ಪ್ರಕ್ಷುಬ್ಧತೆ ಸೃಷ್ಟಿಸುತ್ತಿರುವ ಹೆಚ್ಚುತ್ತಿರುವ ಅಡುಗೆ ಎಣ್ಣೆ ದರಗಳು

ಬೆಂಗಳೂರು, ಅಕ್ಟೋಬರ್ 12, 2021(www.justkannada.in): ಕೇಂದ್ರ ಸರ್ಕಾರದ ಆಶ್ವಾಸನೆಗಳ ಹೊರತಾಗಿಯೂ ಬೆಂಗಳೂರು ನಗರದಲ್ಲಿ ಅಡುಗೆ ಎಣ್ಣೆಯ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಅಡುಗೆ ಎಣ್ಣೆಯ ದರ ರೂ.15—20 ರೂ. ಗಳವರೆಗೆ ಏರಿಕೆ ಕಂಡಿದೆ. ಬಹುಪಾಲು ಬ್ರ್ಯಾಂಡ್‌ ಗಳ ಸೂರ್ಯಕಾಂತಿ ಎಣ್ಣೆ ಪ್ರತಿ ಲೀಟರ್‌ ಗೆ ರೂ.೧೪೦ ರಿಂದ ರೂ.೧೮೦ ರ ನಡುವೆ ಮಾರಾಟವಾಗುತ್ತಿದೆ. ಅದೇ ರೀತಿ ಎಲ್ಲಾ ತರಹದ ಕಾಳುಗಳು, ಧಾನ್ಯಗಳು ಹಾಗೂ ಇತರೆ ಎಲ್ಲಾ ಗೃಹೋಪಯೋಗಿ ವಸ್ತುಗಳ ಬೆಲೆಗಳೂ ಸಹ ಆಕಾಶ ಮುಟ್ಟುತ್ತಿವೆ. ನಿರಂತರವಾಗಿ ಹೆಚ್ಚುತ್ತಿರುವ ಇಂಧನದ ಬೆಲೆಗಳು, ಸಾರಿಗೆ ಹಾಗೂ ಇತರೆ ವೆಚ್ಚಗಳು ಹೆಚ್ಚಾಗಿರುವುದೇ ಇದಕ್ಕೆ ಕಾರಣ.

ಆದರೆ ಕರ್ನಾಟಕ ಎಣ್ಣೆ ಬೀಜಗಳ ಉತ್ಪಾದಕರ ಒಕ್ಕೂಟದ ಅಧಿಕಾರಿಗಳು ಹೇಳುವ ಪ್ರಕಾರ ಯಾವಾಗಲೂ ಹಬ್ಬದ ಮಾಸದಲ್ಲಿ ಅಡುಗೆ ಎಣ್ಣೆಗೆ ಬೇಡಿಕೆ ಹೆಚ್ಚಾಗುತ್ತದೆ. ಹಾಗಾಗಿ ಬೆಲೆ ಹೆಚ್ಚಳ ಸಾಮಾನ್ಯವಂತೆ. ಮೇಲಾಗಿ ಹಲವು ರಾಷ್ಟ್ರಗಳಲ್ಲಿ ಕಾರ್ಮಿಕರ ಸಮಸ್ಯೆ ಉದ್ಭವಿಸಿದ್ದು, ಇದರಿಂದಾಗಿಯೂ ಬೆಲೆಗಳಲ್ಲಿ ಹೆಚ್ಚಳವಾಗಿದೆಯಂತೆ. ಕೊಯ್ಲಿನ ನಂತರ ಉತ್ತಮ ಬೆಳೆ ಬಂದರೆ ಬೆಲೆಗಳು ಇಳಿಕೆಯಾಗಬಹುದು ಎನ್ನುವುದು ಅವರ ಅಭಿಪ್ರಾಯವಾಗಿದೆ.

