ವಾಹನ ಸಂಚಾರ ದಟ್ಟಣೆ ಹಾಗೂ ಅಪಘಾತ ತಪ್ಪಿಸಲು ಬೆಂಗಳೂರು ವಿವಿಯಿಂದ ಪರ್ಯಾಯ ರಸ್ತೆಗಳ ನಿರ್ಮಾಣಕ್ಕೆ ಪ್ರಸ್ತಾಪ.

ಬೆಂಗಳೂರು, ನವೆಂಬರ್ , 5, 2022(www.justkannada.in): ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಆವರಣದೊಳಗೆ ಸಾರ್ವಜನಿಕ ಸಾರಿಗೆ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಎರಡು ಹೊಸ ಪರ್ಯಾಯ ರಸ್ತೆಗಳನ್ನು ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾಪ ಮಾಡಿದೆ. ಇತ್ತೀಚೆಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಬಿಎಂಟಿಸಿ ಬಸ್ ಚಕ್ರದ ಅಡಿಗೆ ಸಿಲುಕಿ ಮೃತಪಟ್ಟರು.

ವಿಶ್ವವಿದ್ಯಾಲಯ ಪ್ರಸ್ತಾಪ ಮಾಡಿರುವ ಈ ಹೊಸ ಪರ್ಯಾಯ ರಸ್ತೆಗಳು ಅಪಘಾತಗಳನ್ನು ಕಡಿಮೆಗೊಳಿಸುತ್ತವೆ. ಮೈಸೂರು ರಸ್ತೆಯಿಂದ ಹೊರ ವರ್ತುಲ ರಸ್ತೆ ಹಾಗೂ ನಾಗರಬಾವಿಗೆ ತೆರಳುವ ಜನರು ಪ್ರಸ್ತುತ ಜ್ಞಾನಭಾರತಿ ಆವರಣದ ಒಳಗಿನ ರಸ್ತೆಗಳನ್ನು ಹಾದು ಹೋಗಬೇಕಾಗಿದೆ. ಅಕ್ಟೋಬರ್ 10 ರಂದು ನಡೆದಂತಹ ಒಂದು ರಸ್ತೆ ಅಪಘಾತದಲ್ಲಿ ವಿಶ್ವವಿದ್ಯಾಲಯದ  22 ವರ್ಷ ವಯಸ್ಸಿನ ಶಿಲ್ಪಶ್ರೀ ಎಂಬ ಹೆಸರಿನ ವಿದ್ಯಾರ್ಥಿನಿ ಮೃತಪಟ್ಟು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಪ್ರವೇಶವನ್ನು ನಿರ್ಬಂಧಿಸುವಂತೆ ವಿಶ್ವವಿದ್ಯಾಲಯದ ಪ್ರಾಧಿಕಾರಿಗಳನ್ನು ಒತ್ತಾಯಿಸಿ ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು.

ವಿಶ್ವವಿದ್ಯಾಲಯವು ರಾಜ್ಯ ಸರ್ಕಾರಕ್ಕೆ ಈ ಎರಡು ಪರ್ಯಾಯ ರಸ್ತೆಗಳನ್ನು ಪ್ರಸ್ತಾಪವನ್ನು ಸಲ್ಲಿಸಿದ್ದು, ಇದಕ್ಕೆ ಕೋಟ್ಯಂತರ ರೂಪಾಯಿ ಬೇಕಾಗಲಿದೆ. ಈ ಪೈಕಿ ಮೊದಲನೇ ಸಲಹೆ ಏನಂದರೆ, ಹಾಲಿ ಇರವ ರಸ್ತೆಯ ಮೇಲೆ ಸಾರ್ವಜನಿಕ ವಾಹನಗಳಿಗಾಗಿ ಫ್ಲೈಓವರ್ ನಿರ್ಮಾಣ ಮಾಡುವುದು, ಎರಡನೇ ಸಲಹೆ ವಿಶ್ವವಿದ್ಯಾಲಯದ ಹೊರ ಅಂಚಿನ ಕಾಂಪೌಂಡ್ ಗೋಡೆಯ ಪಕ್ಕಕ್ಕೆ ವರ್ತುಲ ರಸ್ತೆ ಹಾಗೂ ನಾಗರಬಾವಿಗೆ ಸಂಪರ್ಕ ಕಲ್ಪಿಸುವಂತೆ ಹೊಸ ರಸ್ತೆ ನಿರ್ಮಾಣ ಮಾಡುವುದು ಸೇರಿದೆ.banga

ಈ ಸಂಬಂಧ ಮಾತನಾಡಿದ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು, “ಈ ರಸ್ತೆಗಳ ನಿರ್ಮಾಣಕ್ಕೆ ವಿಶ್ವವಿದ್ಯಾಲಯದ ಭೂಮಿಯನ್ನು ಒದಗಿಸಲು ನಾವು ಸಿದ್ಧರಿದ್ದೇವೆ. ಈ ಪ್ರಸ್ತಾಪವನ್ನು ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಮಂಡಿಸಲಾಗುವುದು,” ಎಂದರು. “ಆದರೆ ಖಂಡಿತವಾಗಿಯೂ ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸ್ಥಳೀಯರಿಂದ ಇದಕ್ಕೆ ವಿರೋಧ ವ್ಯಕ್ತವಾಗಲಿದೆ. ಆದರೆ, ಅವರಿಗೆ ಬೇಕಾಗಿರುವುದು ಒಂದು ರಸ್ತೆ, ನಾವು ಅದಕ್ಕೆ ಬೇಕಾಗುವ ಭೂಮಿಯನ್ನು ಒದಗಿಸಲು ಸಿದ್ಧರಿದ್ದೇವೆ,” ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್.ಎಂ. ಜಯಕರ್ ಅವರು ಈ ಸಂಬಂಧ ಮಾತನಾಡಿ, “ಇತ್ತೀಚೆಗೆ ವಿವಿಧ ವಿಭಾಗಗಳ ಅಧಿಕಾರಿಗಳೊಂದಿಗೆ ನಾವು ನಡೆಸಿದ ಸಭೆಯೊಂದರಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಅಪಘಾತಗಳನ್ನು ತಪ್ಪಿಸಲು ಈ ಹೊಸ ರಸ್ತೆಗಳ ಕುರಿತು ನಾವು ಪ್ರಸ್ತಾಪಿಸಿ ಸಲಹೆ ನೀಡಿದೆವು. ಆ ಪ್ರಕಾರವಾಗಿ, ನಾವು ಸಿಂಡಿಕೇಟ್ ಸಭೆಯಲ್ಲಿ ನಾವು ಈ ಕುರಿತು ಚರ್ಚಿಸಲು ಯೋಜಿಸಿದ್ದು, ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತೇವೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Proposal -construction -alternate roads -Bangalore University –avoid-traffic congestion-accidents.