ಸೆ.27ರ ಭಾರತ್ ಬಂದ್ ಗೆ ರಾಜ್ಯ ರೈತ ಸಂಘ, ಹಸಿರು ಸೇನೆ ಬೆಂಬಲ: ಅಂದು ಪ್ರತಿಭಟನಾ ಮೆರವಣಿಗೆ.

ಮೈಸೂರು,ಸೆಪ್ಟಂಬರ್, 21,2021(www.justkannada.in):  ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಸೆಪ್ಟಂಬರ್ 27ರ ಭಾರತ್ ಬಂದ್ ಗೆ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಸಿರು ಸೇನೆ ಬೆಂಬಲ ನೀಡಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮತ್ತು ಮಾಧ್ಯಮ ಕಾರ್ಯದರ್ಶಿ ಮಂಜು ಕಿರಣ್, ಸೆಪ್ಟಂಬರ್ 27 ಕ್ಕೆ ರೈತ ವಿರೋಧಿ ಕೃಷಿ ಕಾಯ್ದೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿ 1 ವರ್ಷ ತುಂಬುತ್ತದೆ. ಅದೇ ದಿನ ಈ ಕರಾಳ ಕೃಷಿ ಕಾಯ್ದೆಗಳನ್ನ ವಿರೋಧಿಸಿ ದೇಶದಾದ್ಯಂತ ಬಂದ್ ಆಚರಿಸಲಾಗುವುದು. ಬಂದ್ ಆಚರಣೆಯ ದಿನ‌ ಯಾವುದೇ ವರ್ತಕರಿಗೆ ಅಂಗಡಿ ಮುಂಗಟ್ಟು ಮುಚ್ಚುವಂತೆ ಒತ್ತಡ ಹೇರದೆ ಜಾಗೃತಿ ಮೂಡಿಸಲಾಗುವುದು ಎಂದರು.

ಅಲ್ಲದೆ ಅಂದು ಮೈಸೂರಿನ ಗನ್ ಹೌಸ್ ನಿಂದ ಮೆರವಣಿಗೆ ಆರಂಭಿಸಿ, ಮಹಾನಗರ ಪಾಲಿಕೆ, ದೇವರಾಜ ಅರಸು ರಸ್ತೆ, ಶಿವರಾಮಪೇಟೆ, ಸಯ್ಯಾಜಿ ರಾವ್ ರಸ್ತೆ, ದನ್ವಂತ್ರಿ ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಹಕ್ಕೊತ್ತಾಯ ಮಾಡಲಾಗುವುದು ಎಂದು ವಿದ್ಯಾಸಾಗರ್ ಮತ್ತು ಮಂಜು‌ಕಿರಣ್ ಹೇಳಿದರು.

Key words: State- Farmers- Association- Support –sep 27- Bharat Bandh-mysore