ನಾಡಪ್ರಭು ಕೆಂಪೇಗೌಡರ ಕೀರ್ತಿ ಕಾಲಾತೀತ-  ಸಿಎಂ ಬೊಮ್ಮಾಯಿ ಬಣ್ಣನೆ.

ಬೆಂಗಳೂರು,ಅಕ್ಟೋಬರ್,21,2022(www.justkannada.in):  ದೂರದೃಷ್ಟಿ ಮತ್ತು ವ್ಯವಸ್ಥಿತ ಯೋಜನೆಗಳಿರುವ ಆಡಳಿತಗಾರರು ಶತಶತಮಾನಗಳು ಉರುಳಿದರೂ ಅಜರಾಮರಾಗಿ ಇರುತ್ತಾರೆ ಎನ್ನುವುದಕ್ಕೆ ಬೆಂಗಳೂರಿನ ಸ್ಥಾಪಕರಾದ ನಾಡಪ್ರಭು ಕೆಂಪೇಗೌಡರೇ ಸಾಕ್ಷಿಯಾಗಿದ್ದಾರೆ. ಇಂತಹ ಇತಿಹಾಸ ಪುರುಷರಿಗೆ 108 ಅಡಿ ಎತ್ತರದ ಭವ್ಯ ಪ್ರತಿಮೆ ಸ್ಥಾಪಿಸುವ ಮೂಲಕ ರಾಜ್ಯ ಸರಕಾರವು ಸೂಕ್ತ ಗೌರವ ನೀಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.

ನ.11ರಂದು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನದ 20 ವಿಶೇಷ ನಾಡಪ್ರಭು ಕೆಂಪೇಗೌಡ ರಥಗಳಿಗೆ ಅವರು ಶುಕ್ರವಾರ ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿದರು.

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರವು ಈ ಅಭಿಯಾನವನ್ನು ಹಮ್ಮಿಕೊಂಡಿದೆ. ಕೆಂಪೇಗೌಡರು ಜನರ ನಡುವೆಯೇ ಬದುಕಿ, ಇಲ್ಲಿನ ಜನರ ನೆಮ್ಮದಿಗೆ ಇಂಥದೊಂದು ನಗರವನ್ನು ನಿರ್ಮಿಸಿ ಹೋಗಿದ್ದಾರೆ. ಇತಿಹಾಸವನ್ನು ಮರೆತರೆ ನಮ್ಮ ಭವಿಷ್ಯ ಮಂಕಾಗುತ್ತದೆ. ಕೆಂಪೇಗೌಡರಿಗೆ ಸೂಕ್ತ ಗೌರವ ಸಲ್ಲಬೇಕೆಂಬ ಸಂಕಲ್ಪ ಸರಕಾರದ್ದಾಗಿತ್ತು. ಅನೇಕ ದಶಕಗಳ ಈ ಕನಸು ಈಗ ನನಸಾಗುತ್ತಿದೆ ಎಂದು ಅವರು ನುಡಿದರು.

ಅಮೆರಿಕದ ಸ್ವಾತಂತ್ರ ಪ್ರತಿಮೆ, ಗುಜರಾತಿನ ಏಕತಾ ಪ್ರತಿಮೆಗಳಂತೆ ನಮ್ಮಲ್ಲಿ ಕೆಂಪೇಗೌಡರ ಪ್ರತಿಮೆಗೆ ‘ಪ್ರಗತಿ ಪ್ರತಿಮೆ’ ಎಂದು ಹೆಸರಿಸಲಾಗಿದೆ. ಅವರ 108 ಅಡಿ ಎತ್ತರದ ಪ್ರತಿಮೆಗೆ ತಕ್ಕಂತೆ ಕರ್ನಾಟಕವು ಇಡೀ ದೇಶದಲ್ಲಿ ನಂ.1 ಸ್ಥಾನಕ್ಕೆ ಏರಬೇಕು. ಈ ಪ್ರತಿಮೆ ಸ್ಥಾಪನೆಯು ರಾಜ್ಯದ ಉಜ್ಜ್ವಲ ಭವಿಷ್ಯದ ಸಂಕೇತವಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿಗೆ ಬರುವ ಸಾವಿರಾರು ವಿದೇಶೀಯರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಕೆಂಪೇಗೌಡರಿಗೆ ನಮಸ್ಕರಿಸುವಂತೆ ಆಗಬೇಕು. ನ.11ರಂದು ನಡೆಯಲಿರುವ ಸಮಾರಂಭವು ರಾಜ್ಯದ ಪಾಲಿಗೆ ಅಮೃತ ಘಳಿಗೆಯಾಗಿದೆ. ಕೆಂಪೇಗೌಡರ ಆಡಳಿತವು 21ನೇ ಶತಮಾನದಲ್ಲೂ ಮಾದರಿಯಾಗಿ  ಉಳಿದುಕೊಂಡಿದೆ. ಅವರ ರಚನಾತ್ಮಕತೆ ಈಗಲೂ ಅನುಕರಣ ಯೋಗ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೆಂಪೇಗೌಡರು ಇಡೀ ಕರ್ನಾಟಕದ ನಾಯಕ

