ಬಿಜೆಪಿ ಜನಪರ ರಾಜಕಾರಣಕ್ಕೆ ಮತದಾರರ ಬೆಂಬಲ- ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು,ಮಾರ್ಚ್,10,2022(www.justkannada.in): ಕೋವಿಡ್ ಸೇರಿದಂತೆ ದೇಶಕ್ಕೆ ಸವಾಲೊಡ್ಡಿದ ಹಲವಾರು ಸಂಕಷ್ಟಗಳನ್ನು ಜನಪರ ಕಾಳಜಿಯಿಂದ ಪರಿಹರಿಸಲು ಬಿಜೆಪಿ ಪರಿಶ್ರಮಿಸಿರುವುದನ್ನು ಮತದಾರರು ಬೆಂಬಲಿಸಿರುವುದನ್ನು ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಸ್ಪಷ್ಟ ಮುನ್ನಡೆ ಪಡೆದಿರುವ ಫಲಿತಾಂಶ ಸೂಚಿಸುತ್ತದೆ ಎಂದು ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಬಿ.ಜೆ.ಪಿ. ಅಧಿಕಾರವನ್ನು ಯಾವತ್ತೂ ಪ್ರತಿಷ್ಠೆಯ ಸ್ಥಾನಮಾನ ಎಂದು ಪರಿಗಣಿಸುವುದಿಲ್ಲ. ಬದಲಿಗೆ ಅದು ಜನಹಿತಕ್ಕಾಗಿ ಕೆಲಸ ಮಾಡಲು ಸಿಗುವ ಅವಕಾಶ ಎಂದೇ ಭಾವಿಸುತ್ತದೆ. ಪಕ್ಷದ ಸಾಧನೆ ನಮ್ಮನ್ನು ಇನ್ನಷ್ಟು ವಿನೀತರನ್ನಾಗಿಯೂ, ಜನಪರವನ್ನಾಗಿಯೂ ಮಾಡಲಿದೆ ಎಂದಿದ್ದಾರೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸಾಧನೆ ಬಹುತೇಕ ಸಿಂಗಲ್ ಡಿಜಿಟ್ ಗೆ ಇಳಿದಿದೆ. ಒಂದೇ ಕುಟುಂಬಕ್ಕೆ ಸೀಮಿತವಾದ ವಂಶಪಾರಂಪರ್ಯ ರಾಜಕಾರಣವನ್ನು ನಮ್ಮ ಜನರು ಬೆಂಬಲಿಸುವುದಿಲ್ಲ ಎಂಬ ಸಂದೇಶ ಈ ಚುನಾವಣಾ ಫಲಿತಾಂಶದಲ್ಲಿ ಇದೆ. ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಕೂಡ ಜನವಿರೋಧಿ ಕಾಂಗ್ರೆಸ್ಸಿಗೆ ಇದೇ ಸ್ಥಿತಿ ಬರುವ ಸೂಚನೆ ಇದಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಐದು ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಿ.ಜೆ.ಪಿ. ವಿರುದ್ಧ ಪ್ರತಿಪಕ್ಷಗಳು ಕೂಟ ಕಟ್ಟಿಕೊಂಡು ಹೋರಾಡಿದವು. ಆದರೆ ಬಿ.ಜೆ.ಪಿ.ಯ ರಾಷ್ಟ್ರದ ಜನರ ಬಗೆಗೆನ ಸಮಷ್ಟಿ ಹಿತಚಿಂತನೆಯನ್ನು ಮತದಾರರು ಬೆಂಬಲಿಸಿದ್ದಾರೆ. ಈ ಗೆಲುವು ಪಕ್ಷವನ್ನು ದಕ್ಷಿಣದ ರಾಜ್ಯಗಳಲ್ಲಿ ಬಲಗೊಳಿಸಲು ಹೆಚ್ಚಿನ ಹುರುಪು ತುಂಬುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.

ಬಿ.ಜೆ.ಪಿ. ಬೇರೆ ಪಕ್ಷಗಳ ದೌರ್ಬಲ್ಯಗಳ ಮೇಲೆ ಸವಾರಿ ಮಾಡಿ ನಕಾರಾತ್ಮಕ ರಾಜಕಾರಣ ಮಾಡಲು ಹೋಗುವುದಿಲ್ಲ. ಬದಲಾಗಿ ನಾವು ಹೇಗೆ ಜನಜೀವನದಲ್ಲಿ ಸಕಾರಾತ್ಮಕತೆಯನ್ನು ತರಬಹುದು ಎಂದು ಆಲೋಚಿಸಿ ರಾಜಕಾರಣ ಮಾಡುತ್ತೇವೆ. ಇದನ್ನು ಜನರು ಒಪ್ಪಿಕೊಂಡಿರುವುದು ಚುನಾವಣಾ ಫಲಿತಾಂಶದಿಂದ ಗೊತ್ತಾಗಿದೆ. ನಾವು ನಿರಂತರವಾಗಿ ಜನಸಂಪರ್ಕದಲ್ಲಿದ್ದು ಏನನ್ನು ಮಾಡಿದರೆ ಜನರಿಗೆ ಒಳಿತು ಎಂಬುದನ್ನು ಅವಲೋಕಿಸಿ ಅದಕ್ಕನುಗುಣವಾಗಿ ಯೋಜನೆಗಳನ್ನು ಹಾಕಿಕೊಂಡು ಅವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಪರಿಶ್ರಮಿಸುತ್ತೇವೆ ಎಂದು ವಿವರಿಸಿದ್ದಾರೆ.

ಬಿ.ಜೆ.ಪಿ. ಯಾವಾಗಲೂ ತನ್ನನ್ನು ಹೇಗೆ ಇನ್ನಷ್ಟು ಉತ್ತಮಗೊಳಿಸಿಕೊಳ್ಳಬಹುದು ಎಂದು ಪರಾಮರ್ಶೆ ಮಾಡಿಕೊಳ್ಳುತ್ತದೆ. ಉತ್ತಮವಾದುದು ಯಾರಲ್ಲೇ ಇದ್ದರೂ ಅದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇವೆ. ಜವಾಬ್ದಾರಿಯುತ ಪ್ರತಿಪಕ್ಷಗಳಿಂದಲೂ ನಾವು ಒಳಿತನ್ನು ಕಲಿತು ಅಳವಡಿಸಿಕೊಳ್ಳುತ್ತೇವೆ. ಸೋತ ಪಕ್ಷಗಳನ್ನೂ ಗೌರವದಿಂದಲೇ ನೋಡುತ್ತೇವೆ. ಆದರೆ ವಿರೋಧ ಪಕ್ಷಗಳ ಕಾರ್ಯವೈಖರಿ, ಯೋಜನೆಗಳ ಉದ್ದೇಶಗಳು ಜನಪರತೆಗೆ ಹಾಗೂ ರಾಷ್ಟ್ರಹಿತಕ್ಕೆ ವಿರುದ್ಧವಾಗಿದ್ದರೆ ಅದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

key words: support – BJP’s- politics-Minister- Dr. C.N. Ashwaththanarayana