ಸ್ಪೀಕರ್ ಕಚೇರಿಯಲ್ಲಿ ಅತೃಪ್ತ ಶಾಸಕರು:: ಬಿಜೆಪಿ ಸೇರ್ಪಡೆ ಬಗ್ಗೆ ಶಾಸಕ ರಾಮಲಿಂಗರೆಡ್ಡಿ ಏನಂದ್ರು…?

ಬೆಂಗಳೂರು,ಜು,6,2019(www.justkannada.in):  ರಾಜ್ಯ ಸಮ್ಮಿಶ್ರ ಸರ್ಕಾರದ ನಡೆ ಬಗ್ಗೆ ಪದೇ ಪದೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಶಾಸಕ ರಾಮಲಿಂಗ ರೆಡ್ಡಿ ಇದೀಗ 8 ಶಾಸಕರ ರಾಜೀನಾಮೆ ಬಳಿಕ ತಾವೂ ರಾಜೀನಾಮೆ ನೀಡುವ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್ ಶಾಸಕರಾದ ರಾಮಲಿಂಗರೆಡ್ಡಿ, ಭೈರತಿ ಬಸವರಾಜ್, ಮುನಿರತ್ನ, ಎಸ್.ಟಿ ಸೋಮಶೇಖರ್ ಸೇರಿ 12 ಮಂದಿ ಅತೃಪ್ತ ಶಾಸಕರು ಈಗಾಗಲೇ ಸ್ಪೀಕರ್ ಕಚೇರಿಗೆ ಆಗಮಿಸಿ ಸ್ಪೀಕರ್ ಗಾಗಿ ಕಾಯುತ್ತಿದ್ದಾರೆ. ಆದರೆ ಸ್ಪೀಕರ್ ರಮೇಶ್ ಕುಮಾರ್ ಕಚೇರಿಯಿಂದ ತೆರಳಿದ್ದು ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇನ್ನು ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ರಾಮಲಿಂಗರೆಡ್ಡಿ, ಅತೃಪ್ತರ ಗುಂಪಿನಲ್ಲಿ ನಾನೂ ಇದ್ದೇನೆ. ಕಾಂಗ್ರೆಸ್ ಪಕ್ಷದ ಬಗ್ಗೆ ಬೇಸರವಿಲ್ಲ. ಕಾಂಗ್ರೆಸ್ ಮುಖಂಡರ ಮೇಲೆ ಯಾವುದೇ ಅಸಮಾಧಾನವಿಲ್ಲ. ಸಿದ್ದರಾಮಯ್ಯ ನನ್ನ ಜತೆ ಮಾತನಾಡಿಲ್ಲ ಎಂದು ಹೇಳಿದರು.

ಹಾಗೆಯೇ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗರೆಡ್ಡಿ, ಬೇರೆ ಪಕ್ಷ ಸೇರ್ಪಡೆ ಬಗ್ಗೆ ತಕ್ಷಣ ನಾನು ಯೋಚಿಸಿಲ್ಲ. ಬಿಜೆಪಿ ಸೇರ್ಪಡೆ ಬಗ್ಗೆ ಮುಂದೆ ನೋಡೋಣ ಎಂದಿದ್ದಾರೆ.

Key words: Rebel MLAs –speaker-office- resignation.