ಸಗಣಿ‌ ಕೇಕ್ ಕತ್ತರಿಸಿ ಗಿಡಗಳ ಹುಟ್ಟುಹಬ್ಬ ಆಚರಣೆ: ಮಾಲಿನ್ಯ ನಿಯಂತ್ರಣ ಕುರಿತು ವಿನೂತನ ಜಾಗೃತಿ ಮೂಡಿಸಿದ ಆರ್ ಟಿಓ ಅಧಿಕಾರಿಗಳು…

ಮಂಡ್ಯ,ನ,12,2019(www.justkannada.in):  ಸಗಣಿಕೇಕ್ ಕತ್ತರಿಸಿ ಗಿಡಗಳ ಹುಟ್ಟುಹಬ್ಬ ಆಚರಿಸುವ ಮೂಲಕ ಮಾಲಿನ್ಯ ನಿಯಂತ್ರಣ ಕುರಿತು  ಆರ್ ಟಿಓ ಅಧಿಕಾರಿಗಳು ವಿನೂತನವಾಗಿ ಜಾಗೃತಿ ಮೂಡಿಸಿದರು.

ನಾಗಮಂಗಲದ ಆರ್ ಟಿಓ ಅಧಿಕಾರಿಗಳು ಈ ರೀತಿ ವಿನೂತನವಾಗಿ ಮಾಲಿನ್ಯ ನಿಯಂತ್ರಣ ಕುರಿತು ಜಾಗೃತಿ ಮೂಡಿಸಿದ್ದಾರೆ. ಕಚೇರಿ ಆವರಣದಲ್ಲಿ ನೆಡಲಾಗಿರುವ ಸುಮಾರು 50 ಕ್ಕೂ ಹೆಚ್ಚು ಗಿಡಗಳಿಗೆ  ಗೊಬ್ಬರ ಮತ್ತು ನೀರು ಹಾಕಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪೋಷಣೆ ಮಾಡುತ್ತಿದ್ದಾರೆ. ಹೀಗಾಗಿ ಗಿಡಗಳನ್ನು ನೆಡುವುದಕ್ಕಿಂತ ಅವುಗಳ ಪೋಷಣೆ ಮುಖ್ಯ ಎಂಬುದನ್ನು ವಿನೂತನ ಕಾರ್ಯಕ್ರಮ ಮಾಡುವ ಮೂಲಕ‌ ಅರಿವು ಮೂಡಿಸಿದರು.

ಹಾಗೆಯೇ ಕಳೆದ ಸಾಲಿನಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಸದಲ್ಲಿ ನೆಡಲಾಗಿದ್ದ ಗಿಡಗಳ ಹುಟ್ಟುಹಬ್ಬ ಆಚರಿಸಿದರು. ಕೇಕ್ ಮಾದರಿಯನ್ನು ಸಗಣಿಯಿಂದ ತಯಾರಿಸಿ ಸಗಣಿ ಕೇಕ್ ಕತ್ತರಿಸುವ ಜೊತೆಗೆ ಗಿಡಗಳಿಗೆ ಸಗಣಿ ಮತ್ತು ನೀರು ಹಾಕುವ ಮೂಲಕ ವಿಶೇಷವಾಗಿ  ಅಧಿಕಾರಿಗಳು ಜಾಗೃತಿ ಮೂಡಿಸಿದರು.

ಪ್ರತಿಯೊಂದು ಗಿಡಕ್ಕೂ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದ ಹೆಣ್ಣುಮಕ್ಕಳ‌ ಹೆಸರಿನ ನಾಮಫಲಕ ಹಾಕಿ ನಾಮಕರಣ ಮಾಡಲಾಯಿತು. ಈ ಸಂದರ್ಭ ARTO ಶಿವಶಂಕರ್, ಸೂಪರಿಂಟೆಂಡೆಂಟ್ ಪ್ರಸಾದ್, ಪ್ರವೀಣ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರು ಪಾಲ್ಗೊಂಡು ಅಧಿಕಾರಿಗಳ ವಿಶೇಷ ಜಾಗೃತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Key words: nagamangal-RTO officer- awareness – pollution control-tress-birthday