ನಂಜನಗೂಡಿನಲ್ಲಿ ದೇವಾಲಯ ತೆರವು ಖಂಡಿಸಿ ಸೆ.16 ರಂದು ಪ್ರತಿಭಟನೆ: ಜಿಲ್ಲಾಧಿಕಾರಿ, ತಹಶೀಲ್ದಾರ್ ಅಮಾನತಿಗೆ ಆಗ್ರಹ.

ಮೈಸೂರು,ಸೆಪ್ಟಂಬರ್,13,2021(www.justkannada.in): ನಂಜನಗೂಡು ತಾಲೂಕಿನಲ್ಲಿ ಮಹದೇವಮ್ಮ ಭೈರವೇಶ್ವರ ತೆರವು ಹಿನ್ನೆಲೆ,ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ  ಹಿಂದೂ ಜಾಗರಣ ವೇದಿಕೆ,  ದೇವಾಲಯ ತೆರವು ಖಂಡಿಸಿ ಸೆಪ್ಟಂಬರ್ 16ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಈ  ಪ್ರತಿಭಟನೆ ನಡೆಯಲಿದೆ. ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿರುವ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ್ಯ ಪ್ರಮುಖ ಉಲ್ಲಾಸ್, ಮೈಸೂರಿನ ಜಿಲ್ಲಾಡಳಿತ ಕಳೆದ ಎರಡು ತಿಂಗಳಿಂದ ದೇವಸ್ಥಾನ ತೆರವು ಕಾರ್ಯ ಮಾಡುತ್ತಿದೆ. ನಂಜನಗೂಡಿನಲ್ಲಿ ಉಚ್ಚಗಣಿಯಲ್ಲಿ ದೇವಾಲಯ ನೆಲಸಮ ಮಾಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ 2009ರ ಬಳಿಕ ನಿರ್ಮಾಣವಾಗಿರುವ ದೇವಾಲಯ ತೆರವು ಮಾಡಬೇಕು. ಆದರೆ 2009ರ ಹಿಂದೆ ನಿರ್ಮಾಣವಾಗಿರುವ ಮಹದೇವಮ್ಮ ದೇವಾಲಯ ತೆರವು ಮಾಡಿರೋದು ಖಂಡನೀಯ ಎಂದು ಕಿಡಿಕಾರಿದರು.

ನಂಜನಗೂಡಿನಲ್ಲಿ ತಾಲ್ಲೂಕು ಅಡಳಿತ ದೌರ್ಜನ್ಯ ಮಾಡುತ್ತಿದೆ. ದೇವಸ್ಥಾನ ತೆರವು ಮಾಡಬೇಕಿದ್ರೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಕ್ರಮವಾಗಿ ತೆರವು ಮಾಡಿರುವ ಜಿಲ್ಲಾಧಿಕಾರಿ, ತಹಶೀಲ್ದಾರ್ ರನ್ನು ಅಮಾನತ್ತು ಮಾಡುವಂತೆ ಉಲ್ಲಾಸ್ ಆಗ್ರಹಿಸಿದರು.

Key words: Protest – September 16 – temple clearance – Nanjangud-hindu jagarana vedike