ಎಸ್‌ ಎಸ್‌ ಎಲ್‌ ಸಿ, ಪಿಯು ಪರೀಕ್ಷೆಗಳ ಪಾಸ್ ಮಾರ್ಕ್ಸ್ ಕಡಿಮೆಗೊಳಿಸಲು ಪ್ಯಾನೆಲ್ ಸಲಹೆ.

ಬೆಂಗಳೂರು, ಫೆಬ್ರವರಿ,4, 2023(www.justkannada.in): ಕರ್ನಾಟಕ ರಾಜ್ಯದಲ್ಲಿ ಶಾಲೆಗಳಿಂದ ಹೊರಗುಳಿಯುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿದ್ದು, ಈ ಸಮಸ್ಯೆಯನ್ನು ಬಗೆಹರಿಸುವುದು ಎಷ್ಟರ ಮಟ್ಟಿಗೆ ಕಷ್ಟವಾಗಿದೆ ಎಂದರೆ, ಎಸ್‌ ಎಸ್‌ ಎಲ್‌ ಸಿ (10ನೇ ತರಗತಿ) ಹಾಗೂ ಪದವಿಪೂರ್ವ (ಪಿಯುಸಿ) ಪರೀಕ್ಷೆಗಳ ಕನಿಷ್ಠ ಉತ್ತೀರ್ಣತೆಯ ಅಂಕಗಳನ್ನು ಕಡಿಮೆಗೊಳಿಸುವುದು ಸೂಕ್ತ ಪರಿಹಾರ ಎಂದು ತಜ್ಞರ ತಂಡ ತಿಳಿಸಿದೆ.

ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರ ನೇತೃತ್ವದಲ್ಲಿ ರಚಿಸಲಾಗಿರುವ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2, ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ಇತ್ತೀಚಿನ ವರದಿಯಲ್ಲಿ ಈ ಶಿಫಾರಸ್ಸನ್ನು ಮಾಡಿದೆ.

“ಎಸ್‌ ಎಸ್‌ ಎಲ್‌ ಸಿ ಥಿಯರಿ ಪರೀಕ್ಷೆಯಯಲ್ಲಿ ಉತ್ತೀರ್ಣವಾಗಲು ಕನಿಷ್ಠ ಅಂಕಗಳನ್ನು ಈಗಿರುವ 28 ರಿಂದ 15 ಅಥವಾ 20ಕ್ಕೆ ಇಳಿಸಬೇಕು,” ಎಂದು ಆಯೋಗ ತಿಳಿಸಿದೆ. “ಕರ್ನಾಟಕದಲ್ಲಿ ಪಿಯು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಈಗಿರುವ ಕನಿಷ್ಠ ಅಂಕ 21, ಆದರೆ ತಮಿಳುನಾಡಿನಲ್ಲಿ 15 ಅಂಕಗಳು,” ಎಂದು ತಿಳಿಸಿರುವ ಆಯೋಗ, ಸರ್ಕಾರಕ್ಕೆ ಕನಿಷ್ಠ ಅಂಕಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಆಲೋಚಿಸುವುದು ಒಳಿತು ಎಂದು ತಿಳಿಸಿದೆ.

ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಗಳಲ್ಲಿ ಉತ್ತೀರ್ಣತೆಯ ಪ್ರಮಾಣಗಳನ್ನು ಗಮನಿಸಿದ ಆಯೋಗವು ಈ ಪ್ರಮಾಣ ನೆರೆ ರಾಜ್ಯಗಳ ಹೋಲಿಕೆಯಲ್ಲಿ ಬಹಳ ಕಡಿಮೆ ಎಂದಿದೆ.

ಕರ್ನಾಟಕದಲ್ಲಿ ಪದವಿಪೂರ್ವ ಶಿಕ್ಷಣದ ಒಟ್ಟು ಪ್ರವೇಶಾತಿ ಪ್ರಮಾಣ (ಜಿಇಆರ್) ೫೨.೧ರಷ್ಟಿದ್ದರೆ, ಕೇರಳದಲ್ಲಿ ಈ ಪ್ರಮಾಣ ಶೇ.೮೩, ತಮಿಳು ನಾಡಿನಲ್ಲಿ ಶೇ.೭೩.೨, ಮಹಾರಾಷ್ಟ್ರದಲ್ಲಿ ಶೇ.೬೭, ತೆಲಂಗಾಣದಲ್ಲಿ ಶೇ.೫೭.೨ ಹಾಗೂ ಆಂಧ್ರ ಪ್ರದೇಶದಲ್ಲಿ ಶೇ.೫೨.೨ರಷ್ಟಿದೆ, ಎಂದು ವರದಿಯಾಗಿದೆ.

ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣದ ಪ್ರವೇಶಾತಿ ಪ್ರಮಾಣ ಶೇ.೧೦೫ರಷ್ಟಿದ್ದು, ಈ ಪ್ರಮಾಣ ತೆಲಂಗಾಣ ಹೊರತುಪಡಿಸಿದಂತೆ (ಶೇ.೧೦೬.೩) ಇತರೆ ರಾಜ್ಯಗಳಲ್ಲಿ ಹೆಚ್ಚಿದೆ. ಅಂದರೆ ಇದರರ್ಥ, ನಮ್ಮ ರಾಜ್ಯದಲ್ಲಿ ಪ್ರಾಥಮಿಕ ಶಾಲೆಯಿಂದ ಮಾಧ್ಯಮಿಕ ತರಗತಿಗೆ ಹಾಗೂ ಮಾಧ್ಯಮಿಕ ತರಗತಿಗಳಿಂದ ಪದವಿಪೂರ್ವ ತರಗತಿಗಳಿಗೆ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸೇರಿದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಫೇಲ್ ಆಗುತ್ತಾರೆ ಎಂದು ಆಯೋಗ ವರದಿ ನೀಡಿದೆ. “ಪಿಯುಸಿ ಹಂತದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ. ಕರ್ನಾಟಕದಲ್ಲಿ ಪದವಿಪೂರ್ವದಲ್ಲಿ ಸರಾಸರಿ ಉತ್ತೀರ್ಣತೆ ಪ್ರಮಾಣ ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳಿಗಿಂತ 30 ಪರ್ಸೆಂಟೇಜ್ ಪಾಯಿಂಟ್‌ ಗಳು ಹಾಗೂ ಕೇರಳಗಿಂತ ೨೨ ಪರ್ಸೆಂಟೇಜ್ ಪಾಯಿಂಟ್‌ ಗಳಷ್ಟು ಕಡಿಮೆ ಇದೆ,” ಎಂದು ವರದಿಯಾಗಿದೆ.

“ಒಂದು ವೇಳೆ ಕರ್ನಾಟಕದ ಪದವಿಪೂರ್ವ ಪರೀಕ್ಷೆಗಳ ಉತ್ತೀರ್ಣತೆ ಪ್ರಮಾಣ ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ ಸರಾಸರಿಗೆ ಹತ್ತಿರವಾದರೂ ಇದಿದ್ದರೆ, ಒಂದು ಲಕ್ಷದಷ್ಟು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಥವಾ ಉನ್ನತ ಶಿಕ್ಷಣಕ್ಕೆ ಸೇರುವ ಅವಕಾಶಗಳಿರುತಿತ್ತು. ಆದರೆ ಇದೊಂದು ದೊಡ್ಡ ಸಾಮಾಜಿಕ ನಷ್ಟ,” ಎಂದಿದೆ. ಈ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಪದವಿಪೂರ್ವ ಕಲೆ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಹಾಗೂ ಭಾಷಾ ವಿಷಯಗಳಲ್ಲಿ ಆಂತರಿಕ ಮೌಲ್ಯಮಾಪನದಡಿ ಶೇ.20 ಅಂಕಗಳನ್ನು ಪರಿಚಯಿಸಲು ಆಯೋಗ ಶಿಫಾರಸ್ಸು ಮಾಡಿದೆ. ಜೊತೆಗೆ, ಎಸ್‌ಎಸ್‌ಎಲ್‌ಸಿ ಹಾಗೂ ಪದವಿಪೂರ್ವ ಪರೀಕ್ಷೆಗಳಲ್ಲಿ 15 ಅಂಕಗಳಿಗೆ (ವಿಜ್ಞಾನ) ಹಾಗೂ 20 ಅಂಕಗಳ (ಸಮಾಜ ವಿಜ್ಞಾನ ಹಾಗೂ ಭಾಷಾ ವಿಷಯಗಳು) ಬಹು ಆಯ್ಕೆ ಪ್ರಶ್ನೆಗಳನ್ನು ಪರಿಚಯಿಸುವಂತೆಯೂ ಸರ್ಕಾರಕ್ಕೆ ಸೂಚಿಸಿದೆ.

ಶಾಲೆಯಿಂದ ಹೊರಗುಳಿಯುವವರ ಪ್ರಮಾಣ ಕಡಿಮೆಗೊಳಿಸಲು ಮತ್ತೊಂದು ಕ್ರಮವೆಂದರೆ ೬,೭೯೬ ಸರ್ಕಾರಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳನ್ನು, ೧೦೦ ಮೀಗಳ ದೂರದಲ್ಲಿರುವ ಇತರೆ ೩,೧೬೧ ಸಂಯೋಜಿತ/ ಕ್ಲಸ್ಟರ್ ಪ್ರೌಢಶಾಲೆಗಳು ಅಥವಾ ಕರ್ನಾಟಕ ಪಬ್ಲಿಕ್ ಶಾಲೆಗಳೊಂದಿಗೆ ವಿಲೀನಗೊಳಿಸುವುದು, ಎಂದು ಆಯೋಗ ಸಲಹೆ ನೀಡಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Panel Suggestion – Reduce- Pass Marks – SSLC-PU Exams.