ರಷ್ಯಾ ದಾಳಿ ವೇಳೆ ಕನ್ನಡಿಗ ನವೀನ್ ಬಲಿ:  ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ, ಸಿದ್ಧರಾಮಯ್ಯ ಸೇರಿ ಹಲವರಿಂದ ಸಂತಾಪ.

ಬೆಂಗಳೂರು,ಮಾರ್ಚ್,1,2022(www.justkannada.in):  ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿರುವ ರಷ್ಯಾ ರಾಕೆಟ್ ಕ್ಷಿಪಣಿ ದಾಳಿ ನಡೆಸುತ್ತಿದ್ದು ಈ ಮಧ್ಯೆ ದಾಳಿಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಬಲಿಯಾಗಿದ್ದಾರೆ. ನವೀನ್ ಸಾವಿಗೆ ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ಧರಾಮಯ್ಯ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನವೀನ್ ಅವರ ತಂದೆ ಶೇಖರ್ ಗೌಡರಿಗೆ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಈ ಮಧ್ಯೆ ನವೀನ್ ನಿಧನಕ್ಕೆ ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ,   ನವೀನ್ ಕುಟುಂಬ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ ಪ್ರಧಾನಿ ಮೋದಿ ಕೂಡ ಸಾಂತ್ವನ ಹೇಳಿದ್ದಾರೆ. ಮೋದಿ ಜೊತೆ ನಾನು ಕೂಡ ಮಾತನಾಡಿದ್ದೇನೆ ಎಂದಿದ್ದಾರೆ.

ನವೀನ್ ಸಾವಿಗೆ ಸಂತಾಪ ಸೂಚಿಸಿರುವ ಸಿದ್ಧರಾಮಯ್ಯ, ರಷ್ಯಾ ದಾಳಿಗೆ ನವೀನ್ ಬಲಿಯಾಗಿದ್ದಾನೆ.  ಈ ಸುದ್ಧಿ ತಿಳಿದು ತುಂಬಾ ದುಃಖವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ನವೀನ್ ಸುದ್ಧಿ ತಿಳಿದು ದುಃಖವಾಗುತ್ತಿದೆ. ಉಳಿದ ವಿದ್ಯಾರ್ಥಿಗಳು ಬೇಗ ವಾಪಸ್ ಆಗಲಿ. ಉಕ್ರೇನ್-ರಷ್ಯಾ ನಡುವಿನ ಸಂಘರ್ಷ ಆದಷ್ಟು ಬೇಗ ಮುಗಿಯಲಿ ಎಂದು ಪ್ರಾರ್ಥಿಸಿದ್ದಾರೆ.

Key words: Naveen –death-ukraine- Condolences.