ಬಿಜೆಪಿಯ ಸುಳ್ಳಿನ ಸಂಸ್ಕಾರಕ್ಕೆ ಸೋಲು: 2024ರಲ್ಲೂ ಗೆಲ್ತೀವಿ-ಬೆಲೆ ಇಳಿಸ್ತೀವಿ – ಸಿಎಂ ಸಿದ್ಧರಾಮಯ್ಯ ವಿಶ್ವಾಸ

kannada t-shirts

ಮೈಸೂರು, ಜೂನ್ 10,2023(www.justkannada.in): ಭ್ರಷ್ಟಚಾರ, ದುರಾಡಳಿತ, ಅಭಿವೃದ್ಧಿಹೀನ ಮತ್ತು ಸಮಾಜವನ್ನು ಒಡೆಯುವ ದುಷ್ಟ ರಾಜಕಾರಣವನ್ನು ರಾಜ್ಯದ ಜನತೆ ಸೋಲಿಸಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ವರುಣಾ ವಿಧಾನಸಭಾ ಕ್ಷೇತ್ರದ ಸುತ್ತೂರಿನಲ್ಲಿ ನಡೆದ ಬೃಹತ್ ಕೃತಜ್ಞತಾ ಸಮರ್ಪಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ಧರಾಮಯ್ಯ ಹೇಳಿದ್ದಿಷ್ಟು.

ಇದು ನನ್ನ ಕೊನೆ ಚುನಾವಣೆ. ಆದರೆ ನಾನು ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿದ್ದು ಜನರ ಸೇವೆಯನ್ನು ಮುಂದುವರೆಸುತ್ತೇನೆ.  2013 ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ನುಡಿದಂತೆ ನಡೆದು ಸಮಾಜದ ಎಲ್ಲಾ ಜಾತಿ, ಧರ್ಮ ಮತ್ತು ಎಲ್ಲಾ ವರ್ಗಗಳ ಪರವಾಗಿ ಕಲ್ಯಾಣ ಕಾರ್ಯಕ್ರಮ ರೂಪಿಸಿದ್ದೆ. ಈ ಬಾರಿ ಇನ್ನಷ್ಟು ಪರಿಣಾಮಕಾರಿಯಾದ ಕಲ್ಯಾಣ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ನಾಡಿಗೆ ನೀಡಲಿದೆ.

ಬಸವಾದಿ ಶರಣರು ನುಡಿದಂತೆ ನಡೆದಿದ್ದರು. ಅದನ್ನೇ ನಾನು ಮಾದರಿಯನ್ನಾಗಿ ಇಟ್ಟುಕೊಂಡು ನಾನು ಮೊದಲ ಬಾರಿ ಬಸವ ಜಯಂತಿ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ನುಡಿದಂತೆ ನಡೆದೆ ಎಂದರು.

ಮುಖ್ಯಮಂತ್ರಿ ಕುರ್ಚಿ ಸುಖದ ಸುಪ್ಪತ್ತಿಗೆ ಅಲ್ಲ. ಜನರ ಬದುಕನ್ನು ಸುಧಾರಿಸಲು ಸಿಗುವ ಅವಕಾಶ. ಪ್ರಧಾನಿ ನರೇಂದ್ರ ಮೋದಿಯವರು , ಕಾಂಗ್ರೆಸ್ ಗ್ಯಾರಂಟಿಗಳು ಜಾರಿ ಆಗುವುದಿಲ್ಲ. ರಾಜ್ಯ ದಿವಾಳಿ ಆಗ್ತದೆ ಎಂದಿದ್ದರು. ನಾವು ಈಗ ಐದನ್ನೂ ಜಾರಿ ಮಾಡಿದ್ದೇವೆ ಎಂದರು.

