ಕೆಆರ್‌ಎಸ್‌ ಬಳಿ ಕೇಳಿ ಬರುತ್ತಿದೆ ನಿಗೂಢ ಶಬ್ಧ

ಮಂಡ್ಯ:ಆ-18: ಕೆಆರ್‌ಎಸ್‌ ತನ್ನ ಮಡಿಲೊಳಗೆ ಕಲ್ಲು ಗಣಿಗಾರಿಕೆ ಕೆಂಡವನ್ನೂ ಕಟ್ಟಿಕೊಂಡಿದ್ದು, ಅಣೆಕಟ್ಟೆ ಸನಿಹದಲ್ಲೇ ಆಗಾಗ ನಿಗೂಢ ಶಬ್ಧಗಳು ಕೇಳಿ ಬರುತ್ತಿವೆ. ಇದೆಲ್ಲವೂ ಕಲ್ಲು ಗಣಿ ಸ್ಫೋಟಗಳೇ ಎಂಬ ಅನುಮಾನ ದಟ್ಟವಾಗಿದೆ. ಆದರೆ, ಈ ವಿಷಯವಾಗಿ ತನಿಖೆಯಾಗುತ್ತಿಲ್ಲ, ಅಧಿಕಾರಿಗಳು ಮೌನ ಮುರಿಯುತ್ತಿಲ್ಲ. ಹೀಗಾಗಿ, ಅಣೆಕಟ್ಟಿನ ಸುರಕ್ಷತೆ ಬಗೆಗಿನ ಜನರ ಆತಂಕ ಮಾತ್ರ ದೂರವಾಗುತ್ತಿಲ್ಲ.

ಕೆಆರ್‌ಎಸ್‌ ಬಳಿ ಭಾರೀ ಶಬ್ಧಗಳು ಕೇಳಿ ಬರುವುದು ಹೊಸದೇನಲ್ಲ. ಕಳೆದೊಂದು ವರ್ಷದಿಂದ ಅನೇಕ ಬಾರಿ ಇಂತಹ ನಿಗೂಢ ಶಬ್ಧಗಳು ಕೇಳಿ ಬಂದು ಜನರನ್ನು ಬೆಚ್ಚಿ ಬೀಳಿಸುತ್ತಲೇ ಇವೆ.

ಭೂಕಂಪನ ಹಾಗೂ ಗಣಿಗಾರಿಕೆ ಚಟುವಟಿಕೆಗಳ ಉಸ್ತುವಾರಿ ಮಾಡುತ್ತಿರುವ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ಮಾತ್ರ ರಹಸ್ಯವಾಗಿ ಕೇಳಿ ಬರುತ್ತಿರುವ ಶಬ್ಧಗಳ ಮೂಲಸ್ಥಳ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ಎಂದು ಒಂದು ವರ್ಷದ ಹಿಂದೆಯೇ ನಿಖರವಾಗಿ ಗುರುತಿಸಿದೆ. 2018ರ ಸೆಪ್ಟೆಂಬರ್‌ 25ರಂದು ಇದೇ ಮಾದರಿಯ ಶಬ್ಧ ಕೇಳಿ ಬಂದಾಗ ವೈಜ್ಞಾನಿಕವಾಗಿ ಉಪಗ್ರಹ ಚಿತ್ರಗಳ ಸಹಿತ ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಶಬ್ಧ ಕೇಳಿ ಬಂದ ಸ್ಥಳ ಹಾಗೂ ಅದರ ತೀವ್ರತೆಯನ್ನು ದಾಖಲಿಸಿತ್ತು. ಈ ಭಾರೀ ಸದ್ದು ಬೇಬಿ ಬೆಟ್ಟದಿಂದ ಕೇಳಿ ಬಂದಿದ್ದು, ಆ ಸದ್ದು ಕಲ್ಲು ಗಣಿ ಸ್ಫೋಟ ಎನ್ನುವುದನ್ನು ಸ್ಪಷ್ಟಪಡಿಸಿತ್ತು. ಅಲ್ಲದೆ, ಗಣಿಗಾರಿಕೆ ನಡೆಯುವ ಸಮೀಪದಲ್ಲೇ 80 ವರ್ಷ ಹಳೆಯದಾದ ಅಣೆಕಟ್ಟು ಇದೆ. ಅದರ ಸುರಕ್ಷತೆ ಬಗ್ಗೆ ತಪಾಸಣೆ ನಡೆಸುವಂತೆಯೂ ಜಿಲ್ಲಾಡಳಿತಕ್ಕೆ ಸಲಹೆ ನೀಡಿತ್ತು.

ಕೇಂದ್ರ ವರದಿ ನೀಡಿದ ಬಳಿಕ ಪುಣೆ ವಿಜ್ಞಾನಿಗಳ ತಂಡದಿಂದ ಪರಿಶೀಲನೆ ನಡೆಸುವ ಪ್ರಯತ್ನವೂ ನಡೆದಿತ್ತು. ಡಿಸೆಂಬರ್‌ ತಿಂಗಳಲ್ಲಿ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದೆಯೋ?, ಇಲ್ಲವೋ? ಎಂಬ ಬಗ್ಗೆ ವರದಿ ನೀಡಲು ಆಗಮಿಸಿದ್ದ ವಿಜ್ಞಾನಿಗಳು ಪರಿಶೀಲನೆಯನ್ನೇ ನಡೆಸದೆ ಹಿಂತಿರುಗಿದ್ದರು.