ಪ್ರಾಸ್ತಾವಿಕವಾಗಿ ಮಾತನಾಡಿದ ಸಚಿವ ಮತ್ತು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಡಾ.ಸಿ ಎನ್ ಅಶ್ವತ್ಥನಾರಾಯಣ, ವಿಜಯನಗರದ ಅರಸು ಕೃಷ್ಣದೇವರಾಯರಿಂದ ಸ್ಫೂರ್ತಿ-ಪ್ರೇರಣೆ ಪಡೆದು ನಾಡಪ್ರಭು ಕೆಂಪೇಗೌಡರು ಕಟ್ಟಿದ ನಗರವಾದ ಬೆಂಗಳೂರು ಇಂದು ಜಾಗತಿಕ ಸ್ತರದಲ್ಲಿ ವಿರಾಜಮಾನವಾಗಿದೆ. ಇಂತಹ ಕೆಂಪೇಗೌಡರು ಇಡೀ ಕರ್ನಾಟಕದ ನಾಯಕರಾಗಿದ್ದಾರೆ ಎಂದರು.

ಮಣ್ಣು ಪಂಚಭೂತಗಳಲ್ಲಿ ಒಂದಾಗಿದೆ. ರಾಜ್ಯದ ಪ್ರತಿಯೊಂದು ಹಳ್ಳಿಯ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಿಣಿ, ತೊರೆಗಳಿಂದ ಇದನ್ನು ಕೆಂಪೇಗೌಡರ ಗೌರವಾರ್ಥ ಸಂಗ್ರಹಿಸಲಾಗುತ್ತಿದೆ. ಇದರ ಹಿಂದೆ ಇಡೀ ಕರ್ನಾಟಕವೇ ಒಂದು ಎನ್ನುವ ಉದಾತ್ತ ಸಂದೇಶವಿದೆ ಎಂದು ಅವರು ಬಣ್ಣಿಸಿದರು.

ಅಭಿಯಾನವು ನ.7ರವರೆಗೆ ನಡೆಯಲಿದ್ದು, ಇದನ್ನು ಕೆಂಪೇಗೌಡ ಥೀಮ್ ಪಾರ್ಕ್ ಮತ್ತು ಪ್ರತಿಮೆಯ ನಾಲ್ಕು ಗೋಪುರಗಳಿಗೆ ಬಳಸಿಕೊಳ್ಳಲಾಗುವುದು. ಬೆಂಗಳೂರು ಆ ಕಾಲದಿಂದಲೂ ರಚನಾತ್ಮಕ ಚಟುವಟಿಕೆಗಳಿಗೆ ಮತ್ತು ವಾಣಿಜ್ಯೋದ್ಯಮಕ್ಕೆ ಹೆಸರಾಗಿದೆ. ಯಶವಂತಪುರ, ರಾಜಾಜಿನಗರ ಮುಂತಾದ ಉತ್ತರದ ಭಾಗಗಳಲ್ಲಿ ಉದ್ಯಮ ಸಂಸ್ಕೃತಿ ಮೊದಲಿನಿಂದಲೂ ಬೇರೂರಿದೆ. ಇದಕ್ಕೆ ಕಾರಣಕರ್ತರಾದ ಕೆಂಪೇಗೌಡರಿಗೆ ಇಷ್ಟು ತಡವಾಗಿಯಾದರೂ ಗೌರವ ಸಲ್ಲುತ್ತಿರುವುದು ಸಮಾಧಾನದ ಸಂಗತಿಯಾಗಿದ್ದು, ಇದನ್ನು ಬಿಜೆಪಿ ಸರಕಾರ ಮಾಡಿದೆ ಎಂದು ಅವರು ವಿವರಿಸಿದರು.

