ಶ್ರೀನಿವಾಸ್ ಪ್ರಸಾದ್ ದಲಿತರ ಕಷ್ಟಕ್ಕಾಗದ ರಾಜಕಾರಣಿ- ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿರುಗೇಟು.

ಮೈಸೂರು,ಡಿಸೆಂಬರ್,17,2022(www.justkannada.in):  ಸಂಸದ ಶ್ರೀನಿವಾಸ್ ಪ್ರಸಾದ್ ಮತ್ತು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ನಡುವಿನ ವಾಕ್ಸಮರ, ವಾಗ್ವಾದ ಮುಂದುವರೆದಿದ್ದು ಇದೀಗ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಕೌಂಟರ್ ಅಟ್ಯಾಕ್ ಮಾಡಿದ್ದಾರೆ.

ಚುನಾವಣೆ ವೇಳೆ 15 ಕೋಟಿ ಪಡೆದು ಅದರಲ್ಲಿ 4 ರಿಂದ 5 ಕೋಟಿ ಖರ್ಚು ಮಾಡಿ 10 ಕೋಟಿ ಮನೆಗೆ ತಗೊಂಡು ಹೋಗಿದ್ದರು ಎಂದು ಆರೋಪಿಸಿದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ಗೆ ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ತಿರುಗೇಟು ನೀಡಿದ ಹೆಚ್,ವಿಶ್ವನಾಥ್, ಚುನಾವಣೆ ಅಂದ ಮೇಲೆ ಪಕ್ಷ ದುಡ್ಡು ಕೊಡೋದು ಸಹಜ. ಲೆಕ್ಕ ಕೇಳಲು ಶ್ರೀನಿವಾಸ್ ಪ್ರಸಾದ್ ಯಾರು ? ಎಂದು ಪ್ರಶ್ನಿಸಿದರು.

ಹುಣಸೂರು ಉಪ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಸೈನಿಕನ ಕೈಯಲ್ಲಿ ದುಡ್ಡು ಕೊಟ್ಟು ಕಳುಹಿಸಿದ್ದರು. ಸೈನಿಕ ಹುಣಸೂರಿಗೆ ಬರಲಿಲ್ಲ. ಈ ವಿಚಾರವನ್ನು ಈಗಾಗಲೇ ಹೇಳಿದ್ದೇನೆ. ಎಲ್ಲಾ ಚುನಾವಣೆಗಳಲ್ಲೂ ಪಕ್ಷದವರು ದುಡ್ಡು ಕೊಡುತ್ತಾರೆ. ಶ್ರೀನಿವಾಸ್ ಪ್ರಸಾದ್ ಅವರಿಗೆ ಅವರಿದ್ದ ಪಕ್ಷಗಳು ಹಣ ನೀಡಲ್ಲವೇ.? ನನಗೆ ಎಷ್ಟು ಕೋಟಿ ಬಂದಿದೆ ಅಂತ ಶ್ರೀನಿವಾಸ್ ಪ್ರಸಾದ್ ಗೆ ಏನು ಗೊತ್ತು. ಅವರಿಗೆ ಗೊತ್ತಿಲ್ಲದ ವಿಚಾರವನ್ನು ಯಾಕೆ ಮಾತಾನಾಡಬೇಕು ಎಂದು ಕಿಡಿಕಾರಿದರು.

ಶ್ರೀನಿವಾಸ್ ಪ್ರಸಾದ್ ದಲಿತರ ಕಷ್ಟಕ್ಕಾಗದ ರಾಜಕಾರಣಿ. ಮುರುಘ ಸ್ವಾಮಿಜೀ ದಲಿತರ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ನೀಡಿದ. ಅಂಬೇಡ್ಕರ್ ಮೊಮ್ಮಗ ಆನಂದ ತೇಲ್ತುಂಬ್ದೆ ಅವರನ್ನ ಬಂಧಿಸಿ ಜೈಲಿನಲ್ಲಿ ಇಡಲಾಗಿದೆ. ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ.  ಯಾವ ಸಂದರ್ಭದಲ್ಲಾದರೂ ನೀವು ಧ್ವನಿ ಎತ್ತಿದ್ದೀರಾ..? ನೀವು ವೈಟ್ ಕಾಲರ್ ರಾಜಕಾರಣಿ. ಯಾವುದೋ ಬೀದಿ ರೌಡಿ ರೀತಿ ಮಾತನಾಡಿದ್ದೀರಿ. ನನ್ನ ಬಗ್ಗೆ ವಿರುದ್ಧ ಬಳಸಿರುವ ಪದಗಳನ್ನ ಜನ ಕ್ಷಮಿಸುವುದಿಲ್ಲ ಎಂದು ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

Key words: Srinivas Prasad –politician-MLC-H. Vishwanath- Counter- attack