ಈ ಭಾರಿ ನಾನು ಚುನಾವಣೆಗೆ ನಿಂತಾಗ ನೀವೆಲ್ಲರೂ ಹಗಲಿರುಳು ಹೋರಾಟ ಮಾಡಿದ್ದೀರಾ. ನನಗೆ ಒಂದು ಐತಿಹಾಸಿಕವಾದ ಜಯ ತಂದುಕೊಟ್ಟಿದ್ದೀರಾ. ಅದಕ್ಕೋಸ್ಕರ ವರುಣ ಕ್ಷೇತ್ರದ ಎಲ್ಲಾ ಮತದಾರರಿಗೆ, ಕಾರ್ಯಕರ್ತರಿಗೆ ನನ್ನ ಪರವಾಗಿ ನಮ್ಮ ಬ್ಲಾಕ್ ಸಮಿತಿಯ ಅಧ್ಯಕ್ಷರ ಪರವಾಗಿ ಯತೀಂದ್ರ ಸಿದ್ದರಾಮಯ್ಯ ಪರವಾಗಿ ಕೋಟಿ ಕೋಟಿ ನಮಸ್ಕಾರ ಸಲ್ಲಿಸುತ್ತೇನೆ. ಈ ಜಯ ನನ್ನದಲ್ಲ ನಿಮ್ಮೆಲ್ಲರ ಜಯ. ನಾನು ಕೆಪಿಸಿಸಿ ಅಧ್ಯಕ್ಷರ ಕಛೇರಿಯಲ್ಲಿ ಹೇಳಿದ್ದೇನೆ. ಈ ಜಯ ರಾಜ್ಯದ ಜನತೆಯ ಜಯ. ಕಾಂಗ್ರೆಸ್ ಪಕ್ಷ 135+136 ಸ್ಥಾನ ಗೆಲ್ಲಬೇಕಾದ್ರೆ ಕರ್ನಾಟಕದ ಮತದಾರರು ಕಾಂಗ್ರೆಸ್ ಪರವಾಗಿ ತೀರ್ಪು ಕೊಟ್ಟಿದ್ದ ಕಾರಣ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಕರ್ನಾಟಕದ ಜನ ಬಿಜೆಪಿ ಸರ್ಕಾರದಿಂದ ಬೇಸತ್ತಿದ್ರು. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಬೆಲೆ ಏರಿಕೆ ಗಗನಕ್ಕೇರಿದೆ. ಯುವಕ ಯುವತಿಯರು ನೊಂದಿದ್ದಾರೆ. ದುರಾಡಳಿತದಿಂದ ಜನರು ಬದಲಾವಣೆ ಬಯಸಿದ್ರು.ಕಾಂಗ್ರೆಸ್ ಈ ಭಾರಿ ಅಧಿಕಾರಕ್ಕೆ ಬರುವ ಮಾತು ಹೇಳಿದ್ದೇ. ಹೌದು ಹುಲಿಯ ಎಂದ ಜನರು. ಸರ್ವೆಯಲ್ಲಿ 108,105 ಸ್ಥಾನ ಗೆಲ್ಲುತ್ತೇ ಅಂಥ ಹೇಳಿದ್ರು. ಆದ್ರೆ ನಾನು‌ 135 ಕ್ಕು ಹೆಚ್ಚು ಸ್ಥಾನ ಗೆಲ್ಲುತ್ತೆ ಅಂಥ ಹೇಳಿದೆ. ಜನರ ನಾಡಿ ಮಿಡಿತ ಅರ್ಥ ಮಾಡಿಕೊಳ್ಳುವ ಶಕ್ತಿ ನನಗಿದೆ. ಜನರ ಭಾವನೆ ನೋಡಿದಾಗ 135 ರಿಂದ 150 ಸ್ಥಾನ ಗೆಲ್ಲುವ ಭರವಸೆ ಇತ್ತು. ರಾಜ್ಯದ ಜನರು 136 ಸ್ಥಾನ ಗೆಲ್ಲಿಸಿಕೊಟ್ಟಿದ್ದಾರೆ. ಇದು ಐತಿಹಾಸಿಕ ನಿರ್ಣಯ ಎಂದು ಸಿದ‍್ಧರಾಮಯ್ಯ ಹೇಳಿದರು.

