ತಹಶೀಲ್ದಾರ್ ಜಗಳದ ಆಡಿಯೋ ವೈರಲ್ ಪ್ರಕರಣ, ಕ್ರಿಮಿನಲ್ ದೂರು ದಾಖಲಿಸಲು ಆದೇಶ.

ಮೈಸೂರು, ಜು.08, 2021 : (www.justkannada.in news ) ವರ್ಗಾವಣೆ ಸಂಬಂಧ ತಹಶೀಲ್ದಾರ್ ಗಳಿಬ್ಬರ ನಡುವೆ ಪೋನ್ ಮೂಲಕ ಮಾತಿನ ಚಕಮಕಿ ಉಂಟಾಗಿದ್ದ ಆಡಿಯೋ ವೈರಲ್ ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ದೂರು ದಾಖಲಿಸಲು ಆದೇಶಿಸಲಾಗಿದೆ.jk
.ಆಯಕಟ್ಟಿನ ಸ್ಥಳಕ್ಕೆ ಬರಲು ಹಾಗೂ ಪ್ರಮುಖ ಸ್ಥಳ ಬಿಡುವ ಸಂಬಂಧ ತಹಶೀಲ್ದಾರ್ ಗಳಿಬ್ಬರ ನಡುವೆ ನಡೆದಿದ್ದ ಮಾತಿನ ಜಗಳದ ಆಡಿಯೋ ಆರ್.ಟಿ.ಐ ಕಾರ್ಯಕರ್ತ ಬಿ.ಎನ್. ನಾಗೇಂದ್ರ ಅವರ ಮೂಲಕ ವೈರಲ್ ಆಗಿ ವಿವಾದ ಉಂಟಾಗಿತ್ತು. ಜತೆಗೆ ಈ ಸಂಬಂಧ ತನಖೆ ನಡೆಸುವಂತೆ ಸಹ ಬಿ.ಎನ್. ನಾಗೇಂದ್ರ ಸರಕಾರಕ್ಕೆ ದೂರು ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಮೈಸೂರು ತಾಲೂಕು ಕಚೇರಿ ತಹಶೀಲ್ದಾರ್ ರಮೇಶ್ ಬಾಬು ಹಾಗು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೇಣುಕುಮಾರ್ ನಡುವಿನ ಸಂಭಾಷಣೆ. ಹಾಸನ ಜಿಲ್ಲೆಗೆ ವರ್ಗಾವಣೆಗೊಂಡಿದ್ದರಿಂದ ಬೇಸರಗೊಂಡ ರೇಣುಕುಮಾರ್, ರಮೇಶ್ ಬಾಬು ಅವರಿಗೆ ಕರೆ ಮಾಡಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.
ಈ ವೈರಲ್ ಆಡಿಯೋದಲ್ಲಿ ಜೆಡಿಎಸ್ ಸಚಿವರುಗಳ ಹೆಸರನ್ನು ಸಹ ಉಲ್ಲೇಖಿಸಲಾಗಿತ್ತು . ಜತೆಗೆ ರೇಣುಕುಮಾರ್, ತಾವು ಜೆಡಿಎಸ್ ಕಾರ್ಯಕರ್ತ ಎಂದಿದ್ದ ಹೇಳಿಕೆ, ಪರಸ್ಪರ ದೋಷಾರೋಪಣೆ ಹಾಗೂ ಆಣೆ ಪ್ರಮಾಣ, ಮಾತಿನ ವರಸೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇದು ತನಿಖೆಗೂ ಸಹ ಅದೇಶಿಸ್ಪಟ್ಟಿತ್ತು.
ಇದೀಗ, ವೈ.ಎಂ. ರೇಣುಕುಮಾರ್, ಹಿಂದಿನ ತಹಶೀಲ್ದಾರ್, ಮೈಸೂರು ತಾಲ್ಲೂಕು ಇವರು ಜೆ.ಡಿ.ಎಸ್. ರಾಜಕೀಯ ಪಕ್ಷದ ಕಾರ್ಯಕರ್ತರೆಂದು ದೂರವಾಣಿಯಲ್ಲಿ ಮಾತನಾಡಿರುವ ಆರೋಪದ ಬಗ್ಗೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೂಡಲೇ ಅನುಬಂಧ 1-4 ರ ದೋಷಾರೋಪಣಾ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಹಾಗೂ ಆಪಾದನೆಯ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪುಕರಣವನ್ನು ಸಹ ದಾಖಲಿಸುವಂತೆ ಮೈಸೂರು ಜಿಲ್ಲಾಧಿಕಾರಿಗೆ, ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಎಂ.ಎಸ್.ರಶ್ಮಿ ಪತ್ರ ಬರೆದಿದ್ದರು. ಇದರನ್ವಯ, ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಉಪವಿಭಾಗಾಧಿಕಾರಿಗೆ ಪತ್ರ ಬರೆದು ರೇಣುಕುಮಾರ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವರದಿ ನೀಡುವಂತೆ ಆದೇಶಿಸಿದ್ದರು.

key words : mysore-thahasidar-auido-viral-criminal-case-dc-office