ಎನ್ ಇಪಿ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳಬೇಕು- ಮೈಸೂರು ವಿವಿ ಪ್ರಭಾರ ಕುಲಪತಿ  ಪ್ರೊ.ರಾಜಶೇಖರ್.

ಮೈಸೂರು,ನವೆಂಬರ್,21,2022(www.justkannada.in):  ಎನ್ ಇಪಿ ಒಂದೊಳ್ಳೆ ಶಿಕ್ಷಣ ನೀತಿ. ಆದರೆ, ಇದರಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಇದನ್ನು ಚರ್ಚಿಸಿ ಪರಿಹರಿಸಿಕೊಳ್ಳಬೇಕು ಎಂದು ಮೈವಿವಿ ಪ್ರಭಾರ ಕುಲಪತಿ ಪ್ರೊ.ಎಚ್.ರಾಜಶೇಖರ್ ತಿಳಿಸಿದ್ದಾರೆ.

ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಪ್ರಾಂಶುಪಾಲರಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಷ್ಟೋ ಜನರಿಗೆ ಎನ್ ಇಪಿ ಕಾನ್ಸೆಪ್ಟ್ ಇನ್ನೂ ಅರ್ಥವಾಗಿಲ್ಲ.  ಇಂದಿನ ಆರ್ಥಿಕ ವ್ಯವಸ್ಥೆ ನೋಡಿದರೆ ಇದರ ಅವಶ್ಯಕತೆ  ತುಂಬಾ ಇದೆ. 2027 ರಲ್ಲಿ 8.5 ಟ್ರಿಲಿಯನ್ ಆಗುತ್ತಿದೆ. ‌ಈ ನಿಟ್ಟಿನಲ್ಲಿ ಬಹುಶಿಸ್ತೀಯ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತಿದೆ.  ಎನ್ ಇಪಿ ವಿಭಿನ್ನ ಆಲೋಚನೆ.‌ ಆದರೆ ಸಾಕಷ್ಟು ಸಮಸ್ಯೆ ಇದೆ. ಆ ಸಮಸ್ಯೆಗೆ ಪರಿಹಾರ ಕಂಡುಕೊಂಡು ಮುಂದುವರಿಯಬೇಕು. ಇನ್ನೆರಡು ಮೂರು ವರ್ಷದಲ್ಲಿ ಅದಕ್ಕೆ ಪರಿಹಾರ ಸಿಗುವ ಲಕ್ಷಣಗಳು ಇದೆ ಎಂದರು.

ಮೈಸೂರು ವಿವಿ ಇದೀಗ ಕಿರಿದಾಗುತ್ತಿದೆ. ನಾಲ್ಕು ಜಿಲ್ಲೆ ಇದ್ದಿದ್ದು ಇದೀಗ ಒಂದು ಜಿಲ್ಲೆಗೆ ಇಳಿಯುತ್ತಿದೆ. ಇದರಿಂದ ಹಲವು ಸಮಸ್ಯೆ ಕಾಡುತ್ತದೆ. ಅದಕ್ಕೆ‌ ಪರಿಹಾರ ಕಾಣಬೇಕಿದೆ. ಸವಾಲುಗಳು ಹೆಚ್ಚಿದೆ. ಸ್ಪರ್ಧೆ ಹೆಚ್ಚಾಗುತ್ತದೆ. ಖಾಸಗೀಕರಣಕ್ಕೂ ಇದು ದಾರಿ ಮಾಡಿಕೊಡಬಹುದು. ಶಿಕ್ಷಕರನ್ನು ತಯಾರು ಮಾಡಬೇಕಿದೆ. ಇಷ್ಟೆಲ್ಲದರ ನಡುವೆಯೂ ಮೈಸೂರು ವಿವಿಗೆ ಹಲವು ಹೊಸ ಸಾಧ್ಯತೆಗಳಿವೆ. ಮೆಡಿಕಲ್ ಕಾಲೇಜು ತೆರೆಯಬಹುದು. ಈಗಾಗಲೇ ‌ಎಂಜಿನಿಯರಿಂಗ್ ಕಾಲೇಜು ತೆರೆಯಲಾಗಿದೆ. ಇನ್ಮುಂದೆ ಫಾರ್ಮಾಸಿ ಕಾಲೇಜು ಕೂಡ ಶುರುವಾಗಲಿದೆ. ಮುಂದೆ ಇಂಟರ್ ಗ್ರಿಟಿ ಕೋರ್ಸ್ ಶುರು ಮಾಡಬಹುದು. ಆನ್ಲೈನ್ ಕೋರ್ಸ್ ಹೆಚ್ಚು ನಡೆಸಲು ಅವಕಾಶ ಸಿಗುತ್ತವೆ ಎಂದರು.

ಇದಕ್ಕೂ ಮುನ್ನ ಪ್ರಾಂಶುಪಾಲರೊಂದಿಗೆ ಸಭೆ ನಡೆಯಿತು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಿರುವ  60:40 ಅಂಕಗಳ ಅನುಪಾತದಲ್ಲಿ ಪದವಿ ಪರೀಕ್ಷೆಯನ್ನು ನಡೆಸುವ ಸಂಬಂಧ ಚರ್ಚೆ ನಡೆಯಿತು.  2 ಗಂಟೆ ಅಥವಾ 2.30 ಗಂಟೆಗೆ ನಿಗದಿಪಡಿಸುವ ಕುರಿತು ಭಿನ್ನ ಅಭಿಪ್ರಾಯಗಳು ವ್ಯಕ್ತವಾಯಿತು. ಅಂತಿಮವಾಗಿ ಮುಂದಿನ ಸಿಂಡಿಕೇಟ್, ಶಿಕ್ಷಣ ಮಂಡಳಿ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು.

ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಮಾತನಾಡಿ, ಎನ್ ಇಪಿ ಮೊದಲನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಎರಡನೇ ಸೆಮಿಸ್ಟರ್ ಫಲಿತಾಂಶವನ್ನು ವಾರದೊಳಗೆ ಪ್ರಕಟಿಸಲಾಗುವುದು. ಪರೀಕ್ಷೆ ಸಮಯ ಮಿತಿಯನ್ನು ಶೀಘ್ರದಲ್ಲೇ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.

ಇದಕ್ಕೂ ಮುನ್ನ ಮೈಸೂರು ವಿವಿ ಪ್ರಭಾರ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿರುವ ಪ್ರೊ.ಎಚ್.ರಾಜಶೇಖರ್ ಹಾಗೂ ಸಿಡಿಸಿ ನಿರ್ದೇಶಕನಾಗಿ ನೇಮಕಗೊಂಡಿರುವ ಪ್ರೊ.ಎಸ್. ಶ್ರೀಕಂಠಸ್ವಾಮಿ ಅವರನ್ನು ಅಭಿನಂದಿಸಲಾಯಿತು.

Key words: NEP- issues – discussed –resolved-Mysore University -Prof. Rajashekhar