ವರುಣ ಕ್ಷೇತ್ರ ಆದ ಮೇಲೆ 2008, 2013 ರಲ್ಲಿ ವರುಣ ಆಯ್ಕೆ ಮಾಡಿಕೊಂಡಿದ್ದೆ. 2008, 2013 ರಲ್ಲಿ ದೊಡ್ಡ ಮಟ್ಟದಲ್ಲಿ  ಗೆಲ್ಲಿಸಿದ್ರು. ಈ ಭಾರಿ‌ 50 ಸಾವಿರ ಮತಗಳಿಂದ ಗೆಲ್ಲಿಸಿದ್ದೀರಿ. ಆದ್ರೆ ಯತೀಂದ್ರನಷ್ಟು ಹೆಚ್ಚು ಬಹುಮತಗಳಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಭಾರಿ 50 ಸಾವಿರ ಮತಗಳಿಂದ ಗೆದಿದ್ದೇನೆ ಇದೇ ಅತ್ಯಂತ ದೊಡ್ಡ ಮತ. ಕೊನೆ ಚುನಾವಣೆ ಇದು. ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ. ಇಲ್ಲ ನಿಲ್ಲಲ್ಲೇಬೇಕು ಎಂದು ಜನರು ಒತ್ತಾಯಿಸಿದರು. ಆದರೆ ನಾನು ಚುನಾವಣೆಗೆ ನಿಲ್ಲಲ್ಲ. ಕೊನೆ ಉಸಿರು ಇರೊವರೆಗೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದರು.

ಎರಡನೇ ಭಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ. ಇವತ್ತು ಸಿಎಂ ಸ್ಥಾನ ಸಿಕ್ಕಿರುವುದಕ್ಕೆ ನಿಮ್ಮೆಲ್ಲರ ಸಹಕಾರ ಕಾರಣ. ನನಗೆ ಜಯ ಸಿಕ್ಕಿದ್ರೆ ಅದು ನಿಮಗೆ ಸಿಕ್ಕಿದೆ ಅಂದುಕೊಳ್ಳಬೇಕು. ನಾವು ನುಡಿದಂತೆ ನಡೆದಿದ್ದೇವೆ, ಆದ್ರೆ ಬಿಜೆಪಿ ವಚನ ಭ್ರಷ್ಟರಾಗಿ ನಾಡಿನ ಜನತೆಗೆ ದ್ರೋಹ ಮಾಡಿದ್ದಾರೆ. ಎಲ್ಲಾ ಭರವಸೆ ಈಡೇರಿಸಿದ್ದೇವೆ. ಬಸವಾದಿ ಶರಣರು ನುಡಿದಂತೆ ನಡೆದ್ರು. ಅದರಂತೆ ನಾವು ನಡೆಯುತ್ತಿದ್ದೇವೆ. 5 ವರ್ಷಗಳ ಕಾಲ ಆಡಳಿತ ನಡೆಸುವ ಅವಕಾಶ ಸಿಕ್ಕಿತ್ತು. ದೇವರಾಜ ಅರಸು ನಂತರ ನಿಮ್ಮ ಸಿದ್ದರಾಮಯ್ಯಗೆ ಈ ಅವಕಾಶ ಸಿಕ್ಕಿತ್ತು.  ಹೀಗಾಗಿ ಸಿದ್ದರಾಮಯ್ಯ ಸಿಎಂ ಆಗಬೇಕು ಅಂಥಾ ಬಯಸಿ ಮತ್ತೆ ಅಧಿಕಾರ ಕೊಟ್ಟಿದ್ದಾರೆ  ಇದು ಸುಪ್ಪತ್ತಿಗೆಯ ಕುರ್ಚಿಯಲ್ಲ. ಜನಸೇವೆ ಮಾಡುವ ಕುರ್ಚಿ. ಗ್ಯಾರೆಂಟಿ‌ ಯೋಜನೆಗೆ ಖರ್ಚಾಗುವ ಹಣ 59 ಸಾವಿರ ಕೋಟಿ. ಉಳಿದ ಅವಧಿಗೆ ಬೇಕಾಗಿರುವ ಹಣ 41ಸಾವಿರಕೋಟಿ ಹಣ. ಮೋದಿ ಗ್ಯಾರೆಂಟಿ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ. ರಾಜ್ಯ ದಿವಾಳಿ ಆಗುತ್ತೆ ಅಂದ್ರು. ಗ್ಯಾರೆಂಟಿಗಳನ್ನ ಈಡೇರಿಸುವ ದೃಷ್ಟಿಯಿಂದ ನಾವು ಕೈ ಜೋಡಿಸುವ ಮಾತನ್ನ ಆಡಬೇಕಿತ್ತು. ಬಿಜೆಪಿ ಸಹ ಅದೇ ರೀತಿ ಮಾತನಾಡಿತ್ತು. 13ನೇ ತಾರೀಖು ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಪ್ರಮಾನ ವಚನ ಸ್ವೀಕರಿಸಿದ್ದೇವೆ. 20 ದಿನಗಳಲ್ಲಿ ಎರಡನೇ ಕ್ಯಾಬಿನೆಟ್ ನಲ್ಲಿ ‌5 ಗ್ಯಾರೆಂಟಿ ಈಡೇರಿಸಿದ್ದೇವೆ.  5 ಗ್ಯಾರೆಂಟಿ ಇಡೇರಿಸೊದು ಖಚಿತ ಎಂದು ಸಿದ್ಧರಾಮಯ್ಯ ತಿಳಿಸಿದರು.