ಈ ಪ್ರತಿಮೆ ಸ್ಥಾಪನೆಯ ಹಿಂದೆ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪನವರ ಸಂಕಲ್ಪ ಶಕ್ತಿ ಇದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಹೆಗಲು ನೀಡಿದ್ದಾರೆ. ಇದರಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿರುವ ತೃಪ್ತಿ ನನ್ನದಾಗಿದೆ. ಇನ್ನುಮುಂದೆ ಇದು ಬೆಂಗಳೂರಿನ ಹೆಗ್ಗುರುತಾಗಲಿದೆ ಎಂದು ಅಶ್ವತ್ಥನಾರಾಯಣ ನುಡಿದರು.

ಮೃತ್ತಿಕೆ ಸಂಗ್ರಹ ಅಭಿಯಾನದ ರೂಪುರೇಷೆ

ರಾಜಧಾನಿಯಿಂದ 20 ಕೆಂಪೇಗೌಡ ರಥಗಳು ಜಿಲ್ಲಾ ಮಟ್ಟದಲ್ಲಿ ಅಧಿಕೃತವಾಗಿ ಹಸಿರು ನಿಶಾನೆ ಕಾಣಲಿವೆ. ಇದರ ಅಂಗವಾಗಿ ಪ್ರತಿಯೊಂದು ಜಿಲ್ಲೆಯ ಪ್ರಮುಖ ತಾಣಗಳಲ್ಲೂ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಿಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓಗಳು ಉಸ್ತುವಾರಿಗಳಾಗಿರುತ್ತಾರೆ ಎಂದು ಅಶ್ವತ್ ನಾರಾಯಣ್ ತಿಳಿಸಿದರು.

ಪ್ರತೀ ಜಿಲ್ಲೆಗೂ ಈ ವಿಶೇಷ ರಥಗಳು ಬಂದಾಗ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಇದರಲ್ಲಿ ಜನಪ್ರತಿನಿಧಿಗಳು, ಸಾಹಿತಿಗಳು, ಪ್ರಗತಿಪರ ರೈತರು, ಸ್ವಸಹಾಯ ಸಂಘಗಳ ಸದಸ್ಯರು, ಹಾಲು ಒಕ್ಕೂಟಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಜತೆಗೆ ವೃತ್ತಿನಿರತ ಕುಂಬಾರರು, ಅಗಸರು, ತರಕಾರಿ/ಹೂ ವ್ಯಾಪಾರಿಗಳು,ಗಾಣಿಗರು, ನೀರುಗಂಟಿಗಳು ಮತ್ತು ನಾನಾ ಸಮುದಾಯಗಳ ಪ್ರಮುಖರು ಕೂಡ ಈ ಸಂಭ್ರಮದ ಭಾಗವಾಗಲಿದ್ದಾರೆ. ಈ ರಥಗಳಲ್ಲಿ ಎಲ್‌ ಇಡಿ ಸ್ಕ್ರೀನ್‌ ಪ್ಲೇ ಕೂಡ ಇರುತ್ತದೆ. ಈಗಾಗಲೇ ರಾಜ್ಯಾದ್ಯಂತ ಕೆರೆಕಟ್ಟೆ, ಕಲ್ಯಾಣಿ, ಪುಷ್ಕರಿಣಿ, ನದಿ, ಝರಿ ಇತ್ಯಾದಿಗಳಿಂದ ಸಂಗ್ರಹಿಸಿರುವ ಪವಿತ್ರವಾದ ಮಣ್ಣನ್ನು ನೋಡಲ್‌ ಅಧಿಕಾರಿಗಳು ಈ ರಥಗಳಿಗೆ ಹಿರಿಯರೊಬ್ಬರ ಮೂಲಕ ಸಮರ್ಪಿಸಲಿದ್ದಾರೆ ಎಂದು ಅವರು ವಿವರಿಸಿದರು.

