ಹೆಚ್.ಡಿಕೆ ಓಪನ್ ಆಫರ್ ಗೆ ತಿರುಗೇಟು ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ.

ಧಾರವಾಡ,ಜೂನ್,8,2022(www.justkannada.in):  ರಾಜ್ಯಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ಗೆ  ಆಫರ್ ಕೊಟ್ಟಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಿದ್ಧರಾಮಯ್ಯ,  ನಾವು ಯಾವಾಗಲೂ ಕೋಮುವಾದಿ ಬಿಜೆಪಿಯನ್ನು ವಿರೋಧಿಸುತ್ತೇವೆ. ಕೋಮುವಾದಿ ಬಿಜೆಪಿಯನ್ನ ಸೋಲಿಸಲು ಜೆಡಿಎಸ್ ನಮಗೆ ಬೆಂಬಲಿಸಲಿ. ಜೆಡಿಎಸ್​ಗಿಂತ ಮೊದಲೇ ನಾವು ಎರಡನೇ ಅಭ್ಯರ್ಥಿಯನ್ನು ಹಾಕಿದ್ದೆವು, ನಮ್ಮ ಅಭ್ಯರ್ಥಿ ಹಾಕಿದ ತಿಂಗಳ ಬಳಿಕ ಅಭ್ಯರ್ಥಿಯನ್ನು ಹಾಕಿದ್ದಾರೆ . ಹೀಗಾಗಿ ನಮಗೆ ಬೆಂಬಲಿಸಲಿ ಎಂದು ಹೇಳಿದ್ದಾರೆ.

ಕೋಮುವಾದಿಗಳನ್ನು ಸೋಲಿಸಬೇಕು ಅಂತಿದ್ದರೆ ಅಭ್ಯರ್ಥಿ ಹಾಕಬಾರದಿತ್ತು. ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ಹಾಕಿದ್ದೇವೆ, ನಮಗೆ ಬೆಂಬಲ ಕೊಡಲಿ. ಹೆಚ್​ಡಿ ದೇವೇಗೌಡರು ರಾಜ್ಯಸಭೆಗೆ ನಿಂತಾಗ ನಾವು ಅಭ್ಯರ್ಥಿ ಹಾಕಿರಲಿಲ್ಲ, ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಜೆಡಿಎಸ್ 37 ಸ್ಥಾನಗಳಿದ್ದರೂ ಹೆಚ್​ಡಿಕೆರನ್ನು ಸಿಎಂ ಮಾಡಿದ್ದೆವು. ದೇವೇಗೌಡರು ಪ್ರಧಾನಿ ಆಗಲು ಬೆಂಬಲಿಸಿದ್ದೆವು, ಈಗ ನಮಗೆ ಬೆಂಬಲ ಕೊಡಲಿ ಎಂದು ಸಿದ್ಧರಾಮಯ್ಯ ಹೇಳಿದರು.

ನಮ್ಮ ಬಳಿ 32 ಮತಗಳಿವೆ, ಕಾಂಗ್ರೆಸ್ ಬಳಿ ನಮಗಿಂತ ಕಡಿಮೆ ಮತಗಳಿವೆ. ಕಾಂಗ್ರೆಸ್ ಗಿಂತ ಜೆಡಿಎಸ್ ಅಭ್ಯರ್ಥಿಗೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಬೇಕಿದ್ದರೇ ನಮ್ಮ ಪಕ್ಷದ 2ನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡುತ್ತೇವೆ. ಕಾಂಗ್ರೆಸ್ ಪಕ್ಷದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಗೆ ಆಫರ್ ನೀಡಿದ್ದರು.

Key words: Rajyasabha-election-Former CM-Siddaramaiah-HD Kumaraswamy-Open Offer.