ಒಂದು ವರ್ಷದಲ್ಲಿ‌ 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು.

ಎಲ್ಲರಿಗೂ 200 ಯೂನಿಟ್ ಕೊಡಿ ಅಂತಿದ್ದಾರೆ. ಯಾರು 190,180,70 ಯೂನಿಟ್ ಬಳಸುತ್ತಾರೆ ಅವರಿಗೆ ಫ್ರೀ. ಅದಕ್ಕೆ ಒಂದು ವರ್ಷದ ಆವೇರೆಜ್ ತೆಗೆದುಕೊಳ್ಳಲು ಹೇಳಿದ್ದೇನೆ. ಅದರಲ್ಲಿ 10% ಎಕ್ಟ್ರಾ ಕೊಡುತ್ತೇವೆ. ಒಂದು ವರ್ಷದಲ್ಲಿ‌ 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು. ಇದು ದುರುಪಯೋಗ ಅಲ್ವಾ..? ಯಾರು 200 ಯೂನಿಟ್ ಬಳಸುತ್ತಾರೆ ಅವರೆಲ್ಲರಿಗೂ ಫ್ರೀ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಗೃಹ ಜ್ಯೋತಿ ಕರ್ನಾಟಕದಲ್ಲಿ ಸುಮಾರು‌‌ 1 ಕೋಟಿ 28 ಲಕ್ಷ ಕುಟುಂಬದ ಇದೆ. 1 ಕೋಟಿ 28 ಲಕ್ಷ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳಿಗೆ 2 ಸಾವಿರ ಕೊಡುತ್ತೇವೆ. ಅತ್ತೆ ಯಜಮಾನಿಯಾದ್ರೆ ಅತ್ತೆಗೆ ಕೊಡುತ್ತೇವೆ‌. ಸೊಸೆ ಯಜಮಾನಿಯಾದ್ರೆ ಸೊಸೆಗೆ ಕೊಡುತ್ತೇವೆ‌. ಅದರಲ್ಲಿ ಐಟಿ, ಜಿಎಸ್ ಟಿ ಟ್ಯಾಕ್ಸ್ ನೊಂದಣಿ ಮಾಡಿಸಿರುವವರಿಗೆ ಎರೆಡು ಸಾವಿರ ಇಲ್ಲ. ಒಲ್ಡ್ ಎಜ್ ಪೆನ್ಷನ್ ತೆಗದುಕೊಳ್ಳೊರೆಗೆ, ಅಂಗವಿಕಲಿರಿಗೆ  ಕೊಡುತ್ತೇವೆ ಎಂದು ಹೇಳಿದರು.

