ರೌಡಿ ಶೀಟರ್ ಬಬ್ಲಿ ಹತ್ಯೆ ಪ್ರಕರಣ: ಗುಂಡು ಹಾರಿಸಿ ಇಬ್ಬರು ಆರೋಪಿಗಳ ಬಂಧನ.

ಬೆಂಗಳೂರು,ಜುಲೈ,21,2021(www.justkannada.in):  ಬ್ಯಾಂಕ್ ಒಳಗೆ ನುಗ್ಗಿ ರೌಡಿಶೀಟರ್ ಬಬ್ಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.jk

ಪ್ರದೀಪ್ ಅಲಿಯಾಸ್ ಚೊಟ್ಟೆ, ರವಿ ಬಂಧಿತ ಆರೋಪಿಗಳು. ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ  ಆರೋಪಿಗಳಿಬ್ಬರು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಇಬ್ಬರು ಆರೋಪಿಗಳಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಪ್ರದೀಪ್ ಜೈಲಿನಲ್ಲಿರುವ ರೌಡಿಶೀಟರ್ ಶಿವುನ ಶಿಷ್ಯ.

ಜುಲೈ 19 ರಂದು ಕೋರಮಂಗಲದ ಬ್ಯಾಂಕ್ ಗೆ ಪತ್ನಿ ಜೊತೆ ತೆರಳಿದ್ದ ರೌಡಿಶೀಟರ್ ಬಬ್ಲಿಯನ್ನ 8 ಜನರ ತಂಡ ಬ್ಯಾಂಕ್ ಒಳಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಬಬ್ಲಿ ರೌಡಿಶೀಟರ್ ಶಿವು ಮೇಲೆ ದಾಳಿ ಮಾಡಿದ್ದನು. ಇದೇ ದ್ವೇಷದ ಹಿನ್ನೆಲೆ ಕೊಲೆ ಮಾಡಲಾಗಿತ್ತು ಎನ್ನಲಾಗಿದೆ.

ಪ್ರಕರಣ ಸಂಬಂಧ ಜೈಲಿನಲ್ಲಿರುವ ಶಿವುವನ್ನ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಕೊಲೆ ಪ್ರಕರಣ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ. ಇದೇ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನ ಬಂಧಿಸಲು ತೆರಳಿದ್ದು ಈ ವೇಳೆ ಬೇಗೂರು ಕೆರೆ ಬಳಿ ಎಸ್ ಐ ಸಿದ್ಧಪ್ಪ ಹಾಗೂ ಪೊಲೀಸರ ಮೇಲೆಯೇ ಆರೋಪಿಗಳಾದ ಪ್ರದೀಪ್ ಮತ್ತು ರವಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Key words: Rowdy Sheeter- Bubbly –Murder- Case- Arrest -two accused -arrest