ಈವರೆಗೆ ಒಮ್ಮೆ ಮಾತ್ರ ಭಾರೀ ಶಬ್ಧ ಕೇಳಿ ಬಂದು ಭೂಮಿ ನಡುಗಿದ ಅನುಭವವಾಗುತ್ತಿತ್ತು. ಆದರೆ, ಶನಿವಾರ ಸಂಜೆ 6 ರಿಂದ 7 ಬಾರಿ ಸರಣಿಯಾಗಿ ತೀವ್ರತರ ಶಬ್ಧಗಳು ಕೇಳಿ ಬಂದು ತಲ್ಲಣ ಉಂಟು ಮಾಡಿವೆ. ಆದರೆ, ಸರ್ಕಾರ ಹಾಗೂ ಅಧಿಕಾರಿ ವರ್ಗ ಬಹಳ ನಿರ್ಲಕ್ಷ್ಯದಿಂದ ಇದನ್ನು ಕಾಣುತ್ತಿದೆ. ಕೆಆರ್‌ಎಸ್‌ ಇರುವ ಜಾಗದಲ್ಲೇ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವಿದ್ದರೂ 2018ರ ಸೆ.26ರ ಬಳಿಕ ಇದುವರೆಗೂ ಭಾರೀ ಶಬ್ಧಗಳು ಕೇಳಿ ಬರುತ್ತಿರುವ ಬಗ್ಗೆ ಯಾವುದೇ ವರದಿಯನ್ನು ನೀಡಿಲ್ಲ.

ರಚನೆಯಾಗದ ಸುರಕ್ಷತಾ ಸಮಿತಿ: ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ನೀಡಿದ ಬಳಿಕ ಅಣೆಕಟ್ಟು ಸುರಕ್ಷತಾ ಸಮಿತಿ ರಚಿಸಿ ಕೆಆರ್‌ಎಸ್‌ ಜಲಾಶಯ ಎಷ್ಟು ಸುರಕ್ಷಿತವಾಗಿದೆ. ಕಳೆದ 80 ವರ್ಷಗಳಲ್ಲಿ ಅಣೆಕಟ್ಟು ಸುತ್ತಲಿನ ಭೂಮಿಯ ಪದರಗಳೊಳಗೆ ಆಗಿರುವ ಬದಲಾವಣೆಗಳೇನು?, ಕಲ್ಲು ಗಣಿಗಾರಿಕೆ ಪರಿಣಾಮದಿಂದ ಅಣೆಕಟ್ಟೆಯ ಮೇಲೆ ಎಷ್ಟರ ಮಟ್ಟಿನ ಪರಿಣಾಮಗಳಾಗುತ್ತಿವೆ ಎಂಬ ಸೂಕ್ಷ್ಮ ಅಂಶಗಳನ್ನು ಗುರುತಿಸುವ ಸಣ್ಣದೊಂದು ಪ್ರಯತ್ನವನ್ನೂ ನಡೆಸಿಲ್ಲ. ರಾಜ್ಯ ಸರ್ಕಾರವಂತೂ ಕೆಆರ್‌ಎಸ್‌ ಅಣೆಕಟ್ಟಿನ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ನಿಷೇಧಿತ ಪ್ರದೇಶ: ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಹೊನಗಾನಹಳ್ಳಿ, ಚಿನಕುರಳಿ ಬಳಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಗಳೆಲ್ಲವೂ ನಿಷೇಧಿತ ಪ್ರದೇಶಗಳು. ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಹೊರಜಗತ್ತಿನ ಅರಿವಿಗೇ ಬರುವುದಿಲ್ಲ. ಗಣಿ ಚಟುವಟಿಕೆಗಳು ಬಹಳ ರಹಸ್ಯವಾಗಿ ನಡೆಯುತ್ತಿವೆ.ಗಣಿ ಚಟುವಟಿಕೆಗಳಲ್ಲಿ ಬಳಸುವ ಸ್ಫೋಟಕಗಳ ಬಗ್ಗೆ ಯಾರಿಗೂ, ಯಾವ ಮಾಹಿತಿಯೂ ಇಲ್ಲ. ಅಲ್ಲಿ ನಡೆಯುತ್ತಿರುವುದು ಮೆಗ್ಗರ್‌ ಬ್ಲಾಸ್ಟೋ ಅಥವಾ ಬೋರ್‌ ಬ್ಲಾಸ್ಟೋ?. ಎಷ್ಟು ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳನ್ನು ಬಳಸುತ್ತಿದ್ದಾರೆ?. ನಿಷೇಧಿತ ಸ್ಫೋಟಕಗಳನ್ನು ಬಳಸುತ್ತಿದ್ದಾರೆಯೇ?, ಸ್ಫೋಟಕಗಳನ್ನು ಬಳಸಿ ಎಷ್ಟು ಅಡಿ ಆಳದಲ್ಲಿ ಕಲ್ಲುಗಳನ್ನು ಸಿಡಿಸುತ್ತಿ ದ್ದಾರೆ ಎಂಬೆಲ್ಲಾ ಅಂಶಗಳು ಯಾರ ಗಮನಕ್ಕೂ ಬರುತ್ತಲೇ ಇಲ್ಲ.