ಜುಲೈ 1 ರಿಂದ ಅನ್ನಬಾಗ್ಯ ಯೋಜನೆ ಜಾರಿ ಮಾಡಲಾಗುತ್ತದೆ.  ರಸಗೊಬ್ಬರದ ರೇಟ್ ನಾವು ನಿಗದಿ ಮಾಡಲ್ಲ. ಮೋದಿ ಸರ್ಕಾರ ಮಾಡೊದು. ಮುಂದಿನ ಚುನಾವಣೆಯಲ್ಲಿ ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ನಾವ್ ಮುಂದಿನ ಭಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಬರ್ತಿವಿ. ಆಗ ಎಲ್ಲಾ ಬೆಲೆಗಳನ್ನ ಕಡಿಮೆ ಮಾಡುತ್ತೇವೆ ಎಂದು ಕೃತಜ್ಞತೆ ಸಭೆಯಲ್ಲಿ ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಜುಲೈ 1 ರಿಂದ ಎಲ್ಲರಿಗೂ 10 ಕೆಜಿ ಅಕ್ಕಿ ಫ್ರೀ ನೀಡುತ್ತೇವೆ. ನಾಳೆ ಮಧ್ಯಾಹ್ನ 1 ಗಂಟೆಯಿಂದ ಬಸ್ ಫ್ರೀ. ನೋಡಮ್ಮ ನೀನು ಎಲ್ಲಿಗೆ ಬೇಕಾದ್ರು ಹೋಗಿ. ತಿರುಪತಿಗೆ ಹೋಗುತ್ತೇವೆ ಅಂದ್ರೆ ಇಲ್ಲ. ಬೀದರ್ ನಿಂದ ಬೆಳಗಾವಿಗೆ ಎಲ್ಲಿಗೆ ಬೇಕಾದ್ರ ಹೋಗಿ ಫ್ರೀ. ಶ್ರೀಮಂತರ ಮನೆ ಇರಬಹುದು, ನನ್ನ ಹೆಂಡತಿನು ಬಸ್ ನಲ್ಲಿ ಹೋದ್ರೆ ಫ್ರೀ ಎಂದು ಸಿದ್ಧರಮಯ್ಯ ಹೇಳಿದರು.

5 ಗ್ಯಾರೆಂಟಿ ಜಾರಿಯ ಬಗ್ಗೆ ಈಗಾಗಲೇ ತೀರ್ಮಾನ ಮಾಡಿದ್ದೇವೆ. ಬಿಜೆಪಿ ಹೇಳಲು ಏನು ಇಲ್ಲ. ಪಾರ್ಲಿಮೆಂಟ್ ನಲ್ಲಿ ಸೋಲುವ ಬೀತಿಯಲ್ಲಿ ಬಿಜೆಪಿ ಇದೆ. ಲೋಕಸಭೆ ಚುನಾವಣೆಯಲ್ಲಿ  28 ರಲ್ಲಿ‌ 20 ಸ್ಥಾನ ಗೆಲ್ಲುತ್ತೇವೆ . ಉಡುಪಿಯಲ್ಲಿ ಮಾತ್ರ ನಾವು ಒಂದು ಸ್ಥಾನ ಗೆದ್ದಿಲ್ಲ. ಆದ್ರೆ ಬಿಜೆಪಿ 9 ಜಿಲ್ಲೆಗಳಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆದ್ದಿಲ್ಲ. ಅದೇ ನಮಗೂ ಅವರಿಗೆ ಇರುವ ವ್ಯತ್ಯಾಸ. ಕರ್ನಾಟಕದಲ್ಲಿ ಪ್ರಚಾರ ಆರಂಭವಾಗಿದ್ದು ಭಾರತ್ ಜೋಡೊ ಯಾತ್ರೆಯ ಮೂಲಕ. ಇದರಿಂದ ಕಾರ್ಯಕರ್ತರಿಗೆ ಉಮ್ಮಸ್ಸು,ಪ್ರೋತ್ಸಾಹ ಹೆಚ್ಚಾಯ್ತು. ಡಿಕೆ ಶಿವಕುಮಾರ್ ಎಷ್ಟು ಶ್ರಮ ಹಾಕಿದ್ಧಾರೋ ಅಷ್ಟೇ ಶ್ರಮ ಕಾರ್ಯಕರ್ತರು ಹಾಕಿದ್ದಾರೆ. ಹೀಗಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.ಕಾರ್ಯಕರ್ತರಿಗೆ ಹೇ ಕುಳಿತುಕೊಳ್ಳಿ ಎಂದು ಗದರಿದ ಸಿಎಂ.