ಆದರೆ ನಗರದ ಅಡುಗೆ ಎಣ್ಣೆಯ ಸಗಟು ಮಾರಾಟಗಾರರಾದ ಸತ್ಯ ಭಾಸ್ಕರ್ ಎಂಬುವವರಿಗೆ ಈ ಕುರಿತು ಖಾತ್ರಿಯಿಲ್ಲ. ಅವರು ಹೇಳುವಂತೆ ಅಡುಗೆ ಎಣ್ಣೆಯಲ್ಲಿಯೂ ಪೆಟ್ರೋಲಿಯಂ ಉತ್ಪನ್ನಗಳಿರುತ್ತವಂತೆ. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ದರಗಳು ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆಯ ಬೆಲೆಗಳೂ ಸಹ ಹೆಚ್ಚಾಗುತ್ತಿದೆ. “ಕಳೆದ 10 ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆ ಪ್ರತಿ ಲೀಟರ್‌ಗೆ ರೂ.೧೦-೧೫ರಷ್ಟು ಹೆಚ್ಚಳವಾಗಿದೆ. ಜುಲೈ ತಿಂಗಳಲ್ಲಿ ಬೆಲೆ ಸ್ವಲ್ಪ ಇಳಿಕೆಯಾಗಿತ್ತು. ಆದರೆ ಈಗ ನಿರಂತರವಾಗಿ ಏರುತ್ತಿದೆ. ಹೀಗೆ ಮುಂದುವರೆದರೆ ಹತ್ತಿರದ ಭವಿಷ್ಯದಲ್ಲಿ ಅಡುಗೆ ಎಣ್ಣೆಯ ಬೆಲೆಗಳು ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ,” ಎನ್ನುತ್ತಾರೆ.

ಆದರೆ ಇದರಿಂದಾಗಿ ಜನರ ಖರೀದಿಸುವ ಅಭ್ಯಾಸಗಳೂ ಸಹ ಬದಲಾಗಿವೆ. ಶಂಕರಾನಂದ ಪ್ರಾವಿಷನ್ ಸ್ಟೋರ್ ಮಾಲೀಕರ ಪ್ರಕಾರ ಕೋವಿಡ್ ಸಾಂಕ್ರಾಮಿಕದಿಂದಾಗಿ ನಡೆಸಿದ ಲಾಕ್‌ ಡೌನ್‌ನಿಂದಾಗಿ ದೇಶದಲ್ಲಿ ಅಡುಗೆ ಎಣ್ಣೆಯ ಬೆಲೆಗಳಲ್ಲಿ ರೂ.೬೦-೧೦೦ರಷ್ಟು ಹೆಚ್ಚಳವಾಗಿದೆ. ಅಕ್ಟೋಬರ್ ೨೦೨೦ರಲ್ಲಿ ಬ್ರ್ಯಾಂಡೆಡ್ ಅಡುಗೆ ಎಣ್ಣೆಯ ಬೆಲೆ ಒಂದು ಲೀಟರ್‌ ಗೆ ರೂ.೧೦೫-೧೧೦ರಷ್ಟಿತ್ತು. ಆದರೆ ಈಗ ರೂ.೧೮೦ ಆಗಿದೆ. “ಚೀನಾದಿಂದ ಬರುತ್ತಿದ್ದಂತಹ ಕಚ್ಚಾ ವಸ್ತು ಸರಬರಾಜಿನಲ್ಲಿ ಉಂಟಾಗಿರುವ ಕೊರತೆ ಇದಕ್ಕೆ ಕಾರಣವಾಗಿರಬಹುದು. ಜನರು ಈಗ ಬಹಳ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಈ ಹಿಂದೆ ೧ ಲೀಟರ್ ಅಡುಗೆ ಎಣ್ಣೆ ಖರೀದಿಸುತ್ತಿದ್ದವರು ಈಗ ಅರ್ಧ ಲೀಟರ್ ಖರೀದಿಸಲು ಆರಂಭಿಸಿದ್ದಾರೆ. ಬೆಲೆ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಜನರೂ ಸಹ ತಮ್ಮ ಬಳಕೆಯ ಪ್ರಮಾಣವನ್ನು ಕಡಿಮೆಗೊಳಿಸುತ್ತಿದ್ದಾರೆ,” ಎಂದರು.