ಕಲ್ಲು ಗಣಿಯಲ್ಲಿ ಕೆಲಸ ಮಾಡುತ್ತಿರುವವರು ಮೂಲತಃ ಸ್ಥಳೀಯರಲ್ಲ. ಅವರು ಸ್ಥಳೀಯರೊಂದಿಗೆ ಬೆರೆಯುವುದಕ್ಕೂ ಗಣಿ ಮಾಲೀಕರು ಅವಕಾಶನೀಡುತ್ತಿಲ್ಲ. ಗಣಿ ಚಟುವಟಿಕೆ ನಡೆಯುವ ಸ್ಥಳಗಳಲ್ಲಿ ಹಲವಾರು ಸ್ಫೋಟಗಳು ಸಂಭವಿಸಿ ಅಮಾಯಕಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ. ಅವುಗಳಲ್ಲಿ ಕೆಲವೊಂದು ಪ್ರಕರಣಗಳು ಬೆಳಕಿಗೆ ಬಂದರೂ ಕೆಲವೇ ದಿನಗಳಲ್ಲಿ ಭೂಗತವಾಗುತ್ತಿವೆ.

ಅಧಿಕಾರಿಗಳ ಶಾಮೀಲು: ಬೇಬಿ ಬೆಟ್ಟ ಸೇರಿ ಇನ್ನಿತರ ಕಡೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಅಧಿಕಾರಿಗಳೇ ಬೆಂಬಲವಾಗಿ ನಿಂತಿರುವುದು ಜಗಜ್ಜಾಹೀರಾಗಿದೆ. ಉಪವಿಭಾಗಾಧಿಕಾರಿ, ತಹಸೀಲ್ದಾರ್‌, ಪೊಲೀಸ್‌ ಇಲಾಖೆಯ ಅಧಿಕಾರಿಗಳೆಲ್ಲರೂ ಮಾಲೀ ಕರ ಪರವಾಗಿಯೇ ಇದ್ದಾರೆ. ಪರಿಣಾಮ ನಿತ್ಯವೂ ರಾಜಾರೋಷವಾಗಿ ಗಣಿಗಾರಿಕೆ ನಡೆಯುತ್ತಿದೆ.

ಡಿವೈಎಸ್ಪಿ ವರದಿಗೂ ಬೆಲೆ ಇಲ್ಲ
ವರ್ಷದ ಹಿಂದೆ ಶ್ರೀರಂಗಪಟ್ಟಣದ ಡಿವೈಎಸ್ಪಿಯೊಬ್ಬರು ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಕಲ್ಲು ಗಣಿಗಾರಿಕೆ, ಜಲ್ಲಿ ಕ್ರಷರ್‌ ಘಟಕ, ಕಲ್ಲು ಪುಡಿ, ಜಲ್ಲಿ, ಸೈಜುಗಲ್ಲು, ದಿಂಡುಕಲ್ಲುಗಳ ಸಾಗಣೆಯನ್ನು ನಿರ್ಬಂಧಿಸಿ, ನಿಷೇಧಿಸುವುದು ಸೂಕ್ತ ಎಂಬ ನಿಲುವನ್ನು ಪರೋಕ್ಷವಾಗಿ ಉಲ್ಲೇಖೀಸಿದ್ದರು. ಅಲ್ಲದೆ, ಕಲ್ಲು ಗಣಿಗಾರಿಕೆಗೆ ಗುತ್ತಿಗೆ ಪಡೆದಿರುವವರು ಹಾಗೂ ಕಲ್ಲು ಗಣಿ ಗುತ್ತಿಗೆಗೆ ಅರ್ಜಿ ಸಲ್ಲಿಸಿರುವವರು ಗಣಿ ಗುತ್ತಿಗೆ ನವೀಕರಣವಾಗದಿದ್ದರೂ ಕಣ್ತಪ್ಪಿಸಿ ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. 2011ರಿಂದ ಈವರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಪೊಲೀಸ್‌ ಇಲಾಖೆ ನೇತೃತ್ವದಲ್ಲಿ ದಾಳಿ ನಡೆಸಿ 40 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಪಾರ ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳನ್ನು ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದು, ಈ ಪೈಕಿ ಒಂದು ಲಾರಿಯನ್ನು ವಶಪಡಿಸಿಕೊಂಡಿರುವುದನ್ನೂ ದಾಖಲಿಸಿದ್ದರು.
ಕೃಪೆ:ವಿಜಯವಾಣಿ

ಕೆಆರ್‌ಎಸ್‌ ಬಳಿ ಕೇಳಿ ಬರುತ್ತಿದೆ ನಿಗೂಢ ಶಬ್ಧ
Stone-mining-in-KRS