ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಅನಧಿಕೃತ ಕ್ಯಾಂಟೀನ್ ತೆರವುಗೊಳಿಸಲು ಆದೇಶ

ಮೈಸೂರು, ಏಪ್ರಿಲ್, 132023(www.justkannada.in): ಕರ್ನಾಟಕ ಸಾರ್ವಜನಿಕ ಆವರಣಗಳ ಸಕ್ಷಮ ಪ್ರಾಧಿಕಾರಗಳ ಜಿಲ್ಲಾ ನ್ಯಾಯಾಲಯವು ನಗರದ ಝಾನ್ಸಿರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಅವಧಿ ಮೀರಿದ ನಂತರವೂ, ಅಕ್ರಮವಾಗಿ ನಢಸುತ್ತಿದ್ದ  ಕ್ಯಾಂಟೀನ್ ಅನ್ನು ತೆರವುಗೊಳಿಸುವಂತೆ ಆದೇಶ ನೀಡಿದೆ.

ಕಾಲೇಜು ಪ್ರಾಂಶುಪಾಲರಾದ ಡಾ.ರವಿ. ಡಿ ಮತ್ತು ಸರ್ಕಾರಿ ವಕೀಲರಾದ ಉಮೇಶ್ ಕುಮಾರ್ ಅವರ ಸತತ ಕಾನೂನು ಹೋರಾಟದ ‌ಫಲವಾಗಿ ವಿದ್ಯಾರ್ಥಿ ಪರವಾದ ಆದೇಶ ಬಂದಿದೆ. ಕಾಲೇಜಿ‌ನಲ್ಲಿ ಪ್ರತೀ ಮಾಹೆ 7100 ರೂಪಾಯಿ ಬಾಡಿಗೆಯಂತೆ ಮತ್ತು 21,300 ರೂಪಾಯಿ ಭದ್ರತಾ ಠೇವಣಿಯಂತೆ ಕ್ಯಾಂಟೀನ್  ನಡೆಸಲು  2017 ರಿಂದ 2022 ರವರೆಗೆ ಕರಾರು ಮಾಡಿಕೊಳ್ಳಲಾಗಿತ್ತು. ಆದರೆ 58 ತಿಂಗಳ ಬಾಡಿಗೆ ಬದಲಿಗೆ ಕೇವಲ 26 ತಿಂಗಳ ಬಾಡಿಗೆ ನೀಡಲಾಗಿತ್ತು. ಅಲ್ಲದೇ, 52 ತಿಂಗಳ ವಿದ್ಯುತ್ ಬಿಲ್ ಆದ 2.6 ಲಕ್ಷವನ್ನು ಪಾವತಿಸದೆ ಕರಾರು ಉಲ್ಲಂಘನೆ ‌ಮಾಡಲಾಗಿತ್ತು.

ವಿಧಿಸಿದ ಷರತ್ತುಗಳ ಅನ್ವಯ ಪ್ರಾಂಶುಪಾಲರ ನಿರ್ಧಾರವೇ ಅಂತಿಮ. ಆದರೆ, ಇದನ್ನು ಮರೆಮಾಚಿ ಬಾಡಿಗೆದಾರರಾದ ಪ್ರಭಾವತಿ ಎಚ್. ಪಿ, ಅವರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ, ನ್ಯಾಯಾಲಯದ ಆದೇಶದ ನಡುವೆಯೂ ಒಪ್ಪಂದ ಉಲ್ಲಂಘಿಸಿ ಹಸ್ತಾಂತರ ಮಾಡಿರಲಿಲ್ಲ. ಜತೆಗೆ, ಕೋವಿಡ್-19 ರ ಕಷ್ಟದ ಸಮಯದಲ್ಲಿ ವಿನಾಯಿತಿ ನೀಡಿದ್ದರೂ ವಿನಾಕಾರಣ ಹಸ್ತಾಂತರ ಮಾಡದೆ ತೊಂದರೆ ನೀಡಿದ್ದರು.