ಬೆಂಗಳೂರಿನಲ್ಲಿ ಕೂಡ ವಲಯ ಆಯುಕ್ತರು/ಜಂಟಿ ಆಯುಕ್ತರು ಈ ರಥಗಳು ಯಾವ್ಯಾವ ವಾರ್ಡುಗಳಲ್ಲಿ ಎಲ್ಲೆಲ್ಲಿ ಸಾಗಬೇಕು ಎನ್ನುವುದನ್ನು ತೀರ್ಮಾನಿಸುತ್ತಾರೆ. ಪ್ರತೀ ವಾರ್ಡಿನಲ್ಲೂ ದೇವಸ್ಥಾನ, ಕೆರೆ ಮತ್ತಿತರ ಪ್ರಮುಖ ತಾಣಗಳು ಸೇರಿದಂತೆ ಕನಿಷ್ಠ 10 ಕಡೆಗಳಿಂದ ಪವಿತ್ರ ಮೃತ್ತಿಕೆಯನ್ನು ಇದಕ್ಕಾಗಿ ಸಂಗ್ರಹಿಸಲಾಗುವುದು ಎಂದು ಸಚಿವರು ನುಡಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಡಿ ವಿ ಸದಾನಂದಗೌಡ, ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ನಂಜಾವಧೂತ ಸ್ವಾಮೀಜಿ, ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಸಚಿವರಾದ ಆರಗ ಜ್ಞಾನೇಂದ್ರ,  ಆರ್. ಅಶೋಕ್, ಕೆ.ಸುಧಾಕರ್, ಸುನೀಲ್‌ಕುಮಾರ್‍‌, ಗೋಪಾಲಯ್ಯ, ನಾರಾಯಣಗೌಡ, ಬೈರತಿ ಬಸವರಾಜು, ಮುನಿರತ್ನ, ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ತಲಕಾಡು ಚಿಕ್ಕರಂಗೇಗೌಡ, ಗಂಗಹನುಮಯ್ಯ, ಶೇಖ್‌ ಮಸ್ತಾನ್, ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

ವಿಧಾನಸೌಧದ ಸುತ್ತ ಜನಸಾಗರ

ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಹಿನ್ನೆಲೆಯಲ್ಲಿ ಶುಕ್ರವಾರ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ನಡೆದ ಪವಿತ್ರ ಮೃತ್ತಿಕೆ ಸಂಗ್ರಹಣಾ ಅಭಿಯಾನ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು. ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಲು ಏರ್ಪಡಿಸಿದ್ದ ಡೊಳ್ಳು ಕುಣಿತ, ಕಂಸಾಳೆ ನೃತ್ಯ, ಸೋಮನ ಕುಣಿತ, ತಾಳಮದ್ದಳೆ, ಗೊರವನ ಕುಣಿತ ಮತ್ತಿತರ ಜಾನಪದ ನೃತ್ಯ ಪ್ರದರ್ಶನಗಳನ್ನು ಎಲ್ಲರೂ ಕಣ್ತುಂಬಿಕೊಂಡರು. ಜತೆಗೆ ಎಲ್ಲರೂ ಕೆಂಪೇಗೌಡರ ಕೊಡುಗೆಗಳನ್ನು ಉತ್ಸಾಹದಿಂದ ಮೆಲುಕು ಹಾಕುತ್ತಿದ್ದುದು ಕಂಡುಬಂತು. ಕಾರ್ಯಕ್ರಮಕ್ಕೆ ಉತ್ಸಾಹದಿಂದ ಆಗಮಿಸಿದ್ದ ಜನರನ್ನು ಸಚಿವ ಅಶ್ವತ್ಥನಾರಾಯಣ ಅವರು ಕೈಕುಲುಕಿ ಬರ ಮಾಡಿಕೊಳ್ಳುತ್ತಿದ್ದುದು ಎದ್ದು ಕಾಣುತ್ತಿತ್ತು.

