ಮಳೆಯಿಂದ ಯಾವುದೇ ಮನೆಗಳು ಕುಸಿದಿಲ್ಲ: ತಜ್ಞರ ಅನುಮತಿ ಪಡೆದು ಪಾರಂಪರಿಕ ಕಟ್ಟಡಗಳ ದುರಸ್ತಿ ಕಾರ್ಯ- ಮೇಯರ್ ಸುನಂದ ಪಾಲನೇತ್ರ.

ಮೈಸೂರು,ಮೇ,20,2022(www.justkannada.in): ಮಳೆಯಿಂದ ಮೈಸೂರಿನಲ್ಲಿ ಯಾವುದೇ ಮನೆಗಳು ಕುಸಿದಿಲ್ಲ. ಲ್ಯಾನ್ಸ್ ಡೋನ್ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ, ದೊಡ್ಡಗಡಿಯಾರ, ವಾಣಿವಿಲಾಸ ಮಾರುಕಟ್ಟೆಗಳು ಶಿಥಿಲವಾಗ್ತಿವೆ.ಇವೆಲ್ಲವೂ ಪಾರಂಪರಿಕ ಕಟ್ಟಡಗಳು. ಹಾಗಾಗಿ ತಜ್ಞರ ಅನುಮತಿ ಪಡೆದು ದುರಸ್ತಿ ಕಾರ್ಯ ಮಾಡುತ್ತೇವೆ ಎಂದು ಮೇಯರ್ ಸುನಂದ ಪಾಲನೇತ್ರ ತಿಳಿಸಿದರು.

ಮೈಸೂರಿನಲ್ಲಿ ನಿರಂತರ ಮಳೆ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುನಂದಾ ಪಾಲನೇತ್ರ, ಮಳೆಯಿಂದ ಮೈಸೂರಿನಲ್ಲಿ ಮನೆಗಳು ಕುಸಿದಿಲ್ಲ. ಶಿಥಿಲಗೊಂಡಿದ್ದ ವಾಣಿ ವಿಲಾಸ ಮಾರುಕಟ್ಟೆ ಕುಸಿದಿತ್ತು. ಆದರೆ ಈಗಾಗಲೇ ದುರಸ್ತಿ ಕಾರ್ಯ ಆರಂಭವಾಗಿದೆ. ರಸ್ತೆ ಬದಿಯಿರುವ ಅಪಾಯಕಾರಿ ಮರಗಳ ತೆರವು ಕಾರ್ಯ ಆರಂಭವಾಗಿದೆ. ಅಗ್ರಹಾರ, ಎನ್.ಆರ್.ಕ್ಷೇತ್ರದಲ್ಲಿ ಯುಜಿಡಿ ಸಮಸ್ಯೆ ಇದೆ. ಮಳೆ ನಿಂತ ತಕ್ಷಣವೇ ಸರಿಪಡಿಸುವ ಕೆಲಸ ನಡೆಯಲಿದೆ. ಅದಕ್ಕೆ ಬೇಕಾಗುವ ಎಲ್ಲಾ ಅನುದಾನ ನಮ್ಮ ಬಳಿ ಇದೆ. ಮಳೆಗಾಲ ಎದುರಿಸಲು ಪಾಲಿಕೆ ಅಧಿಕಾರಿಗಳು ಸಿದ್ದರಾಗಿದ್ದಾರೆ. 24*7 ಕೆಲಸ ಮಾಡಲು ಸೂಚಿಸಿದ್ದೇವೆ. ರಸ್ತೆ ಗುಂಡಿಮುಚ್ಚುವ ಕಾರ್ಯ ಹಾಗೂ ಹೊಸ ರಸ್ತೆಗಳಿಗೆ 50ಕೋಟಿ ಹಣ ಬಿಡುಗಡೆಯಾಗಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಜೂ. 20ರಿಂದ ಕೆಲಸ ಆರಂಭಿಸುತ್ತೇವೆ ಎಂದು ತಿಳಿಸಿದರು.

ಪಾಲಿಕೆ ಸದಸ್ಯರ ಬಗ್ಗೆ ಸಂಸದ ಪ್ರತಾಪ್ ಸಿಂಹ ಹೇಳಿಕೆ ಸಮರ್ಥಿಸಿಕೊಂಡ ಮೇಯರ್ ಸುನಂದ ಪಾಲನೇತ್ರ, ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಸಾರ್ವಜನಿಕರು ದೂರುಗಳು ನೇರವಾಗಿ ಸಂಸದರ ಬಳಿ ಹೋಗ್ತಿವೆ. ಹಾಗಾಗಿ ಸಂಸದರು ಬೇಜಾರಿಂದ ಆ ರೀತಿಯ ಮಾತನಾಡಿದ್ದಾರೆ.ಯುಜಿಡಿ, ನಗರದ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವ ಕೆಲಸ ನಮ್ಮದು.ಸಂಸದರು ಮೈಸೂರಿಗೆ ದಶಪಥ ಹೆದ್ದಾರಿ ತಂದಿದ್ದಾರೆ. ವಿಮಾನ ನಿಲ್ದಾಣ ವಿಸ್ತರಣೆ, ರಿಂಗ್ ಅಭಿವೃದ್ಧಿ ಮಾಡಿದ್ದಾರೆ. ಇದೀಗ ಗ್ಯಾಸ್ ಪೈಪ್ ಲೈನ್ ಯೋಜನೆ ಕೊಡಿಸುತ್ತಿದ್ದಾರೆ. ಮೈಸೂರಿನ ಅಭಿವೃದ್ಧಿಗೆ ಹೆಚ್ಚು ಶ್ರಮವಹಿಸಿದ್ದಾರೆ. ಹಾಗಾಗಿ ಅವರ ಸಲಹೆಗಳನ್ನ ಸ್ವೀಕರಿಸೋಣ ಎಂದು ಹೇಳಿದರು.

Key words: No homes – fallen – rain-mysore-Mayor-Sunanda Palanethra.