ಶಾಲೆಗೆ ಬೀಗ ಜಡಿದು ಪೋಷಕರಿಂದ ಪ್ರತಿಭಟನೆ…

ಮೈಸೂರು,ಜೂ,17.2019(www.justkannada.in):  ಇಬ್ಬರು ಶಿಕ್ಷಕರ ಹೊಂದಾಣಿಕೆ ಕೊರತೆಯಿಂದ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಚೌಡಳ್ಳಿ ಗ್ರಾಮದ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಚೌಡಳ್ಳಿ ಗ್ರಾಮದ ಸ.ಕಿ.ಪ್ರಾ ಶಾಲೆಗೆ ಬೀಗ ಜಡಿದ ಪೋಷಕರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನ ಬೇರೆಡೆಗೆ ನಿಯೋಜಿಸಿ ಹೊಸ ಶಿಕ್ಷಕರನ್ನು ನಿಯೋಜನೆ ಮಾಡುವಂತೆ ಒತ್ತಾಯಿಸಿದರು. ಸದ್ಯ ಇರುವ ಶಿಕ್ಷಕರಿಗೆ ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ. ಅವರ ವೈಯಕ್ತಿಕ ದ್ವೇಷದಿಂದ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಾನಿರತ ಪೋಷಕರು ಆರೋಪಿಸಿದರು

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿ ಆರ್ ಸಿ ಮಹದೇವನಾಯ್ಕ ಸಮಸ್ಯೆ ಆಲಿಸಿ ಬಗಹರಿಸುವ ಭರವಸೆ ನೀಡಿದರು. ಇಂದು ತರಗತಿ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಒಂದು ದಿನದ ಗಡುವು ನೀಡಿ ತರಗತಿ ನಡೆಸಲು ಪೋಷಕರು ಒಪ್ಪಿಕೊಂಡರು.  ನಾಳೆಯೊಳಗೆ ನಮ್ಮ ಸಮಸ್ಯೆ ಬಗೆಹರಿಯದಿದ್ದರೆ ಶಾಲೆ ಬಂದ್ ಮಾಡುವುದಾಗಿ ಪೋಷಕರು ಎಚ್ಚರಿಕೆ ನೀಡಿದರು.

Key words: Protest – parents –lock- school-mysore