ಪತ್ರಕರ್ತೆ ಶ್ರುತಿ ‘ಫಿಲ್ಮಿ ಎಸ್ಕೇಪ್ಸ್ ಇನ್ ಕರ್ನಾಟಕ’ ಪುಸ್ತಕಕ್ಕೆ ಮುನ್ನಡಿ ಬರೆದ ಶಿವಣ್ಣ

ಮೈಸೂರು, ಆಗಸ್ಟ್ 18, 2020(www.justkannada.in): ಸ್ಯಾಂಡಲ್ ವುಡ್ ತಾರೆಯರ ನೆಚ್ಚಿನ ಶೂಟಿಂಗ್ ಸ್ಪಾಟ್ ಗಳು ಯಾವುದು? ಯಾವ್ಯಾವ ಚಿತ್ರಗಳು ಎಲ್ಲೆಲ್ಲಿ ಚಿತ್ರೀಕರಣಗೊಂಡಿವೆ… ಹೀಗೆ ಅಪರೂಪದ ಮಾಹಿತಿಯುಳ್ಳ ಪುಸ್ತಕವೊಂದು ಹೊರ ಬರುತ್ತಿದೆ… ವಿಶೇಷ ಎಂದರೆ ಚಿತ್ರಕ್ಕೆ ಮುನ್ನುಡಿ ಬರೆದಿರುವುದು ಹ್ಯಾಟ್ರಿಕ್ ಹೀರೋ ಶಿವಣ್ಣ!

ಹೌದು. ನಟ, ನಿರ್ದೇಶಕ ಎಂ.ಜಿ. ಶ್ರೀನಿವಾಸ್ ಪತ್ನಿ, ಪತ್ರಕರ್ತೆ ಶ್ರುತಿ ಇಂದಿರ ಲಕ್ಷ್ಮಿನಾರಾಯಣ ಅವರು ಇಂತಹದೊಂದು ಪ್ರಯತ್ನಕ್ಕೆ ಕೈ ಹಾಕಿದ್ದು, ‘ಫಿಲ್ಮಿ ಎಸ್ಕೇಪ್ಸ್ ಇನ್ ಕರ್ನಾಟಕ’ ಪುಸ್ತಕ ಬರೆದಿದ್ದಾರೆ.

ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು ಹೊಂದಿರುವ ಶ್ರುತಿ, 62 ಪುಟಗಳ ಈ ಪುಸ್ತಕವನ್ನು ಇಂಗ್ಲಿಷ್ ನಲ್ಲಿ ಹೊರ ತಂದಿದ್ದಾರೆ. ಲೋನ್ಲಿ ಪ್ಲಾನೆಟ್ ಸಹಯೋಗದೊಂದಿಗೆ ಈ ಪುಸ್ತಕವನ್ನು ಹೊರತಂದಿದ್ದಾರೆ.

ಕನ್ನಡ ಸಿನಿಮಾಗಳು, ಲೊಕೇಶನ್ ಹಾಗೂ ರಾಜ್ಯದ ಸಂಸ್ಕೃತಿ, ಕರ್ನಾಟಕದ ಅಪರೂಪದ ತಾಣಗಳು, ಚಿತ್ರೀಕರಣಕ್ಕೆ ಯೋಗ್ಯವಾದ ಸ್ಥಳಗಳು, ಆ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವ ಸಿನಿಮಾಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಚಾಮರಾಜನಗರದಿಂದ ಬೀದರ್​ವರೆಗಿನ ಆಹಾರ ಪದ್ಧತಿ ಬಗ್ಗೆಯೂ ಫೋಟೋ ಸಹಿತ ಮಾಹಿತಿ ‘ಫಿಲ್ಮಿ ಎಸ್ಕೇಪ್ಸ್ ಇನ್ ಕರ್ನಾಟಕ’ನಲ್ಲಿದೆ.

ಮುನ್ನುಡಿ ಬರೆದ ಶಿವಣ್ಣ: ವಿಶೇಷ ಎಂದರೆ ಮೊದಲ ಬಾರಿಗೆ ಸೆಂಚುರಿ ಸ್ಟಾರ್ ಶಿವಣ್ಣ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.