ಸಚಿವ ಅಶ್ವತ್ಥನಾರಾಯಣರ ಗುಣಗಾನ ಮಾಡಿದ ಸಿಎಂ ಬೊಮ್ಮಾಯಿ, ಬಿಎಸ್‌. ವೈ, ಡಿವಿಎಸ್‌

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಸಂಸದ ಡಿ.ವಿ.ಸದಾನಂದ ಗೌಡ ಅವರು ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮತ್ತು ಥೀಮ್‌ ಪಾರ್ಕ್ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ ಗುಣಗಾನ ಮಾಡಿ, ಮೆಚ್ಚುಗೆ ಸೂಚಿಸಿದರು.

ಬೊಮ್ಮಾಯಿ ತಮ್ಮ ಭಾಷಣದಲ್ಲಿ “ಈ ಯೋಜನೆಯ ರೂಪುರೇಷೆ, ವಿನ್ಯಾಸ, ಪ್ರಗತಿ ಎಲ್ಲವನ್ನೂ ಹೊಣೆಗಾರಿಕೆಯಿಂದ ನಿರ್ವಹಿಸಿದ ಕೀರ್ತಿ ಅಶ್ವತ್ಥನಾರಾಯಣ ಅವರಿಗೆ ಸಲ್ಲುತ್ತದೆ. ಅವರು ಇದಕ್ಕಾಗಿ ಹಗಲಿರುಳೂ ಕೆಲಸ ಮಾಡಿದ್ದಾರೆ” ಎಂದು ಮೆಚ್ವುಗೆ  ವ್ಯಕ್ತಪಡಿಸಿದರು.

ಯಡಿಯೂರಪ್ಪನವರು ಮಾತನಾಡಿ, “ನಾನು ಮೂರು ವರ್ಷಗಳ ಹಿಂದೆ ಮುಖ್ಯಮಂತ್ರಿಯಾದ ಕೂಡಲೇ ಅಶ್ವತ್ಥನಾರಾಯಣ ಅವರು ಕೆಂಪೇಗೌಡರಿಗೆ ಸೂಕ್ತ ಗೌರವ ಸಲ್ಲಿಸುವ ಇಂಥದ್ದೊಂದು ಯೋಜನೆಯನ್ನು (ಪ್ರತಿಮೆ ಸ್ಥಾಪನೆ) ಪ್ರಸ್ತಾಪಿಸಿದರು. ಅವರ ಈ ಉತ್ಸಾಹ, ಕಲ್ಪನೆಗಳು ಮತ್ತು ಪರಿಶ್ರಮಗಳು ಮೇಲ್ಪಂಕ್ತಿ ಹಾಕಿಕೊಟ್ಟಿವೆ” ಎಂದರು.

ಸದಾನಂದ ಗೌಡರು ತಮ್ಮ ಮಾತಿನಲ್ಲಿ “ಈ ಯೋಜನೆಯು ಅಶ್ವತ್ಥನಾರಾಯಣ ಅವರ ಕನಸಿನ ಕೂಸಾಗಿದೆ. ಇದಕ್ಕಾಗಿ ಅವರು ಹಗಲಿರುಳೂ ಶ್ರಮಿಸಿದ್ದಾರೆ” ಎಂದರು.

