ಜಾತಿ ಗಣತಿ ವರದಿ ಜಾರಿಗೆ  ಆಗ್ರಹಿಸಿರುವ ಸಿದ್ಧರಾಮಯ್ಯ ವಿರುದ್ಧ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ವಾಗ್ದಾಳಿ.

ಮೈಸೂರು,ಅಕ್ಟೋಬರ್,3,2021(www.justkannada.in):  ಜಾತಿ ಗಣತಿ ವರದಿ ಜಾರಿಗೆ  ಒತ್ತಾಯಿಸಿರುವ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎ ನಾರಾಯಣಸ್ವಾಮಿ  ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಜಾತಿ ಗಣತಿ ವರದಿಯನ್ನು ಏಕೆ ಅನುಷ್ಠಾನಕ್ಕೆ ತರಲಿಲ್ಲ.? ಸಚಿವ ಸಂಪುಟದ ಮುಂದೆ ಏಕೆ ವಿಚಾರವನ್ನು ಪ್ರಸ್ತಾಪಿಸಲಿಲ್ಲ.? ವರದಿ ಸಿದ್ದತೆ ಕುರಿತಂತೆ ಏಕೆ ಜಾರಿಗೊಳಿಸಲಿಲ್ಲ.? ಎಂದು ಪ್ರಶ್ನಿಸಿದರು.

ಜಾತಿಗಣತಿ ಬಹಿರಂಗಪಡಿಸದಂತೆ ನಾವೆಲ್ಲೂ ಸ್ಟೇಟ್‌ಮೆಂಟ್ ಅಫಿಡವಿಟ್ ಸಲ್ಲಿಸಿಲ್ಲ.

ಜಾತಿಗಣತಿ ಬಹಿರಂಗಪಡಿಸದಂತೆ ನಾವೆಲ್ಲೂ ಸ್ಟೇಟ್‌ಮೆಂಟ್ ಅಫಿಡವಿಟ್ ಸಲ್ಲಿಸಿಲ್ಲ. ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಸಮಿತಿ ರಚಿಸಿದ್ದೇವೆ. ಶಿಕ್ಷಣ, ಜಾತಿ, ಆರ್ಥಿಕತೆ ಬಗ್ಗೆ ಗಣತಿ ಮಾಡುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಕೆ‌ ಮಾಡಿದ್ದೇವೆ. ಆದ್ರೆ ಜಾತಿಗಣತಿಯನ್ನ ಬಹಿರಂಗಪಡಿಸಬೇಕೆ ಬೇಡವೆ ಎನ್ನುವ ಬಗ್ಗೆ ಸಮಿತಿಯಲ್ಲಿ ವಿಮರ್ಶೆ ಮಾಡಲಾಗುತ್ತದೆ. ಮಹಾರಾಷ್ಟ್ರ ಸರ್ಕಾರ ಮರಾಠಿಗರಿಗೆ 14% ಮೀಸಲಾತಿ ಕೊಡ್ತೀವಿ ಘೋಷಣೆ ಮಾಡಿತ್ತು. ವಿಧಾನಸಭೆಯಲ್ಲಿ ಅನುಮೋಧನೆ ನೀಡಿದೆ.  50% ಮೀಸಲಾತಿ ಮೀರಬಾರದು ಅಂತ ನಿಯಮ ಇದೆ. ಆದ್ರೆ ತಮಿಳುನಾಡಿನಲ್ಲಿ ವಿಶೇಷ ಅನುಮತಿ ಪಡೆದು ‌69% ಮೀಸಲಾತಿ ಕೊಟ್ಟಿದ್ದಾರೆ. ಈ ಗೊಂದಲಗಳ ಬಗ್ಗೆ ಸುಪ್ರಿಂಗೆ ಪ್ರಮಾಣ ಪತ್ರ ಸಲ್ಲಿಕೆ ಮಾಡಲಾಗುತ್ತದೆ ಎಂದರು.

