ಹುಣಸೂರು ಬೈ ಎಲೆಕ್ಷನ್ ಗೆ ಸಿದ್ಧತೆ : ಕಣದಲ್ಲಿ 10 ಅಭ್ಯರ್ಥಿಗಳು- ಮಾಹಿತಿ ನೀಡಿದ ಮೈಸೂರು ಡಿಸಿ ಅಭಿರಾಮ್ ಜೀ ಶಂಕರ್…

ಮೈಸೂರು,ನ,22,2019(www.justkannada.in): ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ಒಟ್ಟು 21ನಾಮಪತ್ರ ಸಲ್ಲಿಕೆಯಾಗಿದ್ದವು. ಅದರಲ್ಲಿ 11ನಾಮಪತ್ರಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ. ಇನ್ನು ಉಪಚುನಾವಣೆಯಲ್ಲಿ 10ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜೀ ಶಂಕರ್ ತಿಳಿಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ  ಮಾತನಾಡಿದ ಡಿಸಿ ಅಭಿರಾಂ ಜೀ ಶಂಕರ್, ಹುಣಸೂರು ಉಪಚುನಾವಣೆಗೆ ಚುನಾವಣಾ ವೀಕ್ಷಕರಾಗಿ ಚುನಾವಣಾ ಆಯೋಗದಿಂದ ಅಮರ್ ಖುಷ್ಷ, ಹಾಗೂ ಉಪಿಂದರ್ ಬಿರ್ ಸಿಂಗ್ ನೇಮಕವಾಗಿದ್ದಾರೆ. ಹುಣಸೂರು ಕ್ಷೇತ್ರವ್ಯಾಪ್ತಿಯಲ್ಲಿ ಒಟ್ಟು 274ಮತಗಟ್ಟೆಗಳಿದ್ದು, ಒಟ್ಟು 227974 ಮತದಾರರಿದ್ದಾರೆ. ಈ ಪೈಕಿ  114580 ಪುರುಷ ಮತದಾರರು ಹಾಗೂ 113388 ಮಹಿಳಾ ಮತದಾರರು ಹಾಗೂ ಇತರೆ 2235 ಮತದಾರರಿದ್ದಾರೆ. ಹುಣಸೂರಿನ ಡಿ.ದೇವರಾಜು ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಹುಣಸೂರು ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 6 ಚೆಕ್ ಪೋಸ್ಟ್‌ ಗಳನ್ನು ನಿರ್ಮಿಸಲಾಗಿದ್ದು, ಹೆಚ್ಚುವರಿಯಾಗಿ 3ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಚೆಕ್ ಪೋಸ್ಟ್ ನಲ್ಲಿ ಒಟ್ಟು  6,35,300ರೂ ಹಣ ಜಪ್ತಿಮಾಡಲಾಗಿದ್ದು, ಅದರಲ್ಲಿ ದಾಖಲೆ ಪರಿಶೀಲಿಸಿ 4ಲಕ್ಷ ಹಣವನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಒಟ್ಟು 1,37,00,000ಮೌಲ್ಯದ 1 ಲಕ್ಷ ಲೀಟರ್‌ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ. 25 ಸಾವಿರ ಲೀಟರ್ ನಂತೆ ನಾಲ್ಕು ಟ್ಯಾಂಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.. ಅಲ್ಲದೇ ಕ್ಷೇತ್ರವ್ಯಾಪ್ತಿಯಲ್ಲಿ ಒಟ್ಟು 40ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ಡಿಸಿ ಅಭಿರಾಮ್ ಜೀ ಶಂಕರ್ ತಿಳಿಸಿದರು.

ಹಾಗೆಯೇ ಮತದಾನದ ದಿನದಂದು ಹುಣಸೂರಿನಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ ಎಂದು ಅಭಿರಾಂ ಜೀ ಶಂಕರ್ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Key words: Preparing –hunsur-By Election- 10 candidates -Mysore DC- Abhiram Jee Shankar.