ನಾನು ಮೂರೇ ದಿನ ಪ್ರಚಾರಕ್ಕೆ ಬಂದಿದ್ದು. ಯತೀಂದ್ರ ಸಿದ್ದರಾಮಯ್ಯ ಅವರು ನನಗೆ ಸೀಟ್ ಬಿಟ್ಟು ಕೊಟ್ಟು ಅವರೇ ಅಭ್ಯರ್ಥಿಯಾಗಿದ್ರು ಇಷ್ಟು ಶ್ರಮ ಹಾಕ್ತಿರಲಿಲ್ಲ. ಹೀಗಾಗಿ ಅವರಿಗೆ ವಿಶೇಷವಾಗಿ ಧನ್ಯವಾದ ಸಲ್ಲಿಸುತ್ತೇನೆ. ಸಿಎಂ ಆಗಬೇಕಾದ್ರೆ ವರುಣ ಕ್ಷೇತ್ರದ ಜನರು ನೇರವಾಗಿ ಕಾರಣ. ಅಧಿಕಾರ ಸಿಎಂ ಕುರ್ಚಿ ಸಿಕ್ಕಿದ್ರೆ ನಿವೇ ಕಾರಣ ಎಂದು ಸಿದ್ದರಾಮಯ್ಯ. ಹೇಳಿದರು.

ಕಾಂಗ್ರೆಸ್ ಘೋಷಿಸಿದ ಬಡವರ-ಮಧ್ಯಮ ವರ್ಗದವರ ಪರವಾದ ಯೋಜನೆ ಘೋಷಿಸಿದಾಗ ಪ್ರಧಾನ ಮಂತ್ರಿ ಮೋದಿಯವರು ಜನರಿಗೆ ಅನುಕೂಲ ಮಾಡುವ ನಮ್ಮ ಯೋಜನೆಗೆ ತಮ್ಮ ಸಹಕಾರ ನೀಡಬೇಕಿತ್ತು. ಆದರೆ ಮೋದಿ ಅವರಿಗೆ ಬಡವರ-ಮಧ್ಯಮ ವರ್ಗದವರ ಪ್ರಗತಿ, ಅಭಿವೃದ್ಧಿ ಬೇಕಾಗಿಲ್ಲ . ಅದಕ್ಕೇ ಬಿಜೆಪಿಯವರು ಜನರಲ್ಲಿ ತಮ್ಮ ಸಂಪ್ರದಾಯದಂತೆ ಸುಳ್ಳುಗಳನ್ನು ಎರಚಾಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ. ಜನರಿಗೆ ಅನುಕೂಲ ಆಗುವುದು ಅವರಿಗೆ ಬೇಕಾಗಿಲ್ಲ ಎಂದು ಟೀಕಿಸಿದರು.