ಕೇAದ್ರ ಸರ್ಕಾರವು ಈ ಸಂಬಂಧ ಭಾನುವಾರದಂದು ನೀಡಿರುವ ಹೇಳಿಕೆಯ ಪ್ರಕಾರ, ಹೆಚ್ಚುತ್ತಿರುವ ಅಡುಗೆ ಎಣ್ಣೆಯ ಬೆಲೆಗಳನ್ನು ನಿಯಂತ್ರಿಸಲು ಹಾಗೂ ಆ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ, ಅಡುಗೆ ಎಣ್ಣೆ ಹಾಗೂ ಎಣ್ಣೆ ಬೀಜಗಳನ್ನು ಮಾರಾಟ ಮಾಡುವವರ ಮೇಲೆ ದಾಸ್ತಾನು ಮಿತಿಗಳನ್ನು ವಿಧಿಸಲಾಗಿದೆ. ಆ ಮೂಲಕ ರಫ್ತುದಾರರು ಹಾಗೂ ಆಮದುದಾರರ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದೆ. ಜಾಗತಿಕ ಮಟ್ಟದಲ್ಲಿ ಸಂಭವಿಸುತ್ತಿರುವ ಘಟನೆಗಳು ಹಾಗೂ ಸ್ಥಳೀಯ ಮಟ್ಟದಲ್ಲಿ ಬಿಗಿಯಾದ ಸರಬರಾಜು ಸನ್ನಿವೇಶದಿಂದಾಗಿ ಕಳೆದ ಒಂದು ವರ್ಷದಲ್ಲಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಅಡುಗೆ ಎಣ್ಣೆಯ ಬೆಲೆಗಳು ಶೇ.೪೬.೧೫ರಷ್ಟು ಹೆಚ್ಚಳವಾಗಿದೆ. “ಕೇಂದ್ರದ ನಿರ್ಧಾರದಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆಗಳು ಕಡಿಮೆಯಾಗುತ್ತದೆ, ಗ್ರಾಹಕರಿಗೆ ಸದ್ಯದಲ್ಲಿಯೇ ಹೊರೆ ಕಡಿಮೆಯಾಗುತ್ತದೆ,” ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.

ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಿರುವ ಆದೇಶಗಳ ಪ್ರಕಾರ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು, ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿರುವ ಅಡುಗೆ ಎಣ್ಣೆ ಹಾಗೂ ಎಣ್ಣೆಬೀಜಗಳ ಪ್ರಮಾಣವನ್ನು ಲೆಕ್ಕ ಹಾಕಿ ಹಾಗೂ ಬಳಕೆಯ ಪ್ರವೃತ್ತಿಯನ್ನು ಅಂದಾಜಿಸಿ, ಅಗತ್ಯದ ಪ್ರಕಾರ ದಾಸ್ತಾನಿನ ಮೇಲೆ ಮಿತಿ ಹೇರಲಿದೆ. ಆದಾಗ್ಯೂ, ಕೆಲವು ಆಮದುದಾರರು ಮತ್ತು ರಫ್ತುದಾರರಿಗೆ ಈ ದಾಸ್ತಾನಿನ ಮಿತಿಯಿಂದ ವಿನಾಯಿತಿ ನೀಡಲಾಗಿದೆ.

ಸಚಿವಾಲಯದ ಪ್ರಕಾರ ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆಗಳ ಹೆಚ್ಚಳ ಸ್ಥಳೀಯ ಮಾರುಕಟ್ಟೆಯ ಮೇಲೂ ಮಹತ್ತರವಾದ ಪರಿಣಾಮ ಬೀರಿದೆಯಂತೆ. ಆಮದು ಸುಂಕದ ರಚನೆಯನ್ನು ತರ್ಕಬದ್ಧಗೊಳಿಸುವುದು, ಅಡುಗೆ ಎಣ್ಣೆಯ ದಾಸ್ತಾನು ನಿರ್ವಹಿಸುವವರಿಂದ ಸ್ವಯಂಪ್ರೇರಿತವಾಗಿ ತಮ್ಮ ಬಳಿಯಿರುವ ದಾಸ್ತನಿನ ವಿವರಗಳನ್ನು ಘೋಷಿಸಲು ವೆಬ್-ಪೋರ್ಟಲ್ ಸೃಷ್ಟಿಯಂತಹ ಕೆಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಭಾರತದಲ್ಲಿ ಶೇ.೬೦ರಷ್ಟು ಅಡುಗೆ ಎಣ್ಣೆಯ ಬೇಡಿಕೆಯನ್ನು ಆಮದು ರೂಪದಲ್ಲಿ ಪೂರೈಸಲಾಗುತ್ತಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: rising- cooking oil -rates – creating- turbulence