ಹಿರಿಯ ಪತ್ರಕರ್ತ ಅಪರಂಜಿ ಮದ್ದೂರಾವ್ ಇನ್ನಿಲ್ಲ.

ರಾಯಚೂರು,ಡಿಸೆಂಬರ್,2,2021(www.justkannada.in):  ರಾಯಚೂರಿನ ಹಿರಿಯ ಪತ್ರಕರ್ತ ಅಪರಂಜಿ ಮದ್ದೂರಾವ್ (85) ಇಂದು ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಅಪರಂಜಿ ಮದ್ದೂರಾವ್  ಅವರು ಪತ್ನಿ, ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. ಬಿಎ ಎಲ್ ಎಲ್ ಬಿ ಪದವೀಧರರಾಗಿದ್ದ ಅವರು 70ರ ದಶಕದಲ್ಲಿ ಪತ್ರಿಕಾ ರಂಗ ಪ್ರವೇಶಿಸಿದ್ದರು. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ , ದ ಹಿಂದು,  ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.

ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ರಾಯಚೂರಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅತ್ಯಂತ ಹಿರಿಯರಾಗಿದ್ದ ಅವರು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಾಕಷ್ಟು ಆಸಕ್ತಿ ವಹಿಸುತ್ತಿದ್ದರು.  ಜಿಲ್ಲೆಯ ರಾಜಕೀಯ, ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಸಮಗ್ರ ಮಾಹಿತಿ ಹೊಂದಿದ್ದರು. ಅವರನ್ನು ರಾಯಚೂರಿನ ಎನ್ ಸೈಕ್ಲೊಪಿಡಿಯಾ ಎಂದೇ ಕರೆಯಲಾಗುತ್ತಿತ್ತು. ಅವರ ನಿಧನದಿಂದ ರಾಯಚೂರಿನ ಜಿಲ್ಲಾ ಪತ್ರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

Key words: Senior- journalist -Aparanji Maddurao – no more