ಧರ್ಮ ಬೇಕಾ? ಜೀವನಾ ಬೇಕಾ? ಜನರನ್ನು ಪ್ರಶ್ನಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ.

ಬೆಂಗಳೂರು,ಮೇ,11,2022(www.justkannada.in):  ಧರ್ಮದ ಹೆಸರಿನಲ್ಲಿ ನಿಮ್ಮನ್ನು ದಾರಿ ತಪ್ಪಿಸಲಾಗುತ್ತಿದೆ. ನಿಮಗೆ ಧರ್ಮ ಬೇಕಾ? ಜೀವನ ಬೇಕಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜನರನ್ನು ಪ್ರಶ್ನೆ ಮಾಡಿದ್ದಾರೆ.

ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ʼಜನತಾ ಜಲಧಾರೆʼ ಕಾರ್ಯಕ್ರಮದ ವೇಳೆ ಗವಿಗಂಗಾಧರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಧರ್ಮವನ್ನು ಮನೆಯಲ್ಲಿ ಇಟ್ಟುಕೊಳ್ಳೋಣ. ಬೀದಿಯಲ್ಲಿ ರಕ್ತದ ಓಕುಳಿ ಹರಿಸುವುದು ಬೇಡ ಎಂದು ಯುವಕರಿಗೆ ಮಾಜಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಈಗಾಗಲೇ ಎರಡು ಬಾರಿ ನಾನು ನಮ್ಮ ತಂದೆ-ತಾಯಿಗಳ ಪುಣ್ಯದಿಂದ ಮುಖ್ಯಮಂತ್ರಿ ಆಗಿದ್ದೇನೆ. ಮತ್ತೆ ಸಿಎಂ ಆಗಬೇಕು ಅನ್ನೋದು ಮುಖ್ಯ ಅಲ್ಲ. ಇಂದು ಬೆಳಗ್ಗೆ ಒಂದು ಚಾನಲ್ʼನಲ್ಲಿ ಶಾಲಾ ಮಕ್ಕಳು ಅನುಭವಿಸುತ್ತಿರುವ ಹಿಂಸೆಯನ್ನು ನೋಡಿದ್ದೇನೆ. ಮಹಾಲಕ್ಷ್ಮಿ ಲೇಔಟ್ʼನಲ್ಲಿ ಖಾಸಗಿ ಶಾಲೆಯ ಅವ್ಯವಸ್ಥೆಯನ್ನು ಆ ವಾಹಿನಿ ಹೊರಗಿಟ್ಟಿದೆ. ಹಲವಾರು ಶಾಲೆಗಳಲ್ಲಿ ಇಂತಾ ವ್ಯವಸ್ಥೆ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇಂಥ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಡಬೇಕೇ ಹೊರತು ಸಮಾಜವನ್ನು ಒಡೆಯಲು ಅಲ್ಲ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.

ಇಂಥ ಸಮಸ್ಯೆಗಳನ್ನು ಗಮನಿಸಿಯೇ ನಾನು ಪಂಚತಂತ್ರ ಕಾರ್ಯಕ್ರಮಗಳಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಯ ಬಗ್ಗೆ ಕಾರ್ಯಕ್ರಮ ರೂಪಿಸಿದ್ದೇನೆ. ಕೂಡಲೇ ಆ ಶಾಲೆಯ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದರು ಅವರು.

ರವೀಂದ್ರನಾಥ್ ರಾಜೀನಾಮೆ ಅಂಗೀಕಾರ ಬೇಡ:

ಐಪಿಎಸ್ ಅಧಿಕಾರಿ ರವೀಂದ್ರನಾಥ್ ರಾಜೀನಾಮೆಯನ್ನು ಸರ್ಕಾರ ಅಂಗೀಕಾರ ಮಾಡಬಾರದು. ಸರ್ಕಾರದ ನಡವಳಿಕೆ ಖಂಡಿಸಿ ಅವರು ರಾಜೀನಾಮೆ ನೀಡಿದ್ದಾರೆ. ಅನೇಕ ಜನ ನಕಲಿ ಮೀಸಲಾತಿ ಸರ್ಟಿಫಿಕೇಟ್ ಪಡೆದಿದ್ದರು. ಇದನ್ನು ತನಿಖೆ ಮಾಡಲು ಹೋದರೆ ವರ್ಗಾವಣೆ ಮಾಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಬಗ್ಗೆ ಸಿದ್ದರಾಮಯ್ಯ ಅಧಿವೇಶನದಲ್ಲಿ ಭಾಷಣ ಮಾಡಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ನಕಲಿ ದಾಖಲಾತಿ ಕೊಟ್ಟು ಪೊಲೀಸ್ ಅಧಿಕಾರಿಯಾಗಿದ್ದ ಕೆಂಪಯ್ಯ ಆಯಕಟ್ಟಿನ ಅಧಿಕಾರ ಪಡೆದಿದ್ದರು. ಅಂತಹವರಿಗೆ ಪೊಲೀಸ್ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದರು. ಸಿದ್ದರಾಮಯ್ಯಗೆ ಈ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಕೆಂಪಯ್ಯಗೆ ನೊಟೀಸ್ ಕೊಟ್ಟ ಎರಡು ದಿನಕ್ಕೆ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್- ಬಿಜೆಪಿ ಶಾಮೀಲಾಗಿವೆ. ಇದರಲ್ಲಿ ಯಾರು ಎ ಟೀಂ ಮತ್ತು ಯಾರು ಬಿ ಟೀಂ ಅಂತ ಗೊತ್ತಾಗುತ್ತದೆ. ಅಧಿಕಾರಿಯನ್ನು ವರ್ಗಾವಣೆ ಯಾಕೆ ಮಾಡಿದಿರಿ? ಸಿದ್ದರಾಮಯ್ಯ ಹೇಳಿದ್ದಕ್ಕೆ‌ ಮಾಡಿದಿರಾ? ಅವರು ಮಾತೆತ್ತಿದರೆ ದಲಿತರು, ಹಿಂದುಳಿದವರ ಬಗ್ಗೆ ಮಾತಾಡುತ್ತಾರೆ. ಆದರೆ, ಅವರಿಗೆ ಸಿಗಬೇಕಾದ ಸೌಲಭ್ಯದಲ್ಲಿ ಅನ್ಯಾಯ ಆಗುತ್ತಿದೆ. ಅದನ್ನು ಸರಿ ಮಾಡಲು ಹೋದರೆ ಅಧಿಕಾರಿಯನ್ನೇ ವರ್ಗವಣೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿ ಕಾರಿದರು. ಈ ಸರಕಾರದಲ್ಲಿ ದಲಿತರಿಗೆ ಮತ್ತು ದಲಿತ ಅಧಿಕಾರಿಗಳಿಗೆ ಎಲ್ಲಿದೆ ರಕ್ಷಣೆ?  ಎಂದು ಹೆಚ್.ಡಿಕೆ ಪ್ರಶ್ನಿಸಿದರು.

Key words: Need- Religion – life- Former CM -HD Kumaraswamy- people