು. ಆಸ್ಟ್ರೇಲಿಯಾ, ಕೆನಡಾ, ಯುಎಸ್ಎ, ಬ್ರಿಟನ್‌, ಜರ್ಮನಿ ಮುಂತಾದ ದೇಶಗಳ ಕಂಪನಿಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಇದರಲ್ಲಿ ಐಟಿ, ಎಲೆಕ್ಟ್ರಾನಿಕ್ಸ್, ಹೆಲ್ತ್‌ಕೇರ್, ಮೆಡಿಕಲ್‌, ಅಗ್ರಿಟೆಕ್, ನೆಟ್‌ವರ್ಕ್‌ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರದರ್ಶನಗಳಿದ್ದವು. ಜತೆಗೆ, 146 ಸ್ಟಾರ್ಟಪ್‌ಗಳು ಕೂಡ ಮಳಿಗೆಗಳನ್ನು ತೆರೆದಿದ್ದವು. ಸುಮಾರು 9,870 ಜನ ಈ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ.

ಎಂಟು ಒಪ್ಪಂದಗಳು:

ಟೆಕ್‌ ಸಮಿಟ್‌ನಲ್ಲಿ ಈಗಾಗಲೇ ಎಂಟು ಒಪ್ಪಂದಗಳನ್ನು ಜಿಐಎ ದೇಶಗಳ ಜತೆ ಮಾಡಿಕೊಳ್ಳಲಾಗಿದ್ದು, ಅಂಕಿತವೂ ಬಿದ್ದಿದೆ. ಇನ್ನೂ ನಾಲ್ಕು ಒಪ್ಪಂದಗಳು ಅಂತಿಮ ಹಂತದಲ್ಲಿದ್ದು, ಅಂಕಿತಕ್ಕೆ ಬಾಕಿ ಇವೆ. ಕಳೆದ ವರ್ಷ ಕೇವಲ ಒಂದೇ ಒಂದು ಒಪ್ಪಂದ ಆಗಿತ್ತು. ಇವಿಷ್ಟೂ ಒಪ್ಪಂದಗಳ ಕಾರಣದಿಂದ ಕರ್ನಾಟಕಕ್ಕೆ ದೊಡ್ಡ ಬಲ ಬಂದಂತೆ ಆಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಇವುಗಳ ಫಲಶ್ರುತಿ ಗೋಚರವಾಗಲಿದೆ. ಇದುವರೆಗೂ ಐಟಿ-ಬಿಟಿ ಹಬ್‌ ಆಗಿದ್ದ ಕರ್ನಾಟಕ ಇನ್ನು ಮುಂದೆ ಟೆಕ್ನಾಲಜಿ ಹಬ್‌ ಆಗಿ ಜಾಗತಿಕವಾಗಿ ಗುರುತಿಸಿಕೊಳ್ಳಲಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಬಿಟಿಎಸ್‌ 2020-21ಗೆ ಡೇಟ್‌ ಫಿಕ್ಸ್:‌

ಇದೇ ವೇಳೆ ಡಿಸಿಎಂ ಅವರು, ಮುಂದಿನ ವರ್ಷದ ಬೆಂಗಳೂರು ಟೆಕ್‌ ಸಮಿಟ್‌ಗೆ ದಿನಾಂಕವನ್ನೂ ಪ್ರಕಟಿಸಿದರು. 2021ರ ನವೆಂಬರ್ 18, 19 ಮತ್ತು 20ರಂದು ಶೃಂಗವು ನಡೆಯಲಿದ್ದು, ಅದು 2019ರ ಆಫ್‌ಲೈನ್‌ ಹಾಗೂ 2020ರ ಆನ್‌ಲೈನ್‌ ಕಾಂಬಿನೇಷನ್‌ನಲ್ಲಿ ಅಂದರೆ ಹೈಬ್ರಿಡ್ ಆಗಿ‌ ನಡೆಯಲಿದೆ. ಆಗ ಪ್ರಸಕ್ತ ಶೃಂಗ ದಾಖಲೆಗಳನ್ನು ಮೀರುವಂತೆ ಅದನ್ನು ಯಶಸ್ವಿಗೊಳಿಸಲಾಗುವುದು. ಅದಕ್ಕೆ ಈಗಿನಿಂದಲೇ ತಯಾರಿ ಮಾಡಲಾಗುವುದು ಎಂದು ಅವರು ಹೇಳಿದರು.

ಮುಂದಲ್ಲ, ಈಗಲೇ:

ನೆಕ್ಸ್ಟ್‌ ಈಸ್‌ ನೌ ಅಂದರೆ, ಮುಂದಲ್ಲ ಈಗಲೇ ಎಂಬ ಪರಿಕಲ್ಪನೆ ಮತ್ತು ಗುರಿಯೊಂದಿಗೆ ನಡೆದ ಬಿಟಿಎಸ್-2020, ಫಲಶ್ರುತಿ ಅದ್ಭುತ ಎಂದೇ ಹೇಳಬಹುದು. ನಮಗಿಂತ ಮುಂದೆ ಇರುವ ದೇಶಗಳೆಲ್ಲವೂ ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿ ಕರ್ನಾಟಕದ ಜತೆ ಕೈಜೋಡಿಸಿವೆ. ಕೃತಕ ಬುದ್ಧಿಮತ್ತೆ, ಸೈಬರ್‌ ಭದ್ರತೆ, ಕೃಷಿ, ಜೈವಿಕ ತಂತ್ರಜ್ಞಾನ, ರಕ್ಷಣೆ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಮುಂದೆ ವಿಪುಲ ಅವಕಾಶಗಳಿವೆ. ಇಡೀ ವಿಶ್ವವೇ ಕರ್ನಾಟಕದ ಮೂಲಕ ನೋಡಿಕೊಳ್ಳುವ ದಿನಗಳು ದೂರವಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಈ ಶೃಂಗದ ಫಲವು ರಾಜ್ಯದ ಕಟ್ಟಕಡೆಯ ಪ್ರಜೆಗೂ ಖಚಿತವಾಗಿ ತಲುಪಲಿದೆ. ಮುಖ್ಯವಾಗಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಕೃತಕ ಬುದ್ಧಿಮತ್ತೆ ಟೆಕ್ನಾಲಜಿ ಮೂಲಕ ಕೃಷಿಗೆ ಬಹಳ ಪ್ರಯೋಜನವಾಗಲಿದೆ. ಬಯೋ ಕ್ಷೇತ್ರದಲ್ಲಿ 300 ಶತಕೋಟಿ ಡಾಲರ್‌ ಆರ್ಥಿಕತೆ ಸಾಧಿಸುವ ಗುರಿಗೆ ಇದು ಪೂರಕವಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಐಟಿ ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಐಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ಮಾತನಾಡಿದರು.