ಟೀಂ ಇಂಡಿಯಾ ವಿರುದ್ಧ ಟಿ-20 ಸರಣಿಗೆ ಶ್ರೀಲಂಕಾ ತಂಡ ಪ್ರಕಟ

ಬೆಂಗಳೂರು, ಜನವರಿ 02, 2019 (www.justkannada.in): ಭಾರತ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ಗುವಾಹಟಿಯಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಟ್ವೆಂಟಿ-20 ಸರಣಿಗೆ ತಂಡವನ್ನು ಪ್ರಕಟಿಸಿದೆ.

ನುವಾನ್ ಪ್ರದೀಪ್ ಗಾಯಗೊಂಡಿದ್ದು, ಅವರ ಬದಲಿಗೆ ಕಸುನ್ ರಜಿಥಾ ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರದೀಪ್ ಈ ಹಿಂದೆ ಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಭ್ಯಾಸದ ವೇಳೆ ಗಾಯಗೊಂಡಿದ್ದರು. ಇದೀಗ ಅವರು ಭಾರತ ಪ್ರವಾಸದಿಂದ ಹೊರಗುಳಿದಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ತಿಳಿಸಿದೆ.

ಶ್ರೀಲಂಕಾದ ಶಿಕ್ಷಣ, ಕ್ರೀಡೆ ಹಾಗೂ ಯುವಜನ ವ್ಯವಹಾರ ಖಾತೆಯ ಸಚಿವ ದಲ್ಲಾಸ್ ಅಲಹಪ್ಪೆರುಮಾ 16 ಸದಸ್ಯರುಗಳನ್ನು ಒಳಗೊಂಡ ಲಂಕಾ ತಂಡಕ್ಕೆ ಹಸಿರು ನಿಶಾನೆ ತೋರಿದರು.

ತಂಡದಲ್ಲಿ ಅವಿಷ್ಕಾ ಫೆರ್ನಾಂಡೊ, ಧನಂಜಯ ಡಿಸಿಲ್ವಾ, ಕುಸಾಲ್ ಮೆಂಡಿಸ್, ಆಯಂಜೆಲೊ ಮ್ಯಾಥ್ಯೂಸ್ ಮತ್ತಿತರರಿದ್ದಾರೆ. ಪಾಕಿಸ್ತಾನಕ್ಕೆ ದೀರ್ಘ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡ ಭಾರತಕ್ಕೆ ಕಿರು ಪ್ರವಾಸ ಕೈಗೊಳ್ಳಲಿದೆ. ಗುವಾಹಟಿ ಮೊದಲ ಪಂದ್ಯದ ಆತಿಥ್ಯವನ್ನು ವಹಿಸಿಕೊಂಡಿದ್ದು, ಉಳಿದೆರಡು ಪಂದ್ಯಗಳು ಇಂದೋರ್ ಹಾಗೂ ಪುಣೆ ನಗರದಲ್ಲಿ ನಡೆಯಲಿವೆ.