ರಾಷ್ಟ್ರದ ವಿವಿಧೆಡೆಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಆರೋಪಕ್ಕೆ ತಿರುಗೇಟು ನೀಡಿದ ನೀಡಿದ ಕೇಂದ್ರ ಸಚಿವ ನಾರಾಯಣಸ್ವಾಮಿ, ಎಲ್ಲದಕ್ಕೂ ಪ್ರಧಾನಿಗಳು ಉತ್ತರಿಸುವ ಅಗತ್ಯವಿಲ್ಲ. ಐವತ್ತೇಳು ವರ್ಷ ಈ ದೇಶದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ನವರು ಏನು ಮಾಡಿದ್ದಾರೆ. ಪಂಜಾಬ್, ನಾಗಲ್ಯಾಂಡ್, ಜಮ್ಮು ಕಾಶ್ಮೀರ, ಚತ್ತೀಸ್ ಘಡದ ಸಮಸ್ಯೆಗಳನ್ನು ಬಗೆಹರಿಸಲು ಕಾಂಗ್ರೆಸ್ ನವರಿಗೆ ಸಾಧ್ಯವಗಿರಲಿಲ್ಲ. ಆದರೆ ನಮ್ಮ ಪ್ರಧಾನಿ ಆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂದು ಸಮಜಾಯಿಷಿ ನೀಡಿದರು.

ರಾಜ್ಯದಲ್ಲಿ ದಲಿತ ಸಿಎಂ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನಾರಾಯಣಸ್ವಾಮಿ, ಮೊದಲು ನಮ್ಮ ಸಮಾಜಕ್ಕೆ ಆ ಶಕ್ತಿ ಬರಬೇಕು. ಸ್ವಾಭಿಮಾನದ ಸ್ವಾವಲಂಬಿ ಆಗದೆ ಚರ್ಚೆ ಮಾಡುವ ಅಗತ್ಯವಿಲ್ಲ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಅವಲೋಕನ ಆಗಬೇಕಿತ್ತು. ಈವರೆಗೆ ಎಲ್ಲಿ ಅಂತ ಅವಲೋಕನ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ಒಬ್ಬ ವ್ಯಕ್ತಿಯ ಹೇಳಿಕೆಯನ್ನೇ ಜನರ ಹೇಳಿಕೆ ಎಂದು ಹೇಳಲಾಗುವುದಿಲ್ಲ. ಸಿದ್ದರಾಮಯ್ಯ ಹೊರತುಪಡಿಸಿ ಬೇರೆ ಯಾರಾದರೂ ಜಾತಿಗಣತಿ ಬಗ್ಗೆ ಮಾತನಾಡಿದ್ದಾರಾ. ಸಾರ್ವಜನಿಕವಾಗಿ ಎಲ್ಲಾದರೂ ಈ ಬಗ್ಗೆ ಚರ್ಚೆಯಾಗಿದೆಯಾ. ಒಬ್ಬ ವ್ಯಕ್ತಿಯ ಬೇಡಿಕೆಯನ್ನು ಬೇಡಿಕೆ ಎನ್ನಲಾಗುತ್ತದೆಯಾ. ಜಾತಿಗಣತಿಗಾಗಿ ಸಿದ್ದರಾಮಯ್ಯ ಸರ್ಕಾರ 180 ಕೋಟಿ ಹಣ ಖರ್ಚು ಮಾಡಿದೆ. ಜನರ ತೆರಿಗೆ ಹಣವನ್ನು ಖರ್ಚು ಮಾಡಿರುವವರು ಜವಾಬ್ದಾರಿ ಹೊತ್ತುಕೊಂಡು ಜಾತಿಗಣತಿ ವರದಿ ಮಂಡನೆ ಮಾಡಬೇಕಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯಲ್ಲಿರುವಾಗಲೇ ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು ಹಾಗು ಅಧಿಕಾರಿಗಳ ಜೊತೆ ಚರ್ಚಿಸಿ ನ್ಯಾಯ ಸಮ್ಮತವಾಗಿ ವರದಿ ಮಂಡನೆ ಮಾಡಬೇಕಿತ್ತು. ಒಂದು ಸೂಕ್ಷ್ಮ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ಸಿದ್ದರಾಮಯ್ಯ ಬಿಡಬೇಕು ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಕಿಡಿಕಾರಿದರು.

Key words: mysore-Union Minister -A Narayanaswamy- against- Siddaramaiah -caste report