ಸಿಎಂ ಬಿಎಸ್ ವೈ ಬಗ್ಗೆ ಅನುಕಂಪ: ಡಿಸಿಎಂ ಸ್ಥಾನ ಕುರಿತು ಸಚಿವ ಆರ್.ಅಶೋಕ್ ಗೆ ಕಾಲೆಳೆದ ವಿಪಕ್ಷ ನಾಯಕ ಸಿದ್ದರಾಮಯ್ಯ…

ಬೆಂಗಳೂರು,ಅ,10,2019(www.justkannada.in):  ಆರ್.ಅಶೋಕ್ ಡಿಸಿಎಂ ಆಗಬೇಕಿತ್ತು. ಆದರೆ ಮಾಡಲಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸಚಿವ ಆರ್.ಅಶೋಕ್ ಅವರ ಕಾಲೆಳೆದ ಪ್ರಸಂಗ ನಡೆಯಿತು.

ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು ಕಲಾಪದಲ್ಲಿ ಮಾತನಾಡುತ್ತಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ, ನನಗಿರುವ ಮಾಹಿತಿ ಪ್ರಕಾರ  ಸಿಎಂ ಬಿಎಸ್ ಯಡಿಯೂರಪ್ಪ ಭೇಟಿಗೆ ಪ್ರಧಾನಿ ಮೋದಿ ಅವಕಾಶ ನೀಡಲಿಲ್ಲ. ಮಾಧ್ಯಮದಲ್ಲೂ ಇದೇ ಬಂದಿದೆ ಎಂದರು.

ಸಿದ್ಧರಾಮಯ್ಯ ಮಾತಿಗೆ ಸಚಿವ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಸಿಎಂ ಬಿಎಸ್ ವೈ ಭೇಟಿ ವೇಳೆ ನೀವಿದ್ರಾ ಎಂದು ಸಿದ್ಧರಾಮಯ್ಯ ಆರ್.ಅಶೋಕ್ ಗೆ ಪ್ರಶ್ನಿಸಿದಾಗ ನಾನಿರಲಿಲ್ಲ ಡಿಸಿಎಂ ಅಶ್ವಥ್ ನಾರಾಯಣ್ ಇದ್ದರು ಎಂದು ಉತ್ತರಿಸಿದರು. ಈ ವೇಳೆ  ಆರ್.ಅಶೋಕ್ ಗೆ ಕಿಚಾಯಿಸಿದ ಸಿದ್ದರಾಮಯ್ಯ ನೀವು ಡಿಸಿಎಂ ಅಲ್ವಲ್ಲ.  ಪಾಪ ಆರ್.ಅಶೋಕ್ ಡಿಸಿಎಂ ಆಗಬೇಕಿತ್ತು ಎಂದು ಕಾಲೆಳೆದರು. ಈ ಸಮಯದಲ್ಲಿ ಆರ್.ಅಶೋಕ್ ನಾನೇ ಬೇಡ ಅಂದೇ ಸರ್ ಎಂದರು.

ಇನ್ನು ವಿಧಾನಸಭೆ ಕಲಾಪದಲ್ಲಿ ಮಾತನಾಡುತ್ತಿದ್ದ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ಅನುಕಂಪದ ಮಾತುಗಳನ್ನಾಡಿದರು. ಸಿಎಂ ಬಿಎಸ್ ಯಡಿಯೂರಪ್ಪರನ್ನ ಮುಗಿಸಲು ಇಬ್ಬರು ನಾಯಕರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್  ಹೇಳಿಕೆ ಸಮರ್ಥಿಸಿಕೊಂಡ ಸಿದ್ಧರಾಮಯ್ಯ ಯತ್ನಾಳ್ ಸತ್ಯವನ್ನೇ ಹೇಳಿದ್ದಾರೆ.  ಅದು ಬೇರೆಯವರಿಗೆ ಕಹಿಯಾಗಿದೆ. ಡೋಟ್ ವರಿ ಮಿಸ್ಟರ್ ಯತ್ನಾಳ್ ಎಂದು ಸಿದ್ಧರಾಮಯ್ಯ ಹೇಳಿದರು.

ಹಾಗೆಯೇ ಸಿಎಂ ಬಿಎಸ್ ಯಡಿಯೂರಪ್ಪ  ಬಿಜೆಪಿ ಹೈಕಮಾಂಡ್ ಗೆ ಒಲ್ಲದ ಶಿಶು.  ಬಿಎಸ್ ವೈಗೆ ನನಗೆ ಇದ್ದಷ್ಟು ಸ್ವಾತಂತ್ರ ಸಿಗುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ  ಹೇಳಿದರು.

Key words: session-siddaramaiah-R.ashok-DCM-position-cm bs yeddyurappa