2024 ರಲ್ಲೂ ಗೆಲ್ತೀವಿ-ಬೆಲೆ ಇಳಿಸ್ತೀವಿ

“ಗಗನಕ್ಕೆ ಏರಿರುವ ರಸಗೊಬ್ಬರ ಬೆಲೆಯನ್ನು ಕಡಿಮೆ ಮಾಡಿ” ಎಂದು ಸಭೆಯಲ್ಲಿದ್ದ ರೈತರು ಕೂಗಿದರು. ಇದಕ್ಕೆ ಸ್ಪಂದಿಸಿದ ಸಿದ್ಧರಾಮಯ್ಯ, “ರಸಗೊಬ್ಬರ ಬೆಲೆ ಏರಿಸಿರುವುದು ಪ್ರಧಾನಿ ಮೋದಿ ಸರ್ಕಾರ. ಬೆಲೆ ಇಳಿಸಬೇಕಾಗಿರುವುದೂ ಮೋದಿ ಸರ್ಕಸರವೇ. ಆದರೆ ಅವರು ಬೆಲೆ ಇಳಿಸಲ್ಲ. ನಾವು 2024 ರ ಲೋಕಸಭಾ ಚುನಾವಣೆಯಲ್ಲೂ ಗೆಲ್ತೀವಿ. ಕೇಂದ್ರದಲ್ಲೂ ಅಧಿಕಾರಕ್ಕೆ ಬರ್ತೀವಿ. ಆಗ ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲ್, ರಸಗೊಬ್ಬರ ಬೆಲೆಗಳನ್ನು ಇಳಿಸುತ್ತೇವೆ ಎಂದರು. ನೆರೆದಿದ್ದ ಜನ, ನೀವು ಪ್ರಧಾನಿ ಆಗಬೇಕು ಎಂದು ಮುಗಿಲು ಮುಟ್ಟುವಂತೆ ಕೂಗಿದರು.

ಚಾನಲ್ ಗಳ ಚರ್ಚೆಗೆ ತಲೆ ಕೆಡಿಸಿಕೊಳ್ಳಬೇಡಿ, ಅರ್ಜಿ ಹಾಕಿ- ಅನುಕೂಲ ಪಡೆಯಿರಿ

ಬಡವರ-ಮಧ್ಯಮವರ್ಗದವರ ಸಂಕಷ್ಟ ಕಡಿಮೆ ಮಾಡಲು ನಾವು ಜಾರಿಗೆ ತಂದ ಯೋಜನೆಗಳನ್ನು, “ಅವರಿಗಾ-ಇವರಿಗಾ” ಎನ್ನುವ ಗೊಂದಲ ಸೃಷ್ಡಿಸುತ್ತಾರೆ. ನೀವು ಗೊಂದಲಕ್ಕೆ ಒಳಗಾಗಬೇಡಿ. ಯೋಜನೆಗಳ ಅನುಕೂಲ ಪಡೆಯಿರಿ ಎಂದರು.

ವೇದಿಕೆಯಲ್ಲಿ ಮಾಜಿ ಶಾಸಕ ಯತೀಂದ್ರ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಮಾಜಿ ಮಂತ್ರಿಗಳಾದ ಪುಟ್ಟರಂಗಶೆಟ್ಟಿ, ಶಾಸಕರಾದ ಕೃಷ್ಣಮೂರ್ತಿ, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯ, ಮಾಜಿ ಲೋಕಸಭಾ ಸದಸ್ಯರಾದ ಶಿವಣ್ಣ, ಶಾಸಕರುಗಳಾದ ಗುಂಡ್ಲುಪೇಟೆ  ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು, ರವಿ ಶಂಕರ್,  ಹರೀಶ್ ಗೌಡ, ಪರಿಷತ್ ಸದಸ್ಯ ನಾಗರಾಜ್ ಯಾದವ್ ಸೇರಿದಂತೆ ಸಾಕಷ್ಟು ಮುಖಂಡರು ಉಪಸ್ಥಿತರಿದ್ದರು.

Key words: mysore-varuna- CM –Siddaramaiah-Thanks-givin-g meeting

website developers in mysore