ರಾಮ್‌ ಸುತರ್ ಕೈಯಲ್ಲಿ ಅರಳಿರುವ ಪ್ರತಿಮೆ

ವಿಮಾನ ನಿಲ್ದಾಣದಲ್ಲಿ ನ.11ರಂದು ಲೋಕಾರ್ಪಣೆ ಆಗಲಿರುವ ಕೆಂಪೇಗೌಡರ 108 ಅಡಿ ಪ್ರತಿಮೆಯನ್ನು ಸೃಷ್ಟಿಸಿರುವವರು ವಿಖ್ಯಾತ ಶಿಲ್ಪಿಗಳಾದ ನೋಯಿಡಾದ ರಾಮ್‌ ಸುತರ್. ಗುಜರಾತಿನಲ್ಲಿರುವ ಪಟೇಲ್‌ ಪ್ರತಿಮೆಯೂ ಸೇರಿದಂತೆ ವಿಖ್ಯಾತ ಪ್ರತಿಮೆಗಳನ್ನು ಅರಳಿಸಿರುವ ಸಾಧಕರಿವರು. ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಉತ್ಕೃಷ್ಟ ದರ್ಜೆಯ ಕಬ್ಬಿಣ ಮತ್ತು ಉಕ್ಕನ್ನು ಬಳಸಿದ್ದು, ಇದಕ್ಕಾಗಿ 84 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದಲ್ಲದೆ, ಪ್ರತಿಮೆಯ ಪರಿಸರದಲ್ಲಿ 23 ಎಕರೆ ವಿಶಾಲವಾದ ‘ಕೆಂಪೇಗೌಡ ಥೀಮ್‌ ಪಾರ್ಕ್’ ಕೂಡ ಅಭಿವೃದ್ಧಿ ಪಡಿಸಲಾಗುತ್ತದೆ. ರಾಜ್ಯದೆಲ್ಲೆಡೆಯಿಂದ ಸಂಗ್ರಹಿಸಲಾಗುವ ಪವಿತ್ರ ಮೃತ್ತಿಕೆಯನ್ನು ಈ ಥೀಮ್‌ ಪಾರ್ಕ್ ಮತ್ತು ಕೆಂಪೇಗೌಡರ ಪ್ರತಿಮೆಯ ನಾಲ್ಕು ಗೋಪುರಗಳಿಗೆ ಬಳಸಿಕೊಳ್ಳಲಾಗುವುದು ಎಂದು ಯೋಜನೆಯ ಅನುಷ್ಠಾನದ ಉಸ್ತುವಾರಿಗಳಾಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ವಿವರಿಸಿದ್ದಾರೆ.

ಪ್ರತಿಮೆಗೆ‌ ಹೆಸರಿಟ್ಟಿದ್ದು ಸಚಿವರೇ…

ಕೆಂಪೇಗೌಡರ ಪ್ರತಿಮೆಗೆ ‘ಪ್ರಗತಿಯ ಪ್ರತಿಮೆ’ (statue of prosperity) ಎಂದು ಹೆಸರು ಇಟ್ಟಿದ್ದೇ ಸಚಿವ ಡಾ.ಅಶ್ವತ್ಥನಾರಾಯಣ. ಪ್ರತಿಮೆ‌ಗೆ‌ ಏನು ಹೆಸರು ಇಡಬೇಕು ‌ಎನ್ನುವುದರ‌ ಬಗ್ಗೆ ಚರ್ಚಿಸಲು ಸಭೆ ಕರೆದಾಗ ಸಚಿವರೇ‌ ಈ ಹೆಸರು ಇಟ್ಟರೆ ಹೇಗೆ ಎಂದು ಕೇಳಿದರು.

‘ಏಕತಾ ಪ್ರತಿಮೆ’, ‘ಸ್ಟ್ಯಾಚು ಆಫ್ ಲಿಬರ್ಟಿ’ ಹೀಗೆ‌ ಜಗತ್ತಿನ ಗಮನ ಸೆಳೆದಿರುವ ಪ್ರತಿಮೆಗಳ ಸಾಲಿಗೆ ಪ್ರಗತಿಯ ಪ್ರತಿಮೆ ಕೂಡ ಸೇರುತ್ತಿದೆ. ನಗರ ನಿರ್ಮಾತೃಗಳ ಇಷ್ಟು ಎತ್ತರದ ಪ್ರತಿಮೆ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿ ಇದಕ್ಕೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಲಭಿಸಿದೆ.

Key words: Nadaprabhu Kempegowda-statue–nov 11-CM- Basavaraj Bommai