ದಿನಪತ್ರಿಕೆ ವಿತರಣೆ ನಿಲ್ಲಿಸುವಂತೆ ಆದೇಶ: ಮಹಾರಾಷ್ಟ್ರ ಸರಕಾರ‌ಕ್ಕೆ ಭಾರತೀಯ ಪ್ರೆಸ್ ಕೌನ್ಸಿಲ್‌ ನೋಟಿಸ್

ಹೊಸದಿಲ್ಲಿ, ಏಪ್ರಿಲ್ 22, 2020 (www.justkannada.in): ಮಹಾರಾಷ್ಟ್ರ ಸರಕಾರಕ್ಕೆ ಭಾರತೀಯ ಪ್ರಸ್‌ ಕೌನ್ಸಿಲ್‌ (ಪಿಸಿಐ), ನೋಟಿಸ್‌ ಜಾರಿಗೊಳಿಸಿದೆ.

ದಿನಪತ್ರಿಕೆಗಳನ್ನು ಮನೆಗಳಿಗೆ ತಲುಪಿಸುವ ಸೇವೆಯನ್ನು ನಿರ್ಬಂಧಗೊಳಿಸಿರುವ ಮಹಾರಾಷ್ಟ್ರ ಸರಕಾರಕ್ಕೆ ಪಿಸಿಐ ಈ ನೋಟಿಸ್ ಜಾರಿ ಮಾಡಿದೆ. ಕೊರೊನಾ ವೈರಸ್‌ ಪ್ರಸರಣವನ್ನು ತಡೆಗಟ್ಟಲು ಮಹಾರಾಷ್ಟ್ರ ಸರಕಾರ ಶನಿವಾರ ಆದೇಶ ನೀಡಿತ್ತು.

ಮುದ್ರಣ ಮಾಧ್ಯಮ ಸಂಸ್ಥೆಗಳು ಪತ್ರಿಕೆಗಳನ್ನು ಮುದ್ರಿಸಬಹುದು. ಆದರೆ, ಅವುಗಳು ಪತ್ರಿಕೆ ಮಾರಾಟ ಅಂಗಡಿಗಳಲ್ಲಿ ಹಾಗೂ ಇತರೆಡೆ ಮಾತ್ರ ಮಾರಾಟವಾಗಬೇಕು. ಮನೆಗಳಿಗೆ ಪತ್ರಿಕೆಯನ್ನು ವಿತರಿಸುವಂತಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಡಿ ಶನಿವಾರ ಪ್ರಕಟಣೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪಿಸಿಐ ನೋಟಿಸ್‌ ಜಾರಿಗೊಳಿಸಿದೆ.

ಮಹಾರಾಷ್ಟ್ರ ಸರಕಾರದ ಆದೇಶ, ಮಾ. 23ರಂದು ಕೇಂದ್ರ ಸರಕಾರ ನೀಡಿರುವ ಮಾರ್ಗ ಸೂಚಿಗಳಿಗೆ ವಿರುದ್ಧವಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖೀಸಲಾಗಿದೆ. ಈ ಕುರಿತಂತೆ ವಿವರಣೆ ನೀಡುವಂತೆ ಕೋರ ಲಾಗಿದೆ ಎಂದು ಪಿಸಿಐ, ನೋಟಿಸ್‌ ನೀಡಿರುವ ಬಗ್ಗೆ ನೀಡಲಾಗಿರುವ ಪ್ರಕಟಣೆಯಲ್ಲಿ ಹೇಳಿದೆ.