ಸ್ವಾಮೀಜಿಗಳ ಹೋರಾಟ ಹಿಂದೂ ಸಮಾಜವನ್ನ ಒಡೆಯುವಂತಿದೆ-ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ.

ವಿಜಯಪುರ,ಜುಲೈ,25,2021(www.justkannada.in):  ಸಿಎಂ ಬದಲಾವಣೆ ವಿಚಾರ ಚರ್ಚೆಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪರ ಹಲವು ಮಠಾಧೀಶರು ಬ್ಯಾಟ್ ಬೀಸಿದ್ದು ಈ ನಡುವೆ ಇಂದು ಬೆಂಗಳೂರಿನಲ್ಲಿ ಸಮಾವೇಶ ಆಯೋಜಿಸಿದ್ದಾರೆ.jk

ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಟೀಕಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜಕೀಯದಲ್ಲಿ ಧರ್ಮವಿರಬೇಕು. ಧರ್ಮದಲ್ಲಿ ಎಂದೂ ರಾಜಕೀಯ ಬೆರೆಸಬಾರದು. ಸ್ವಾಮೀಜಿಗಳ ಹೋರಾಟ ಸಮಾಜಕ್ಕೆ ಕೆಟ್ಟ ಹೆಸರು ತರುವಂತಿದೆ. ಸ್ವಾಮೀಜಿಗಳ ಹೋರಾಟ ಹಿಂದೂ ಸಮಾಜವನ್ನ ಒಡೆಯುವಂತಿದೆ. ಆದ್ದರಿಂದ ಸಮಾಜದ ಸ್ವಾಮೀಜಿಗಳು ಎಲ್ಲವನ್ನೂ ಅರ್ಥೈಸಿಕೊಳ್ಳಿ ಎಂದು  ತಿಳಿಸಿದ್ದಾರೆ.

ಹಾಗೆಯೇ ರಾಜಕೀಯದಲ್ಲಿ ಧರ್ಮವಿರಬೇಕು. ಧರ್ಮದಲ್ಲಿ ಎಂದೂ ರಾಜಕೀಯ ಬೆರೆಸಬಾರದು ಎಂಬ ತತ್ವದಡಿ, ಯಾವುದೇ ಮಠ-ಮಾನ್ಯಗಳ ಮಠಾಧೀಶರನ್ನು ನೇಮಿಸುವಾಗ ರಾಜಕೀಯ ಪ್ರವೇಶಿಸಬಾರದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೆಲವೇ ಕೆಲವು ವೀರಶೈವ-ಲಿಂಗಾಯತ ಮಠಾಧೀಶರು ವ್ಯಕ್ತಿಯೊಬ್ಬರ ಪರವಾಗಿ ಬೀದಿಗೆ ಬಂದು ಲಾಬಿ ಮಾಡುವುದರಿಂದ, ರಾಜ್ಯದ ವಿವಿಧ ಸಮುದಾಯದವರು ಆ ಸಮುದಾಯದ ಮಠಾಧೀಶರ ಮೇಲೆ ವ್ಯತಿರಿಕ್ತ ಪರಿಣಾಮವಾಗಿ, ರಾಜಕೀಯ ಸಂಚಲನ ಉಂಟುಮಾಡುತ್ತದೆ. ಇದರಿಂದ ನಮ್ಮ ಸಮಾಜಕ್ಕೆ ಕಳಂಕ ಬರುತ್ತದೆ. ಹಿಂದೆ ಎಲ್ಲ ಜಾತಿಯ ಮಠಾಧೀಶರು, ದಾಸರು, ಶರಣರು, ಸಂತರು ಸಮಾನತೆಯನ್ನು ಪರಿಪಾಲಿಸುತ್ತಾ ಬಂದಿದ್ದರು. ಅಲ್ಲದೇ ಸಂಕುಚಿತ ಮನೋಭಾನೆಯಿಂದ ಬದುಕಿಲ್ಲ, ಬದುಕಲಿಲ್ಲ ಎಂದು  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

Key words: struggle – Swamiji- breaking down-Hindu -society- MLA-Basanagowda Patil Yatnal