ಈ ವಿಷಯವನ್ನು ಮನಗಂಡ ಕರ್ನಾಟಕ ಸಾರ್ವಜನಿಕ ಆವರಣಗಳ ಅನಧಿಕೃತ ಅನುಭವದಾರರನ್ನು ಒಕ್ಕಲೆಬ್ಬಿಸುವ ಕಾಯಿದೆ 1974 ರ ಸಕ್ಷಮ ಪ್ರಾಧಿಕಾರಗಳ ನ್ಯಾಯಾಲಯವು, ಪ್ರಕರಣವನ್ನು ಇತ್ಯರ್ಥಪಡಿಸಿ ಕ್ಯಾಂಟೀನ್ ನ ಬಾಡಿಗೆದಾರರಾದ ದೇವರಾಜ ಮೋಹಲ್ಲಾದ ಗರಡಿ ರಸ್ತೆ ನಿವಾಸಿ ಪ್ರಭಾವತಿ ಎಚ್.ಪಿ ಅವರಿಗೆ ಕಾಲೇಜ್ ಕ್ಯಾಂಟೀನ್ ಅನ್ನು ತತ್ ಕ್ಷಣವೇ ತೆರವುಗೊಳಿಸಿ ಬಾಡಿಗೆ ಬಾಕಿ, ರೂಪಾಯಿ 2,43,800 (ಎರಡು ಲಕ್ಷದ ನಲವತ್ಮೂರು ಸಾವಿರದ ಎಂಟು ನೂರು)

ಮತ್ತು ವಿದ್ಯುತ್ ಹಾಗೆಯೇ ನೀರಿನ ಬಾಕಿ, ರೂಪಾಯಿ 2,60,000 (ಎರಡು ಲಕ್ಷ ಅರವತ್ತು ಸಾವಿರ), ಅಂದರೆ ಒಟ್ಟು  ರೂಪಾಯಿ 5,03,800 ಮೊತ್ತವನ್ನು ಕೂಡಲೇ ಪಾವತಿಸುವುದಲ್ಲದೇ, ಜಾಗದಿಂದ ಕೂಡಲೇ ತೆರವು ಮಾಡುವಂತೆ ನ್ಯಾಯಾದೀಶರು ಆದೇಶ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ , ದೂರನ್ನು ಆಧರಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಹಾರ ಗುಣಮಟ್ಟದ ಕುರಿತು ಪ್ರಶ್ನೆ ಮಾಡಲಾಗಿ, ಬಾಡಿಗೆದಾರರು ಕಾಲೇಜು ಪ್ರಾಂಶುಪಾಲರೊಂದಿಗೆ ಜಗಳ ಮಾಡಿದ್ದರು. ಅಲ್ಲದೇ,  ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಪ್ರಾಂಶುಪಾಲರಾದ ಡಾ.ರವಿ ಡಿ, ಅವರು ಸದರಿ ಸಮಸ್ಯೆ ಕುರಿತು ಮಾನ್ಯ ಜಿಲ್ಲಾಧಿಕಾರಿಗಳ  ಗಮನಕ್ಕೆ ತಂದಿದ್ದರು. ಅಲ್ಲದೆ, ವಿದ್ಯಾರ್ಥಿಗಳು ಅವ್ಯವಸ್ಥೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಪರಿಣಾಮ,  ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ಅಂದಿನ ಜಿಲ್ಲಾಧಿಕಾರಿಗಳು  ಸಂಬಂಧಿಸಿದಂತಹ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಿದ್ದರು.

ವಿದ್ಯಾರ್ಥಿ ಪರವಾದ ನ್ಯಾಯಾಲಯದ ಈ ಆದೇಶವು ಗ್ರಾಮೀಣ ಭಾಗದಿಂದ ಕಲಿಯಲು ಬರುವ ಬಡ ಮತ್ತು ಮಧ್ಯಮ ವರ್ಗದ ಹೆಣ್ಣುಮಕ್ಕಳಿಗೆ ವರದಾನವಾಗಿದೆ, ಎಂಬುದು ಪ್ರಾಂಶುಪಾಲರಾದ ಡಾ.ರವಿ, ಡಿ ಅವರ ಅಭಿಪ್ರಾಯ.

ಪ್ರಕರಣ ಸಂಬಂಧ ಎಲ್ಲಾ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳು ವರದಿ ಮಾಡಿದ್ದರ ಪರಿಣಾಮ, ಸಮಸ್ಯೆಯು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ವೇಗವಾಗಿ ಮುಟ್ಟಿದೆ ಎಂಬುದನ್ನು ಕಾಲೇಜ್ ಅಧ್ಯಾಪಕರು ಸ್ಮರಿಸಿದ್ದಾರೆ.

Key words: Order – clear –unauthorized- canteen –Mysore- Maharani Women Science College