ಮೆಟ್ರೋ ನಿಲ್ದಾಣ ಪ್ರವೇಶಿಸಲು ಯತ್ನಿಸಿದ್ದ ಶಂಕಾಸ್ಪದ ವ್ಯಕ್ತಿ: ಭದ್ರತಾ ಸಿಬ್ಬಂದಿಗಳ ಪರಿಶೀಲನೆ ವೇಳೆ ಎಸ್ಕೇಪ್

ಬೆಂಗಳೂರು:ಮೇ-11:(www.justkannada.in) ಮೆಜೆಸ್ಟಿಕ್‌ ಮೆಟ್ರೋನಿಲ್ದಾಣಕ್ಕೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಪ್ರವೇಶಿಸಲು ಮುಂದಾಗಿದ್ದ ಎಂಬ ಆಘಾತಕಾರಿ ಅಂಶ ಬಯಲಾಗಿದೆ.

ಅಪರಿಚಿತ ವ್ಯಕ್ತಿಯ ನಡೆಗಳು ತೀರಾ ಅನುಮಾನಾಸ್ಪದವಾಗಿದ್ದು ಈತ ಹೊರರಾಜ್ಯದ ವ್ಯಕ್ತಿ ಇರಬಹುದೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದನೇ ಎಂಬ ಹಲವಾರು ಶಂಕೆ ಪೊಲೀಸರಿಗೆ ಕಾಡುತ್ತಿದೆ. ಹೌದು. ಮೇ 6ರಂದು ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣದ ಪೂರ್ವ ದ್ವಾರದ ಮೂಲಕ ಪ್ರವೇಶಿಸಿ ಶಂಕಾಸ್ಪದ ರೀತಿಯಲ್ಲಿ ವ್ಯಕ್ತಿ ಪರಾರಿಯಾಗಿದ್ದು, ಈ ವ್ಯಕ್ತಿಯ ಕುರಿತು ಮಾಹಿತಿ ನೀಡುವಂತೆ ಫೋಟೊ ಸಹಿತ ಉಪ್ಪಾರಪೇಟೆ ಪೊಲೀಸರು ಪ್ರಕಟಣೆ ನೀಡಿದ್ದಾರೆ.

ಅಂದು ವ್ಯಕ್ತಿಯು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಕಡೆಯಿಂದ ಮೆಟ್ರೊ ನಿಲ್ದಾಣದ ‘ಡಿ’ ಗೇಟ್‌ನಲ್ಲಿ ಡೋರ್‌ ಫ್ರೇಮ್‌ ಮೆಟಲ್‌ ಡಿಟೆಕ್ಟರ್‌ (ಡಿಎಫ್‌ಎಂಡಿ) ಮೂಲಕ ಪ್ರವೇಶಿಸಿದಾಗ ಅಲಾರಂ ಜೋರು ಸದ್ದು ಮಾಡಿದೆ. ಸೆಕ್ಯೂರಿಟಿ ಚೆಕ್‌ ಮಾಡಿದಾಗ ಆತನ ಸೊಂಟದಲ್ಲಿ ಬೆಲ್ಟ್‌ ಇತ್ತು. ಜುಬ್ಬದ ಒಳಗೆ ಬೆಲ್ಟ್‌ ಹಾಕಿದ್ದರಿಂದ ಅದನ್ನು ತೆಗೆದು ತೋರಿಸು ಎಂದು ಸೆಕ್ಯೂರಿಟಿ ಗಾರ್ಡ್‌ ಕೇಳಿದ್ದಾರೆ. ಹಣ ಇದೆ ಎಂದು ಹೇಳಿ ತೋರಿಸುವಂತೆ ನಟಿಸಿ ಸೆಕ್ಯುರಿಟಿ ಗಾರ್ಡ್‌ನ ಹಿಂದೆ ಬಂದು ನಿಲ್ದಾಣದಿಂದ ವಾಪಸ್‌ ಹೋಗಿದ್ದಾನೆ. ಹತ್ತು ನಿಮಿಷಗಳ ಬಳಿಕ ಮತ್ತೆ ಪಶ್ಚಿಮ ದ್ವಾರದ ಕಡೆಗೆ ಬಂದು ನಿಲ್ದಾಣದ ಒಳಗೆ ಬಾರದೆ ಹಾಗೆಯೇ ವಾಪಸ್‌ ಹೋಗಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಈತನ ಬಗ್ಗೆ ಮಾಹಿತಿ ಇದ್ದಲ್ಲಿ ಠಾಣೆಗೆ ಸಂಪರ್ಕಿಸುವಂತೆ ಉಪ್ಪಾರಪೇಠೆ ಪೊಲೀಸರು ಕೋರಿದ್ದಾರೆ. ಉಪ್ಪಾರಪೇಟೆ ಪೊಲೀಸ್‌ ಠಾಣೆ: 08022942503, ಉಪ್ಪಾರ ಪೇಟೆ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ -9480801716, ಪಶ್ಚಿಮ ನಿಯಂತ್ರಣ ಕೊಠಡಿ – 080 22943232, 9480801700 ದೂರವಾಣಿ ಸಂಖ್ಯೆಗಳಿಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಮೆಟ್ರೋ ನಿಲ್ದಾಣ ಪ್ರವೇಶಿಸಲು ಯತ್ನಿಸಿದ್ದ ಶಂಕಾಸ್ಪದ ವ್ಯಕ್ತಿ: ಭದ್ರತಾ ಸಿಬ್ಬಂದಿಗಳ ಪರಿಶೀಲನೆ ವೇಳೆ ಎಸ್ಕೇಪ್

Suspect person escape in majestic Metro station